ಸಂಡೂರು: ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರು ಭಾನುವಾರ ತಾಲೂಕಿನ ಡಿ.ಅಂತಾಪುರ (ದೊಡ್ಡ ಅಂತಾಪುರ) ಗ್ರಾಮದ ಗ್ಯಾನಪ್ಪ ಎಂಬ ರೈತನ ಹೊಲದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅಪ್ರಕಟಿತ, ಅಪರೂಪದ ಜೈನ ದಾನ ಶಾಸನವೊಂದನ್ನು ಪತ್ತೆ ಹಚ್ಚಿದ್ದಾರೆ.
ದಾನ ಶಾಸನ:
ವಿಜಯನಗರ ಸಾಮ್ರಾಜ್ಯದ ದೊರೆ ಎರಡನೇ ಹರಿಹರನ ಆಳ್ವಿಕೆಯ ಕಾಲದ ದಾನ ಶಾಸನ ಇದಾಗಿದೆ. ಈ ಶಾಸನವು ಕ್ರಿ.ಶ. ೧೩೯೫ (ಶಕ ೧೩೧೭, ಕ್ರೋಧ ಸಂವತ್ಸರ)ಕ್ಕೆ ಸೇರಿದ್ದಾಗಿದೆ. ಶಾಸನದ ಪ್ರಕಾರ ವಿಜಯನಗರದ ಚಿಕ್ಕೋಡೆಯರಂಗಡಿ ಬಸದಿಯಲ್ಲಿದ್ದ ೧೭ನೇ ಜೈನ ತೀರ್ಥಂಕರರಾದ ಕುಂಥುನಾಥರ ಹೆಸರಿನಲ್ಲಿ ಆವಿನಮಡುವಿನ ಅಂತಾಪುರದಲ್ಲಿನ ಹನ್ನೆರಡು ಕೊಳಗ ಬೀಜ ಬಿತ್ತಬಹುದಾದಷ್ಟು ಭೂಮಿಯನ್ನು ತೆರಿಗೆ ವಿನಾಯಿತಿಯೊಂದಿಗೆ ಜೈನ ಬಸದಿಗೆ ದಾನವಾಗಿ ನೀಡಲಾಗಿದೆ.ಶಾಸನದ ಎಡ ಭಾಗದಲ್ಲಿ ಸೂರ್ಯ, ಬಲ ಭಾಗದಲ್ಲಿ ಚಂದ್ರ, ಮಧ್ಯದಲ್ಲಿ ಮುಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಆಸೀನರಾಗಿರುವ ಜೀನಮೂರ್ತಿಯ ಶಿಲ್ಪವಿದೆ. ಸುಮಾರು ಐದು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿರುವ ಈ ಶಾಸನದಲ್ಲಿ ಒಟ್ಟು ೧೩ ಸಾಲುಗಳಿದ್ದು, ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ, ಶಾಸನದಲ್ಲಿ ಉಲ್ಲೇಖಿಸಿರುವ ಕುಂಥುನಾಥರು ೧೭ನೇ ತೀರ್ಥಂಕರರಾಗಿದ್ದು, ಹಂಪಿಯಲ್ಲಿರುವ ದ್ರಾವಿಡ ಶೈಲಿಯ ಗಾಣಿಗಿತ್ತಿ ಜಿನಾಲಯಕ್ಕೂ ಇವರ ಹೆಸರಿನ ನಂಟಿದೆ. ವಿಜಯನಗರದ ದಂಡನಾಯಕ ಇರುಗಪ್ಪನು ಆ ಜಿನಾಲಯವನ್ನು ನಿರ್ಮಿಸಿ, ಅಭಯಾರಣ್ಯವನ್ನು ಕುಂಥುನಾಥರಿಗೆ ದಾನವಾಗಿ ನೀಡಿದ್ದಾನೆ ಎಂಬುದನ್ನು ಅಲ್ಲಿಯ ಶಾಸನಗಳು ದೃಢಪಡಿಸುತ್ತಿವೆ ಎಂದು ತಿಳಿಸಿದರು.
ವಿಜಯನಗರ ತಿರುಗಾಟ ಸಂಶೋಧನಾ ತಂಡವು ಇದೇ ಸ್ಥಳದಲ್ಲಿ ಕುಂಥುನಾಥ ತೀರ್ಥಂಕರರ ಹೆಸರಿನ ಇನ್ನೂ ಎರಡು ಶಾಸನಗಳನ್ನು ಪತ್ತೆ ಹಚ್ಚಿದೆ.
ಮತ್ತಷ್ಟು ಸಂಶೋಧನೆಗೆ ಅವಕಾಶ: