ರಾಣಿಬೆನ್ನೂರು: ಬೆಳೆವಿಮೆ ಯೋಜನೆಯಲ್ಲಿ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಲ್ಲಾ ರೈತಪರ ಸಂಘಟನೆಗಳು ಮತ್ತು ರೈತ ಮಹಿಳಾ ಸಂಘಟನೆಗಳ ವತಿಯಿಂದ ಗುರುವಾರ ನಗರದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚಿತ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶದಿಂದ ಬ್ಯಾಂಕ್ ವ್ಯವಸ್ಥಾಪಕರು ಬೆಳೆವಿಮೆ ತುಂಬಿಸಿಕೊಳ್ಳುವ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರದೆ ನಿರಾಸಕ್ತಿಯಿಂದ ರೈತರೊಂದಿಗೆ ವ್ಯವಹರಿಸುತ್ತಿದ್ದಾರೆ. ಬರಗಾಲದ ಛಾಯೆ ಆಗಮಿಸಿರುವ ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳ ಅಸಹಕಾರ ನೀತಿ ರೈತರ ನೆಮ್ಮದಿ ಹಾಳು ಮಾಡಿದೆ. ಈಗಾಗಲೆ ಬೆಳೆವಿಮೆ ಪ್ರಿಮಿಯಂ ಹಣ ಪಾವತಿ ಮಾಡುವ ದಿನಾಂಕವೂ ಕೂಡ ಸಮೀಪಿಸುತ್ತಿದೆ. ಕೇಂದ್ರದ ಕಟ್ಟುನಿಟ್ಟಿನ ಆದೇಶದಿಂದ ಆರ್ಥಿಕ ತೊಂದರೆಯಲ್ಲಿರುವ ರೈತರು ಯೋಜನೆಯಿಂದ ವಂಚಿತರಾಗಬಾರದು. ಬ್ಯಾಂಕ್ ಅಧಿಕಾರಿಗಳು ಕೇಂದ್ರ ಸರ್ಕಾರದ ಆದೇಶವಿದೆ ಎಂದು ರೈತರಿಗೆ ವಿನಾಃಕಾರಣ ತೊಂದರೆ ನೀಡದೆ ಸಹಕಾರ ನೀಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಬೇಕು. ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿರುವುದರಿಂದ ಎಲ್ಲೆಡೆ ಬರಗಾಲ ಆವರಿಸುತ್ತಿದ್ದು ಸರ್ಕಾರವೇನಾದರೂ ಬರಗಾಲ ಪೀಡಿತ ರಾಜ್ಯ ಅಂತಾ ಘೋಷಿಸಿದರೆ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯ ನಿಯಮದಂತೆ ಇನ್ಸೂರೆನ್ಸ್ ಕಂಪನಿಯವರು ಬೆಳೆವಿಮೆ ಹಣದ 25% ಹಣವನ್ನು ಬೆಳೆವಿಮೆ ಮಾಡಿಸಿದ ರೈತರ ಖಾತೆಗೆ ಜಮಾ ಮಾಡಬೇಕಾಗುತ್ತದೆ ಎಂಬ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಇನ್ಸೂರೆನ್ಸ್ ಕಂಪನಿಯವರು ರೈತರನ್ನು ಸಾಲ ಪಡೆಯದ ರೈತರನ್ನು ಅನುಬಂಧ 1ರಲ್ಲಿ ಕಡ್ಡಾಯಗೊಳಿಸಿರುವ ಸ್ವಯಂ ಘೋಷಣಾ ಪತ್ರದ ಸಲ್ಲಿಕೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಹೇರಿಕೆ ರೈತರನ್ನು ರೊಚ್ಚಿಗೆಬ್ಬಿಸಿದೆ. ಬ್ಯಾಂಕ್ ಸಿಬ್ಬಂದಿ ರೈತರ ಮೇಲೆ ಕರುಣೆ ತೋರಿ ವಿನಾಕಾರಣ ವಿಳಂಬ ನೀತಿ ಅನುಸರಿಸಬಾರದು. ಬೆಳೆವಿಮೆ ಪ್ರಿಮಿಯಂ ಹಣ ತುಂಬಲು ಬಂದ ರೈತರಿಗೆ ಸಹಕಾರ ನೀಡಿ ಅನ್ನದಾತನಿಗೆ ಅನುಕೂಲ ಮಾಡಿಕೊಡಬೇಕು. ಕಾನೂನು ಬಾಹಿರ ನೀತಿಗಳನ್ನು ಹೇಳಿ ರೈತರನ್ನು ಈ ಬೆಳೆವಿಮೆ ಯೋಜನೆಯಿಂದ ಯಾವ ರೈತರನ್ನು ವಂಚಿತರನ್ನಾಗಿ ಮಾಡಬಾರದು. ಪ್ರಸಕ್ತ ಸಂದರ್ಭದಲ್ಲಿ ರೈತರಿಂದ ಹೇರಳವಾಗಿ ಬೆಳೆವಿಮೆ ತುಂಬಿಸಿಕೊಂಡರೆ ಅವರಿಗೆ ಬೆಳೆವಿಮಾ ಹಣ ಮರುಪಾವತಿಸಬೇಕಾಗುತ್ತದೆ ಎಂಬ ಹುನ್ನಾರದಿಂದ ಇನ್ಸೂರೆನ್ಸ್ ಕಂಪನಿಯವರು ಕೇಂದ್ರ ಸರ್ಕಾರದ ಮೇಲೆ ಇಲ್ಲ ಸಲ್ಲದ ಒತ್ತಡ ತಂದು ಬೆಳೆವಿಮೆ ತುಂಬುವ ರೈತರಿಗೆ ಅಡೆತಡೆ ಮಾಡುತ್ತಿದ್ದಾರೆ ಎಂದರು.ಬ್ಯಾಂಕ್ ಸಿಬ್ಬಂದಿ ರೈತರ ಮೇಲೆ ಕರುಣೆ ತೋರಿ ವಿನಾಕಾರಣ ವಿಳಂಬ ನೀತಿ ಅನುಸರಿಸಬಾರದು. ಬೆಳೆವಿಮೆ ಪ್ರಿಮಿಯಂ ಹಣ ತುಂಬಲು ಬಂದ ರೈತರಿಗೆ ಸಹಕಾರ ನೀಡಿ ಅನ್ನದಾತನಿಗೆ ಅನುಕೂಲ ಮಾಡಿಕೊಡಬೇಕು. ಕಾನೂನು ಬಾಹಿರ ನೀತಿಗಳನ್ನು ಹೇಳಿ ರೈತರನ್ನು ಈ ಬೆಳೆವಿಮೆ ಯೋಜನೆಯಿಂದ ಯಾವ ರೈತರನ್ನು ವಂಚಿತರನ್ನಾಗಿ ಮಾಡಬಾರದು. ರೈತರಿಗೆ ಒಂದು ವೇಳೆ ಬ್ಯಾಂಕಿನವರು ವಿನಾಕಾರಣ ಸಹಕಾರ ನೀಡದೆ ಬೆಳೆವಿಮೆ ಯೋಜನೆಯಿಂದ ವಂಚಿತರನ್ನಾಗಿ ಮಾಡಿದರೆ ಆ ಬ್ಯಾಂಕುಗಳ ಮುಂದೆ ನೊಂದ ರೈತರಿಂದ ತಮಟೆ ಚಳುವಳಿ ಮಾಡಿ ಆ ಬ್ಯಾಂಕ್ ರೈತವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುವುದು ಎಂದು ಎಚ್ಚರಿಸಿದರು.
ವಿವಿಧ ರೈತಪರ ಸಂಘಟನೆಗಳ ಕಾರ್ಯಕರ್ತರು, ರೈತ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.