- ಜನಿವಾರ ತೆಗಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ । ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ, ಬಿಜೆಪಿ ನಿಯೋಗ ಜಿಲ್ಲಾಡಳಿತಕ್ಕೆ ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸಿದ್ದ ಪವಿತ್ರ ಜನಿವಾರಕ್ಕೆ ಅವಮಾನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ ಹಾಗೂ ಬಿಜೆಪಿ ಯುವ ಮುಖಂಡರ ನೇತೃತ್ವದ ನಿಯೋಗ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಂಘದ ಜಿಲ್ಲಾ ಪದಾಧಿಕಾರಿಗಳು, ಬಿಜೆಪಿ ಯುವ ಮುಖಂಡರ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರನ್ನು ಭೇಟಿ ಮಾಡಿ, ಬೇಡಿಕೆಗಳನ್ನು ತಿಳಿಸಲಾಯಿತು.
ಇದೇ ವೇಳೆ ಸಮಾಜದ ಮುಖಂಡರು ಮಾತನಾಡಿ, ಶಿವಮೊಗ್ಗ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರಧಾರಿ ವಿದ್ಯಾರ್ಥಿಗಳಿಗೆ ಮುಜುಗರಕ್ಕೀಡು ಮಾಡಿ, ಜನಿವಾರ ಸಂಸ್ಕೃತಿಯನ್ನು ಅವಮಾನಿಸಲಾಗಿದೆ. ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆಗೆ ಬಂದಿದ್ದ ಸುಚ್ಛಿವೃತ್ ಕುಲಕರ್ಣಿ ಹೆಸರಿನ ವಿದ್ಯಾರ್ಥಿಯ ಜನಿವಾರ ತುಂಡರಿಸಿ, ಸಿಇಟಿ ಪರೀಕ್ಷೆಗೆ ಬರೆಯುವಂತೆ ಹೇಳಿದ್ದು ಅಕ್ಷಮ್ಯ ಎಂದು ಆಕ್ಷೇಪಿಸಿದರು.ಮಕ್ಕಳಿಗೆ ಸಿಟಿಇ ಪರೀಕ್ಷೆ ಬರೆಯಲು ಅವಕಾಶ ನೀಡದೇ, ಅಂತಹವರ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದ್ದನ್ನು ಇಡೀ ರಾಜ್ಯದ ಜನತೆ ಸಹಿಸುವುದಿಲ್ಲ. ಇಂತಹ ಘಟನೆಯಿಂದ ಜನಿವಾರಧಾರಿಗಳಿಗೆ, ಸಂಪ್ರದಾಯಸ್ಥರಿಗೆ ತೀವ್ರ ನೋವಾಗಿದೆ. ಜನಿವಾರಧಾರಿಗಳಿಗೆ ಪವಿತ್ರ ಜನಿವಾರವು ಕೇವಲ ದಾರ, ದಾರದ ಎಳೆಗಳಲ್ಲ. ಅದು ಬ್ರಹ್ಮೋಪದೇಶ, ಪರಂಪರೆ, ಶಕ್ತಿ, ಘನತೆ, ಶ್ರೇಷ್ಠ, ಭಕ್ತಿ, ಅಸ್ತಿತ್ವ, ಶ್ರದ್ಧೆ, ಗೌರವ, ಪ್ರಬಲ ಹಕ್ಕಾಗಿದೆ. ಏಕತೆ ಮತ್ತು ಕುಲದ ಗುರುತು ಸಹ ಆಗಿದೆ. ಇಂತಹ ಅವಿಭಾಜ್ಯ ಅಂಗವಾಗಿ ಪವಿತ್ರ ಜನಿವಾರಕ್ಕೆ ಅಪಮಾನಿಸಿದವರನ್ನು ದೈವಜ್ಞ ಬ್ರಾಹ್ಮಣ ಸಮಾಜ ಖಂಡಿಸುತ್ತದೆ. ಕೆಲ ಕೇಂದ್ರಗಳಲ್ಲಿ ತಾಳಿ, ಕಿವಿಯೋಲೆ, ಕಾಲುಂಗುರವನ್ನೂ ಬಿಚ್ಚಿಸಿದ್ದಾರೆ. ಯಾರೇ ಆಗಿರಲಿ ಅಂತಹವರ ವಿರುದ್ಧ ಮೊದಲು ಕಠಿಣ ಕಾನೂನು ಕ್ರಮವಾಗಬೇಕು ಎಂದರು.
ಜಾತಿಗಣತಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೂ ಅನ್ಯಾಯ:ಕಾಂತರಾಜು ಆಯೋಗದ ವರದಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಜನಸಂಖ್ಯೆಯನ್ನು ರಾಜ್ಯದಲ್ಲಿ ಕೇವಲ 80 ಸಾವಿರ ಇರುವುದಾಗಿ ಉಲ್ಲೇಖಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಇದೆ. ಗಣತಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜವನ್ನು ಅತ್ಯಂತ ಕಡಿಮೆ ತೋರಿಸಲಾಗಿದೆ. ಈ ಹಿನ್ನೆಲೆ ವರದಿಯನ್ನು ಮರುಪರಿಶೀಲಿಸಬೇಕು. ರಾಜ್ಯದಲ್ಲಿ ಹೊಸದಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜನಗಣತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಈಗಾಗಲೇ ಇತರೆ ಸಮುದಾಯಗಳಿಗೆ ಅನ್ಯಾಯವಾದಂತೆ ದೈವಜ್ಞ ಬ್ರಾಹ್ಮಣ ಸಮಾಜಕ್ಕೂ ಗಣತಿಯಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.
ಬಿಜೆಪಿ ಯುವ ಮುಖಂಡ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರಿಗೆ ಮನವಿ ಅರ್ಪಿಸಲಾಯಿತು. ಸಂಘದ ಮಂಜುನಾಥ ಬಿ. ಶೇಟ್, ರಾಘವೇಂದ್ರ ಎಸ್. ಶೇಟ್, ಜಿ.ಬಿ. ಪ್ರವೀಣಕುಮಾರ ಶೇಟ್, ಉಮೇಶ ಎಸ್. ಶೇಟ್, ಮನೋಹರ ಈ. ಶೇಟ್, ರಾಘವೇಂದ್ರ ಎಂ. ಶೇಟ್, ಕೇಶವ ಎಂ.ಶೇಟ್, ಶ್ರೀನಾಥ ಎನ್.ಪಾಲನಕರ್, ರಾಜು ಆರ್. ಶೇಟ್, ಎನ್.ಎಂ. ನಾಗರಾಜ, ಅಶೋಕ ಸಿ. ಶೇಟ್, ಮಾಲತೇಶ ಕೆ.ಎಂ.ಶೇಟ್, ಮಾರುತಿ ಎಸ್.ಶೇಟ್, ರಾಘವೇಂದ್ರ ಡಿ.ಶೇಟ್ ಇತರರು ಇದ್ದರು.- - -
(ಬಾಕ್ಸ್) * ಉನ್ನತ ಶಿಕ್ಷಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಜನಿವಾರಧಾರಿಗಳಿಗೆ ಸಂವಿಧಾನದಡಿ ಸೂಕ್ತ, ನ್ಯಾಯಯುತ ರಕ್ಷಣೆ ನೀಡಬೇಕು. ಪವಿತ್ರ ಜನಿವಾರಕ್ಕೆ ಅವಮಾನಿಸಿದ ಸಿಇಟಿ ಪರೀಕ್ಷಾ ಕೇಂದ್ರಗಳ ಅಧಿಕಾರಿ, ಸಿಬ್ಬಂದಿ ವಿರುದ್ಧ ಮೊದಲು ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಜನಿವಾರದ ವಿಚಾರಕ್ಕೆ ಸಿಇಟಿ ಪರೀಕ್ಷೆ ವಂಚಿತ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಉನ್ನತ ಶಿಕ್ಷಣ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.- - -
-22ಕೆಡಿವಿಜಿ1, 2.ಜೆಪಿಜಿ:ದಾವಣಗೆರೆ ಡಿಸಿ ಕಚೇರಿಯಲ್ಲಿ ಮಂಗಳವಾರ ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ ಹಾಗೂ ಬಿಜೆಪಿ ಯುವ ಮುಖಂಡರ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರಿಗೆ ಮನವಿ ಅರ್ಪಿಸಲಾಯಿತು.