ಜಗಳೂರು ಪಪಂ ಅಧ್ಯಕ್ಷರಾಗಿ ಬಿಜೆಪಿ 15ನೇ ವಾರ್ಡ್ ಸದಸ್ಯ ನವೀನ್ ಕುಮಾರ್, ಉಪಾಧ್ಯಕ್ಷರಾಗಿ 2ನೇ ವಾರ್ಡ್ ಸದಸ್ಯ ಲೋಕಮ್ಮ ಓಬಳೇಶ್ ಅವಿರೋಧವಾಗಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ
ಕನ್ನಡಪ್ರಭ ವಾರ್ತೆ ಜಗಳೂರು
ಜಗಳೂರು ಪಪಂ ಅಧ್ಯಕ್ಷರಾಗಿ ಬಿಜೆಪಿ 15ನೇ ವಾರ್ಡ್ ಸದಸ್ಯ ನವೀನ್ ಕುಮಾರ್, ಉಪಾಧ್ಯಕ್ಷರಾಗಿ 2ನೇ ವಾರ್ಡ್ ಸದಸ್ಯ ಲೋಕಮ್ಮ ಓಬಳೇಶ್ ಅವಿರೋಧವಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯಿತಿ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ಕೆ.ಎಸ್.ನವೀನ್ ಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಬಿ.ಲೋಕಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಇವರ ಹೆಸರು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಸೇರಿದಂತೆ ಎಲ್ಲ ನಾಯಕರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಪಟ್ಟಣದ ಪ್ರಗತಿಗೆ ಶ್ರಮಿಸುತ್ತೇನೆ. ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನೂತನ ಅಧ್ಯಕ್ಷ ನವೀನ್ ಆಯ್ಕೆ ಎಲ್ಲರ ಒಮ್ಮತದ ತೀರ್ಮಾನವಾಗಿದೆ. ಪಕ್ಷದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅವನ್ನೆಲ್ಲಾ ಬದಿಗೊತ್ತಿ ಒಮ್ಮತದಿಂದ ಅವಿರೋಧವಾಗಿ ನವೀನ್ ಅವರನ್ನು ಆಯ್ಕೆ ಮಾಡಿದ್ದೇವೆ. ಎಲ್ಲರ ವಿಶ್ವಾಸ ಗಳಿಸಿ ಜನ ಮೆಚ್ಚುವಂತಹ ಕಾರ್ಯಮಾಡಿ ಎಂದು ಸಲಹೆ ನೀಡಿದರು.
ಬಿಜೆಪಿ ಸದಸ್ಯರ ಬಹುಮತ:
ಮಾಜಿ ಶಾಸಕ ಎಚ್.ಪಿ.ರಾಜೇಶ್, ಅವಿರೋಧವಾಗಿ ಆಯ್ಕೆಯಾಗಿರುವ ನವೀನ್, ಲೋಕಮ್ಮ ಅವರಿಗೆ ಅಭಿನಂದನೆ ಸಲ್ಲಿಸಿ, ಎಲ್ಲ 11 ಜನ ಸದಸ್ಯರಿಗೂ ಅಧ್ಯಕ್ಷ, ಉಪಾಧ್ಯಕ್ಷರಾಗುವ ಅರ್ಹತೆಯಿತ್ತು. ವರಿಷ್ಠರ ಸೂಚನೆ ಮೇರೆಗೆ ಒಮ್ಮತದ ತೀರ್ಮಾನದಂತೆ ಆಯ್ಕೆ ಮಾಡಿದ್ದೇವೆ. ಎಲ್ಲರಿಗೂ ಅಧ್ಯಕ್ಷರಾಗುವ ಉತ್ಸಾಹ ಇದ್ದೇ ಇರುತ್ತೆ. ಬಿಜೆಪಿ ಸದಸ್ಯರ ಬಹುಮತವಿದೆ. ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಡೆಂಘೀ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜಶೇಖರ್ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಡಿ.ವಿ.ನಾಗಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಮಾಜಿ ಪಪಂ ಅಧ್ಯಕ್ಷ ನಾಗರಾಜ್, ಸತೀಶ್ನಾಯ್ಕ್, ಧರ್ಮಾ ನಾಯ್ಕ್, ಲೋಕೇಶ್, ಮಹೇಶ್, ಜೆಡಿಎಸ್ ಮುಖಂಡರಾದ ಮೋಹನ್, ಲುಕ್ಮಾನ್ ಉಲ್ಲಾ ಖಾನ್, ಕೌಸರ್, ಮಂಜಮ್ಮ, ಅಶೋಕ್, ಎ.ಎಂ. ಮರುಳಾರಾಧ್ಯ, ಸುನೀಲ್, ಸದಸ್ಯರಾದ ಎಂಎಲ್ಎ ತಿಪೇಸ್ವಾಮಿ, ದೇವರಾಜ್, ಪಾಪಲಿಂಗಪ್ಪ, ನಿರ್ಮಲಾ ಕುಮಾರಿ, ಸರೋಜಮ್ಮ, ಲೋಕಮ್ಮ, ರೇವಣಸಿದ್ದಪ್ಪ, ಲಲಿತಾ ಶಿವಣ್ಣ ಸೇರಿದಂತೆ ಮತ್ತಿತರರುಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.