ಟೌನ್‌ಶಿಪ್ ವಿರೋಧಿಸಿ 9-11 ಜೆಡಿಎಸ್ ಪಾದಯಾತ್ರೆ

KannadaprabhaNewsNetwork |  
Published : Aug 03, 2026, 01:15 AM IST
 | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಆಗಸ್ಟ್ 9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ 38 ಕಿ.ಮೀ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಆಗಸ್ಟ್ 9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ 38 ಕಿ.ಮೀ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈರಮಂಗಲದಿಂದ ಫ್ರೀಡಂ ಪಾರ್ಕ್‌ವರೆಗೆ ರೈತರ ಜೊತೆ ಪಾದಯಾತ್ರೆ ಮಾಡುತ್ತೇವೆ. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ:

ರೈತರು ಸಂಪೂರ್ಣವಾಗಿ ಈ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಈ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ. ರೈತರ ವಿರುದ್ಧ ಸರ್ಕಾರದ ನಡೆ ಇದೆ. ಹಾಗಾಗಿ ನಾವು ರೈತರ ಪರ ನಿಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದು ನಿಖಿಲ್ ತಿಳಿಸಿದರು.

ಕಳೆದ ಜುಲೈ 30, 31 ಮತ್ತು ಆ.1ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಮ್ಮಜ್ಜಿ ಚನ್ನಮ್ಮ ಅವರ ಅಗಲಿಕೆ ದುಃಖದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲಾಗಿತ್ತು, ಈಗ ಆ. 9ರಿಂದ 11ರವರೆಗೆ 3 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಎಚ್ಡಿಡಿ ಮತ್ತು ಎಚ್ಡಿಕೆ ಭಾಗಿ:

ರಾಮನಗರ ಜಿಲ್ಲೆಯ ಐದು ತಾಲೂಕಿನ ಕಾರ್ಯಕರ್ತರು, ಮುಖಂಡರು ಹಾಗೂ ರೈತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು , ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ.

ರೈತರ ಪರವಾಗಿ ಕಾನೂನು ಹೋರಾಟ:

ಜೊತೆಗೆ ರೈತರ ಪರವಾಗಿ ಕಾನೂನು ಹೋರಾಟವನ್ನೂ ಮಾಡುತ್ತಿದ್ದೇವೆ. ಸೋಮವಾರದಿಂದ ಎಲ್ಲಾ ಫೈಲಿಂಗ್ ಪ್ರಾರಂಭವಾಗುತ್ತಿದೆ. ಯಾವೆಲ್ಲಾ ದಾಖಲಾತಿಗಳನ್ನು ಕೊಡಬೇಕು ಎಂಬುದರ ಕುರಿತು ವಕೀಲರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕೋರ್ಟ್ ಕೂಡ ರೈತರ ಪರವಾಗಿ ನಿಲ್ಲುವ ಭರವಸೆ ಇದೆ ಎಂದು ಹೇಳಿದರು.

ಮೈತ್ರಿ ಹೋರಾಟದ ಬಗ್ಗೆ ಸ್ಪಷ್ಟನೆ:

ಬಿಡದಿ ಟೌನ್‌ಶಿಪ್ ಹಾಗೂ ಕಾವೇರಿ ಹೋರಾಟದ ವಿಚಾರದಲ್ಲಿ ಮೈತ್ರಿಯಲ್ಲಿ ಒಮ್ಮತ ಮೂಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕಾವೇರಿ ಹೋರಾಟ ಮಾಡುವಾಗ ನಮ್ಮ ಅಜ್ಜಿಯ 11ನೇ ದಿನದ ಕಾರ್ಯ ಇತ್ತು. ಇಂತಹ ಸಂದರ್ಭದಲ್ಲಿ ನಾವು ಇವೆಲ್ಲವನ್ನೂ ಮಾತಾಡುವುದಕ್ಕೆ ಆಗುತ್ತಿರಲಿಲ್ಲ. ಹೋರಾಟ, ಪ್ರತಿಭಟನೆ, ಪಾದಯಾತ್ರೆಗಳನ್ನು ಕೆಲವೊಮ್ಮೆ ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ. ಇಲ್ಲಿ ವ್ಯತ್ಯಾಸ ಎನ್ನುವುದು ಏನೂ ಇಲ್ಲ. ಸಂದರ್ಭಕ್ಕೆ ತಕ್ಕಹಾಗೆ ಕೆಲವೊಂದು ಪ್ರತ್ಯೇಕ, ಕೆಲವೊಂದು ಒಟ್ಟಾಗಿ ಹೋರಾಟ ಆಗುತ್ತದೆ. ಬಿಡದಿ ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯ ಯಾರೂ ನಮ್ಮ ಜೊತೆ ಚರ್ಚೆ ಮಾಡಿಲ್ಲ. ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆಯಾಗಲಿ, ನನ್ನ ಜೊತೆಯಾಗಲಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾವೇರಿ ಸರ್ವಪಕ್ಷ ಸಭೆ:

ಇಂದು ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಕುಮಾರಣ್ಣ ಅವರು ಕೂಡ ಸಭೆಗೆ ಹೋಗಿದ್ದಾರೆ. ಎಲ್ಲಾ ಪಕ್ಷದ ಹಿರಿಯ ನಾಯಕರು ಭಾಗಿಯಾಗಿ ಕಾವೇರಿ ವಿಚಾರದಲ್ಲಿ ಚರ್ಚೆ ಮಾಡುತ್ತಿದ್ದಾರೆ. ನಮ್ಮ ನೀರಿನ ಶೇಖರಣೆ, ವಾಡಿಕೆ ಮಳೆ ಹಾಗೂ ರೈತರ ಸಮಸ್ಯೆಗಳು ಚರ್ಚೆ ಆಗಲಿದೆ. ಎಲ್ಲಾ ಆಣೆಕಟ್ಟುಗಳ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಅಂತಿಮವಾಗಿ ರೈತರ ಪರವಾದ ಚರ್ಚೆ, ತೀರ್ಮಾನ ಆಗಲಿ ಎಂದು ಮನವಿ ಮಾಡುತ್ತೇನೆ ಎಂದರು.

ಬಾಕ್ಸ್‌.....

ಆ.13 ಕರ್ನಾಟಕ ಬಂದ್‌ಗೆ ಬೆಂಬಲ:

ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಹಲವಾರು ಸಂಘಟನೆಗಳು, ರೈತಪರ ಹೋರಾಟಗಾರರು ಕರೆ ಕೊಟ್ಟಿದ್ದಾರೆ. ಯಾವಾಗ ಸರ್ಕಾರಗಳು ಸರಿಯಾಗಿ ಸ್ಪಂದಿಸುವುದಿಲ್ಲ ಆಗ ಬಂದ್‌ಗಳು ಆಗುತ್ತವೆ. ಹಾಗಾಗಿ ಅವರ ಜೊತೆಯಲ್ಲಿ ಜೆಡಿಎಸ್ ಕೂಡ ನಿಲ್ಲುತ್ತದೆ. ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಗ್ಗಿದ ಪುಷ್ಯ ಮಳೆ ಅಬ್ಬರ: ನಿಲ್ಲದ ಭದ್ರೆಯ ರೌದ್ರಾವತಾರ
ರಾಜಕೀಯ ಕ್ಷೇತ್ರದಲ್ಲೂ 2ಎ‌ ಮೀಸಲಾತಿ ನೀಡಿ