ಹೊಸ ವರ್ಷದಿಂದ ತಾಲೂಕು ಮಟ್ಟದಲ್ಲೂ ಜನತಾ ದರ್ಶನ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, ಸರ್ಕಾರದ ಹಂತದಲ್ಲಿ ಪರಿಹರಿಸಬೇಕಾದ ಮತ್ತು ನ್ಯಾಯಾಲಯ, ಪಾಲಸಿ ಸಂಬಂಧಿತ ಅಹವಾಲು ಹೊರತುಪಡಿಸಿ ಬಹುತೇಕ ಅಹವಾಲುಗಳನ್ನು ಸ್ಥಳಿಯವಾಗಿ ಪರಿಹರಿಸಲಾಗಿದೆ. ಜನವರಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಹಂತದಲ್ಲಿ ಜನತಾ ದರ್ಶನ ಆಯೋಜಿಸಲಾಗುವುದು ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಧಾರ

ಬರಗಾಲ ಸ್ಥಿತಿ ತೀವ್ರವಾಗುವ ಸಂಭವದ ಹಿನ್ನೆಲೆ - ಅಧಿಕಾರಿಗಳು ಎಚ್ಚರಗೊಳ್ಳಿ

ಜಿಲ್ಲಾ ಜನತಾ ದರ್ಶನದಲ್ಲಿ ಸಚಿವ ಸಂತೋಷ ಲಾಡ್

ಕನ್ನಡಪ್ರಭ ವಾರ್ತೆ ಧಾರವಾಡ

ಜನವರಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಹಂತದಲ್ಲಿ ಜನತಾ ದರ್ಶನ ಆಯೋಜಿಸಲಾಗುವುದು ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, ಸರ್ಕಾರದ ಹಂತದಲ್ಲಿ ಪರಿಹರಿಸಬೇಕಾದ ಮತ್ತು ನ್ಯಾಯಾಲಯ, ಪಾಲಸಿ ಸಂಬಂಧಿತ ಅಹವಾಲು ಹೊರತುಪಡಿಸಿ ಬಹುತೇಕ ಅಹವಾಲುಗಳನ್ನು ಸ್ಥಳಿಯವಾಗಿ ಪರಿಹರಿಸಲಾಗಿದೆ ಎಂದು ಶನಿವಾರ ಇಲ್ಲಿಯ ಜಿಪಂ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಳೆದ ಸೆಪ್ಟೆಂಬರನಿಂದ ಇಲ್ಲಿ ವರೆಗೆ ಜಿಲ್ಲೆಯಲ್ಲಿ ಮೂರು ಜನತಾ ದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರಿಂದ ಸುಮಾರು 730 ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 650 ಅಹವಾಲುಗಳನ್ನು ಇತ್ಯರ್ಥಡಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಹರಿಸಲು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ. ಜಿಲ್ಲೆಯಲ್ಲಿ ಜನತಾ ದರ್ಶನ ಯಶಸ್ವಿಯಾಗಿ ಜರುಗುತ್ತಿದ್ದು, ಸಮಸ್ಯೆ ಅಹವಾಲುಗಳ ಸಲ್ಲಿಕೆ ಕಡಿಮೆ ಆಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಮತ್ತು ಬಾಧಿತ ವ್ಯಕ್ತಿಗಳಿಗೆ ಇನ್ನೂ ಅನುಕೂಲವಾಗಿ, ಅವರ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಲು ಸಹಾಯವಾಗುವಂತೆ ಹೊಸ ವರ್ಷದಿಂದ ತಾಲೂಕು ಮಟ್ಟದಲ್ಲಿ ಜನತಾದರ್ಶನ ಆಯೋಜಿಸಲಾಗುತ್ತದೆ ಎಂದರು.

ಹಿಂದೆಂದೂ ರಾಜ್ಯ ಕಾಣದ ಬರ ಪರಿಸ್ಥಿತಿ ರಾಜ್ಯದಲ್ಲಿ ಬರುವ ಸಾಧ್ಯತೆ ಇದೆ. ಇದು ಮುಂದಿನ ಆರು ತಿಂಗಳಲ್ಲಿ ಇನ್ನೂ ತೀವ್ರವಾಗುವ ಸಂಭವವಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಚುರುಕಾಗಿ ಪ್ರವೃತ್ತರಾಗಬೇಕು. ಮುಂದಿನ ಆರು ತಿಂಗಳು ಕುಡಿಯುವ ನೀರು, ಮೇವು, ಉದ್ಯೋಗ ಸಮಸ್ಯೆ ಬರಬಹುದು. ಇದಕ್ಕೆ ಈಗಿನಿಂದಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಬೋರ್‌ವೆಲ್‌ ಕೊರೆಸಲು ಕ್ರಮವಹಿಸಬೇಕು. ಕುಡಿಯುವ ನೀರು ಸಮಸ್ಯೆ ಇರುವ ಸಂಭವನೀಯ ಪ್ರದೇಶ ಗುರುತಿಸಿ, ಅಲ್ಲಿ ಖಾಸಗಿ ಬೋರ್‌ವೆಲ್‌ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಮಾಡಿ, ಅವರಿಗೆ ಮುಂಚಿತವಾಗಿ ಆದೇಶ ನೀಡಲು ಸಚಿವರು ಸೂಚಿಸಿದರು.

ಬರಗಾಲ ಸಂದರ್ಭದಲ್ಲಿ ಜಾನುವಾರಗಳಿಗೆ ಮೇವು ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಮೇವು ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ, ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪ ಪೊಲೀಸ್‌ ಆಯುಕ್ತ ರಾಜೀವ್‌ ಎಂ., ಪೊಲೀಸ್‌ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಡಿಎಚ್ಒ ಡಾ. ಶಶಿ ಪಾಟೀಲ, ಡಾ. ಕಿರಣ ಕುಮಾರ ಮತ್ತಿತರರು ಇದ್ದರು.

ಮಹಾನಗರ ಸೇರಿದಂತೆ ವಿವಿಧ ತಾಲೂಕುಗಳ ಸಾರ್ವಜನಿಕರು ಜನತಾದರ್ಶನದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

177 ಅರ್ಜಿ:

ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವರಿಗೆ ಸುಮಾರು 177 ಅಹವಾಲುಗಳನ್ನು ಸಲ್ಲಿಸಿದರು. ಹೆಸ್ಕಾಂ 7, ಉದ್ಯೋಗ ಇಲಾಖೆ 3, ಸಹಕಾರಿ ಇಲಾಖೆ 3, ಸಾರಿಗೆ ಇಲಾಖೆ 3, ವಸತಿ ಇಲಾಖೆ 7, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 10, ಕಾರ್ಮಿಕ ಇಲಾಖೆ 5, ಶಾಲಾ ಶಿಕ್ಷಣ ಇಲಾಖೆ 10, ಲೋಕೋಪಯೋಗಿ ಇಲಾಖೆ 2, ಸಮಾಜ ಕಲ್ಯಾಣ ಇಲಾಖೆ 3, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 3, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ 4, ಆರೋಗ್ಯ ಇಲಾಖೆ 3, ಕ್ರೀಡಾ ಇಲಾಖೆ 3, ಅಲ್ಪಸಂಖ್ಯಾತರ ಇಲಾಖೆ 1, ಗೃಹ ಇಲಾಖೆ 3, ಮಹಿಳಾ ಮತ್ತು ಮಕ್ಜಳ ಅಭಿವೃದ್ದಿ ಇಲಾಖೆ 2, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3, ಮಹಾನಗರಪಾಲಿಕೆ 44, ನೋಂದಣಿ ಇಲಾಖೆ 1, ಕಂದಾಯ ಇಲಾಖೆ 54 ಸೇರಿದಂತೆ ಒಟ್ಟು 177 ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು. 177 ಅಹವಾಲುಗಳಲ್ಲಿ ಅಣ್ಣಿಗೇರಿ 3, ಧಾರವಾಡ 86, ಹುಬ್ಬಳ್ಳಿ ನಗರ 33, ಹುಬ್ಬಳ್ಳಿ ಗ್ರಾಮೀಣ 16, ಅಳ್ನಾವರ 2, ಕಲಘಟಗಿ 16, ಕುಂದಗೋಳ 8 ಮತ್ತು ನವಲಗುಂದದಿಂದ 13 ಅಹವಾಲುಗಳು ಸಲ್ಲಿಕೆ ಆಗಿವೆ.

₹50 ಸಾವಿರ ಘೋಷಣೆ:

ವಿಕಲಚೇತನ ಮಗಳ ಫೋಟೊ‌ ಹಿಡಿದು ಜನತಾ ದರ್ಶನಕ್ಕೆ ಬಂದಿದ್ದ ಮುಮ್ಮಿಗಟ್ಟಿಯ ಪ್ರತಿಭಾ ದೇವರದವರ ಎಂಬ ಮಹಿಳೆಗೆ ಸಚಿವ ಸಂತೋಷ ಲಾಡ್ ತನ್ನ ಲಾಡ್ ಫೌಂಡೇಶನ್ ವತಿಯಿಂದ ₹50 ಸಾವಿರ ನೀಡಲು ಸೂಚಿಸುವ ಮೂಲಕ ಮಾನವೀಯತೆ ಮೆರೆದರು.

ಪುತ್ರಿ ಕವಿತಾ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಒಳಗಾದರೂ ಹಾಸಿಗೆ ಹಿಡಿದಿದ್ದು ಕೈ-ಕಾಲುಗಳು ಸೆಟೆದಿವೆ. ಇದನ್ನು ಫೋಟೋದಲ್ಲಿ ಗಮನಿಸಿ ಮರುಗಿದ ಲಾಡ್‌ ಆರ್ಥಿಕ ಸಹಾಯ ಮಾಡಿದರು.

Share this article