ಆಲೂರಿನಲ್ಲಿ ಜಗಜೀವನ್‌ರಾಂ ಜಯಂತಿ: ವೇದಿಕೆಗೆ ಕರೆಯದ್ದಕ್ಕೆ ದಲಿತ ಮುಖಂಡರ ತಗಾದೆ

KannadaprabhaNewsNetwork |  
Published : Apr 06, 2025, 01:48 AM IST
5ಎಚ್ಎಸ್ಎನ್21 : ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ವಾಗ್ವಾದದಲ್ಲಿ ತೊಡಗಿರುವ ಸಮುದಾಯದ ಮುಖಂಡರು. | Kannada Prabha

ಸಾರಾಂಶ

ತಾಲೂಕು ಆಡಳಿತದವರು ಕಾರ್ಯಕ್ರಮವನ್ನು ಬೇಕಾಬಿಟ್ಟಿ ಆಯೋಜಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದೆ ಕಾರ್ಯಕ್ರಮ ಆರಂಭಿಸಿದ್ದು ಅಂಬೇಡ್ಕರ್ ರವರಿಗೆ ಮಾಡಿದ ಅವಮಾನವಾಗಿದೆ.

ಕನ್ನಡಪ್ರಭ ವಾರ್ತೆ ಆಲೂರು

ಬಾಬು ಜಗಜೀವನ್ ರಾಮ್ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜದ ಹಾಗೂ ಸ್ಥಳೀಯ ಮುಖಂಡರನ್ನು ವೇದಿಕೆಗೆ ಕರೆಯದ ಕಾರಣ ಸಿಟ್ಟಿಗೆದ್ದ ಮುಖಂಡರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಿತು.

ಶಾಸಕರು ತಡವಾಗಿ ಬರುವುದಾಗಿ ತಿಳಿಸಿದ ಕಾರಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ತಾಲೂಕು ಆಡಳಿತ ಕೇವಲ ತಹಸೀಲ್ದಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಯನ್ನು ಮಾತ್ರ ವೇದಿಕೆಗೆ ಆಹ್ವಾನಿಸಿದರು. ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸಮಾಜದ ಹಿರಿಯ ಮುಖಂಡರನ್ನಾಗಲಿ ಹಾಗೂ ಇತರೆ ಸಮಾಜದ ಯಾವುದೇ ಮುಖಂಡರನ್ನಾಗಲಿ ವೇದಿಕೆಗೆ ಆಹ್ವಾನಿಸದ ಕಾರಣ ರೊಚ್ಚಿಗೆದ್ದ ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ವೆಂಕಟಯ್ಯ,ಜೆಡಿಎಸ್ ಮುಖಂಡ ಕೆ.ಎಸ್. ಮಂಜೇಗೌಡರು, ಇದಕ್ಕೆಲ್ಲ ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೇ ಮುಖ್ಯ ಕಾರಣ. ಉದ್ದೇಶಪೂರ್ವಕವಾಗಿಯೇ ವೇದಿಕೆಗೆ ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಇದರಿಂದಲೂ ಸಮಾಧಾನಗೊಳ್ಳದ ಮುಖಂಡರು ಮಾತನಾಡಿ, ತಾಲೂಕು ಆಡಳಿತದವರು ಕಾರ್ಯಕ್ರಮವನ್ನು ಬೇಕಾಬಿಟ್ಟಿ ಆಯೋಜಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದೆ ಕಾರ್ಯಕ್ರಮ ಆರಂಭಿಸಿದ್ದು ಅಂಬೇಡ್ಕರ್ ರವರಿಗೆ ಮಾಡಿದ ಅವಮಾನವಾಗಿದೆ. ಬಾಬು ಜಗಜೀವನ್ ರಾಮ್ ರವರು ದೇಶ ಕಂಡ ಮಹಾನ್ ನಾಯಕರಾಗಿದ್ದು, ಕನಿಷ್ಠ ಆಹ್ವಾನ ಪತ್ರಿಕೆಯನ್ನು ಸಹ ಮಾಡಿಸಿಲ್ಲ. ಇವರಿಗೆ ಆಹ್ವಾನ ಪತ್ರಿಕೆಯನ್ನು ಮಾಡಿಸಲು ಹಣವಿಲ್ಲ ಎಂದಿದ್ದರೆ ಆಹ್ವಾನ ಪತ್ರಿಕೆಯನ್ನು ನಾವೇ ಮಾಡಿಸಿ ಕೊಡುತ್ತಿದ್ದೆವು. ದೇಶ ಕಂಡ ಒಬ್ಬ ಮಹಾನ್ ನಾಯಕನ ಕಾರ್ಯಕ್ರಮವನ್ನು ಈ ರೀತಿ ಮಾಡುವುದಾದರೆ ನಾವು ಕಾರ್ಯಕ್ರಮವನ್ನೇ ಬಹಿಷ್ಕರಿಸಿ ಹೊರ ನಡೆಯುವುದಾಗಿ ತಿಳಿಸಿದರು.

ಮಧ್ಯಪ್ರವೇಶಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಸಿಡಿಪಿಒ ಮಲ್ಲೇಶ್ ಮುಖಂಡರನ್ನು ಸಮಾಧಾನಪಡಿಸಿ, ವೇದಿಕೆಗೆ ಎಲ್ಲರನ್ನೂ ಆಹ್ವಾನಿಸಿ ಕಾರ್ಯಕ್ರಮವನ್ನು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರಾರಂಭಿಸಿದರು.

ಶಾಸಕ ಸೀಮೆಂಟ್ ಮಂಜು ತಡವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।
ಡ್ರಗ್ಸ್‌ ದಂಧೆಯಲ್ಲಿ ಕಾಂಗ್ರೆಸ್‌ ನಿಕಟವರ್ತಿಗಳ ಕೈವಾಡ: ಶಾಸಕ ಅಶ್ವತ್ಥನಾರಾಯಣ