ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗುರುವಾರ ನಡೆದ ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಬಾಗಲಕೋಟೆಯಿಂದ ವಿಡಿಯೋ ವರ್ಚುವಲ್ ಮೂಲಕ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ್ ಅವರು ಭಾಗಿಯಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲೆಗೆ ಸಂಬಂಧಿಸಿದ ಸ್ವೀಕೃತವಾಗಿ ಅರ್ಜಿಗಳನ್ನು ಆಲಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದ ಒಟ್ಟು 11 ಅಹವಾಲುಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ 4 ಅರ್ಜಿಗಳು ಇತ್ಯರ್ಥಗೊಂಡವು. ಮುಧೋಳ ತಾಲೂಕಿನ ಇಂಗಳಿ ಗ್ರಾಮದ ರಕ್ಷಿತಾ ಲಕ್ಷ್ಮಣ ಮತ್ತು ಇತರರು ಸೇರಿ ಜಮೀನಿಗೆ ದಾರಿ ಮತ್ತು ಸೀಡಿ ಕಾಮಗಾರಿ ಕ್ರೀಯಾಯೋಜನೆಯಲ್ಲಿ ಸೇರಿಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಕ್ಷಣ ಇತ್ಯರ್ಥಪಡಿಸಲಾಯಿತು.ಶಿವಯ್ಯ ಅಯ್ಯಪ್ಪ ಬೂದಿಹಾಳ ಮತ್ತು ರಾಮಪ್ಪ ಲೆಂಕಪ್ಪ ದೊಡ್ಡಮನಿ ಅವರು ಬೀಳಗಿ ಮತ್ತು ಬಾದಾಮಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಿವೃತ್ತರಾದ ಹಲವು ಕಾರ್ಯದರ್ಶಿ, ಎಸ್.ಡಿ.ಎ ಹಾಗೂ ಪಿಡಿಒಗಳಿಗೆ ಹಳೆಯ ಪಿಂಚಣಿ ಮಂಜೂರು ಕುರಿತು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪಂಚಾಯತ್ ರಾಜ್ ಇಲಾಖೆಯಿಂದ ತಕ್ಷಣ ಇತ್ಯರ್ಥಪಡಿಸಲಾಯಿತು. ಲಕ್ಕಪ್ಪ ಪಾಂಡಪ್ಪ ಬಾರ್ಕಿ ಅವರು ಮುಧೋಳ ತಾಲೂಕಿನ ಮಾಚಕನೂರ ಗ್ರಾಮ ಪಂಚಾಯತಿ ಕಚೇರಿಯ ಸಿಪಾಯಿ ಎಂದು ಅನುಮೋದನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸಹ ಇತ್ಯರ್ಥಪಡಿಸಲಾಯಿತು.
ಜನತಾ ದರ್ಶನದ ವರ್ಚುವಲ್ ಕಾರ್ಯಕ್ರಮದಲ್ಲಿ ಜಿಪಂ ಸಿಇಒ, ಎಸ್ಪಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಹಸೀಲ್ದಾರ್ ರು ಉಪಸ್ಥಿತರಿದ್ದರು.