ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಜಟ್ಟಿ ಅಗ್ರಹಾರ ಕೆರೆಯು ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಗಂಗಾಪೂಜೆಯನ್ನು ನೆರವೇರಿಸಿದ್ದೇವೆ ಎಂದು ಗ್ರಾಮದ ಶ್ರೀ ವೀರಭದ್ರ ಸೇವಾ ಸಮಿತಿ ಕಾರ್ಯದರ್ಶಿ ಬಿ.ಸುರೇಶ್ ತಿಳಿಸಿದರು.ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಕೆರೆಗೆ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, ಜಟ್ಟಿ ಅಗ್ರಹಾರ ಕೆರೆಯು ಕೋಡಿ ಬಿದ್ದಾಗಲೆಲ್ಲಾ ನಮ್ಮ ಗ್ರಾಮದ ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿಯ ಮತ್ತು ಶ್ರೀ ವೀರಶೈವ ಮಂಡಳಿ ಹಾಗೂ ಅಗ್ರಹಾರದ ಗ್ರಾಮಸ್ಥರೊಂದಿಗೆ ಗಂಗಾಪೂಜೆ ಮಾಡಿ ಭಾಗಿನ ಅರ್ಪಿಸುವುದು ಸಂಪ್ರದಾಯವಾಗಿದ್ದು, ಅನಾಧಿಕಾಲದಿಂದ ನಡೆಸಿಕೊಂಡು ಬರುತ್ತಿದ್ದೇವೆ. ಅದೇ ರೀತಿ ಇಂದು ಸಹ ಗಂಗಾಪೂಜೆ ನೆರವೇರಿಸಿದ್ದೇವೆ ಎಂದರು.ಕ್ರಷರ್ ಬಗ್ಗೆ ಆತಂಕ:
ಜಟ್ಟಿ ಅಗ್ರಹಾರದ ಕೆರೆಯ ಗಂಗಾಪೂಜೆ ಸಂದರ್ಭದಲ್ಲಿ ಅಗ್ರಹಾರ ಕೆರೆಯ ಪಕ್ಕದಲ್ಲಿ ನಡೆಯರುತ್ತಿರುವ ಕ್ರಷರ್ ಮತ್ತು ಅಲ್ಲಿ ಸಿಡಿಸುತ್ತಿರುವ ಡೈನಮೈಟ್ ಬಗ್ಗೆ ಗ್ರಾಮಸ್ಥರು, ಮಹಿಳೆಯರು ಆತಂಕ ವ್ಯಕ್ತಪಡಿಸಿದರು. ಜಟ್ಟಿ ಅಗ್ರಹಾರ ಕೆರೆ ತಾಲೂಕಿನ ದೊಡ್ಡಕೆರೆಗಳಲ್ಲಿ ಒಂದಾಗಿದೆ. ದುರಾದೃಷ್ಟಕರ ಈ ಕೆರೆಯ ಪಕ್ಕದ ಸ್ವಲ್ಪ ದೂರದಲ್ಲಿ ಬಂಡೆ ಕ್ರಷರ್ ನಡೆಯುತ್ತಿದೆ. ಅಲ್ಲಿ ದಿನವೂ ಡೈನಮೈಟ್ ಇಟ್ಟು ಬಂಡೆ ಸಿಡಿಸುತ್ತಿದ್ದಾರೆ. ಇದರಿಂದ ಎಲ್ಲಿ ಅಗ್ರಹಾರದ ಏರಿ ಬಿರುಕುಬಿಡುತ್ತದೋ ಎಂದು ಭಯವಾಗಿದೆ. ಈಗಾಗಲೇ ಏರಿಯಲ್ಲಿ ಅತಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಇನ್ನು ದಿನವೂ ಬಂಡೆಯನ್ನು ಸಿಡಿಸುವುದರಿಂದ ಕೆರೆ ಏರಿಯ ಮುಂದಿನ ಸ್ಥಿತಿ ಏನು ಎನ್ನುವಂತಾಗಿದೆ. ಈಗಲಾದರೂ ಕ್ರಷರ್ರನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಗಂಗಾಪೂಜೆಯಲ್ಲಿ ವೀರಶೈವ ಸಂಘದ ತಾಲೂಕು ಉಪಾಧ್ಯಕ್ಷ ವಿನಯ್ಕುಮಾರ್, ವೀರಭದ್ರಸ್ವಾಮಿ ಸೇವಾ ಸಮಿತಿ ಅದ್ಯಕ್ಷ ಎಸ್.ಸುರೇಂದ್ರಬಾಬು, ವನಿತಾ ರಾಜಶೇಖರ್, ಖಜಾಂಚಿ ಗೀರೀಶ್, ಕಾರ್ಯಕಾರಿ ಮಂಡಳಿ ಸದಸ್ಯರು, ವೀರಶೈವ ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.