ದಾಬಸ್ಪೇಟೆ: ಭಾರತೀಯ ಅಧ್ಯಾತ್ಮಿಕ ಪರಂಪರೆ, ಸಂಸ್ಕೃತಿ ಉಳಿವಿಗೆ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದ್ದು, ಶಂಕರಾಚಾರ್ಯರು ಪ್ರತಿಪಾದಿಸಿದ್ದ ಸಿದ್ಧಾಂತ ಮನುಕುಲದ ಒಳಿತಿನ ಆಶಯ ಹೊಂದಿದ್ದವು. ದೇಶದಲ್ಲಿ ಶಾಂತಿ, ಸೌಹಾರ್ದತೆಗೆ ಧಾರ್ಮಿಕ ಚಿಂತನೆಗಳ ಅಡಿಪಾಯ ಒದಗಿಸಿದ್ದರು ಎಂದು ಕನ್ನಿಕಾ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ನಟರಾಜ್ ಶಾಸ್ತ್ರಿಗಳು ಹೇಳಿದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಶಂಕರಚಾರ್ಯರು ತಮ್ಮ ಜೀವಿತಾವಧಿಯ ಅಲ್ಪ ಅವಧಿಯಲ್ಲೇ ಅಗಾಧ ಪಾಂಡಿತ್ಯ ಬೆಳೆಸಿಕೊಂಡು ಇಡೀ ವಿಶ್ವದಲ್ಲೇ ಅಪ್ರತಿಮ ಸಾಧನೆ ಮಾಡಿದರು. ಶಂಕರರು ಒಂದು ವರ್ಗಕ್ಕೆ, ಒಂದು ಪಂಗಡಕ್ಕೆ ಸೀಮಿತರಾಗಿಲ್ಲ. ಇಡೀ ಹಿಂದೂ ಸಮಾಜಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದರು.
ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಜಯಂತಿ ಮಾತನಾಡಿ, ಶಂಕರಾಚಾರ್ಯರು 8ನೇ ವಯಸ್ಸಿಗೆ ನಾಲ್ಕು ವೇದಗಳ ಅಧ್ಯಯನ ಪೂರೈಸಿ, 12ನೇ ವರ್ಷಕ್ಕೆ ನಾಲ್ಕು ವೇದಗಳ ಭಾಷ್ಯ ಬರೆದು ವೇದಗಳನ್ನು ಸರಳ ಭಾಷೆಯಲ್ಲಿ ಜನತೆಗೆ ತಲುಪಿಸಲು ಪ್ರಯತ್ನಿಸಿದರು ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘದ ಉಪಾಧ್ಯಕ್ಷ ನರಸಿಂಹ ರಾಜುಗುಪ್ತ, ಖಜಾಂಚಿ ಶೇಖರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಾಬಸ್ಪೇಟೆ ಪಟ್ಟಣದ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಸಂಘದಿಂದ ಜಗದ್ಗುರು ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು.