ಗಡಿಪಾರು ಆದೇಶ ರದ್ದುಪಡಿಸುವಂತೆ ಜೆಡಿಎಸ್ ನಾಯಕರ ಆಗ್ರಹ

KannadaprabhaNewsNetwork |  
Published : Jun 06, 2025, 12:17 AM IST
6ಕೆಆರ್ ಎಂಎನ್ 1.ಜೆಪಿಜಿಸೋಲೂರು ಗ್ರಾಪಂ ಸದಸ್ಯ ರಾಘವೇಂದ್ರರವರ ಗಡಿಪಾರು ಆದೇಶ ರದ್ದು ಪಡಿಸುವಂತೆ ಆಗ್ರಹಿಸಿ ಜೆಡಿಎಸ್ ನಾಯಕರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮನವಿ ಸಲ್ಲಿಸಿದ ಮಾಜಿ ಶಾಸಕರಾದ ಎ.ಮಂಜುನಾಥ್ ಮತ್ತು ಡಾ.ಶ್ರೀನಿವಾಸಮೂರ್ತಿ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿ ರದ್ದುಗೊಳಿಸಿ ಮತ್ತು ವಜಾ ಮಾಡಿ ನೋಟಿಸ್ ಅನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮಾಗಡಿ ತಾಲೂಕಿನ ಸೋಲೂರು ಗ್ರಾಪಂ ಸದಸ್ಯ ಎಚ್.ಪಿ.ರಾಘವೇಂದ್ರ ಅಲಿಯಾಸ್ ರಾಘು ಅವರನ್ನು ಗಡಿಪಾರು ಮಾಡುವ ಆದೇಶ ರದ್ದು ಪಡಿಸುವಂತೆ ಆಗ್ರಹಿಸಿ ಜೆಡಿಎಸ್ ನಾಯಕರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಮಾಜಿ ಶಾಸಕರಾದ ಎ.ಮಂಜುನಾಥ್ ಮತ್ತು ಡಾ.ಶ್ರೀನಿವಾಸಮೂರ್ತಿ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿ ರದ್ದುಗೊಳಿಸಿ ಮತ್ತು ವಜಾ ಮಾಡಿ ನೋಟಿಸ್ ಅನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಶ್ರೀನಿವಾಸಮೂರ್ತಿ, ಸೋಲೂರು ಗ್ರಾಪಂಗೆ ಸದಸ್ಯರಾಗಿ ರಾಘವೇಂದ್ರ ಮೂರು ಬಾರಿ ಆಯ್ಕೆಯಾಗಿದ್ದಾರೆ. ಸೋಲೂರು ಸುತ್ತಮುತ್ತ ಸಮಾಜ ಸೇವೆಯಲ್ಲಿ ನಿರತರಾಗಿದ್ದು, ಎಲ್ಲರ ಕಷ್ಟಗಳಿಗೆ ಸ್ಪಂದಿಸುವಂತಹ ಮನಸ್ಸುಳ್ಳವರಾಗಿದ್ದಾರೆ. ಅವರು ಕೈಗೊಳ್ಳುತ್ತಿರುವ ಸಾಮಾಜಿಕ ಕೆಲಸ ಕಾರ್ಯಗಳನ್ನು ಸಹಿಸದ ಕೆಲವೊಂದು ಸ್ಥಳೀಯ ರಾಜಕೀಯ ಪ್ರೇರಿತ ವ್ಯಕ್ತಿಗಳು ಇವರ ವಿರುದ್ಧ ಸುಳ್ಳು ಆಪಾದನೆ ಎಸಗಿ ದೂರು ನೀಡುವುದು ಮತ್ತು ಅವರನ್ನು ಅನೇಕ ವರ್ಷಗಳಿಂದ ತೇಜೋವಧೆ ಮಾಡುತ್ತಿದ್ದಾರೆ ಎಂದು ದೂರಿದರು.

ಸದಸ್ಯ ರಾಘವೇಂದ್ರ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಗ್ರಾಮದಲ್ಲಿ ಗುಂಪುಗಾರಿಕೆ ಮಾಡುವುದು ಗಲಾಟೆ ಮಾಡಿಸುವುದು ಸಹಚರರೊಂದಿಗೆ ಸೇರಿಕೊಂಡು ಬೆದರಿಕೆ ಹಾಕುವುದು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಧಕ್ಕೆ ಮತ್ತು ನಷ್ಟ ಉಂಟು ಮಾಡುತ್ತಿದ್ದಾರೆ ಎಂಬುದೆಲ್ಲ ಸುಳ್ಳು ಎಂದು ದೂರಿದರು.

ಇಲ್ಲ ಸಲ್ಲದ ಆರೋಪ ಮತ್ತು ಆಪಾದನೆ ಮಾಡಿ ಪೊಲೀಸ್ ಕಾಯಿದೆ ಕಲಂ 55(ಎ), (ಬಿ)ರೀತ್ಯಾ ರಾಮನಗರ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆದೇಶಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ರಾಮನಗರ ಉಪವಿಭಾಗದ ಡಿವೈಎಸ್ಪಿ ಮತ್ತು ಆರಕ್ಷಕ ನಿರೀಕ್ಷಕರು, ಕುದೂರು ಪೋಲಿಸ್ ಠಾಣಾಧಿಕಾರಿಗಳು ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಆದಾಗಿ, ಸದರಿ ಅಧಿಕಾರಿಗಳಿಗೆ ರಾಜಕೀಯ ಒತ್ತಡದಿಂದ ಈ ರೀತಿ ರಾಘವೇಂದ್ರರ ಮೇಲೆ ಆರೋಪ ಹೊರಿಸಿ ಗಡಿ ಪಾರಿಗೆ ಒತ್ತಾಯ ಮಾಡುತ್ತಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿದರು.

ಈ ಹಿಂದೆ ರಾಘವೇಂದ್ರರ ಮೇಲೆ ಅನೇಕ ದೂರುಗಳು ಬಂದಾಗ ಅಂತಹ ಪ್ರಕರಣಗಳು ಈಗಾಗಲೇ ನ್ಯಾಯಾಲಯದಿಂದ ವಜಾಗೊಂಡಿವೆ. ಈಗಿನ ಎಲ್ಲಾ ಆರೋಪ ಮತ್ತು ಆಪಾದನೆಗಳು ಸುಖಾ ಸುಮ್ಮನೆ ಅವರನ್ನು ತೇಜೋವಧೆ ಮಾಡಿ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಹೂಡಿದ್ದಾರೆ ಎಂದು ಆರೋಪಿಸಿದರು.

ರಾಘವೇಂದ್ರರ ಮೇಲೆ ಹೊರಿಸಿರುವ ಕರ್ನಾಟಕ ಪೋಲಿಸ್ ಕಾಯಿದೆ ಕಲಂ 55(ಎ), (ಬಿ) ರೀತ್ಯಾ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿ ರದ್ದುಗೊಳಿಸಬೇಕು. ಜೊತೆಗೆ ನೋಟಿಸನ್ನು ಮುಕ್ತಾಯಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೋವಿಂದರಾಜು, ಅಂಜನಾಪುರ ವಾಸು, ದೊಡ್ಡಿ ಉಮೇಶ್ ಮತ್ತಿತರರಿದ್ದರು.

ಕೋಟ್ ................

ಕಾಂಗ್ರೆಸ್ ನಾಯಕರು ಜೆಡಿಎಸ್‌ ಮುಖಂಡರಿಗೆ ಪೊಲೀಸರಿಂದ ಕಿರುಕುಳ ಕೊಡಿಸುವ ದ್ವೇಷದ ರಾಜಕಾರಣ ನಿಲ್ಲಿಸಬೇಕು. ಅಧಿಕಾರ ದುರ್ಬಳಸಿಕೊಂಡು ಗಡಿಪಾರು ಮಾಡಿಸುವ ಮಟ್ಟಿಗೆ ದ್ವೇಷದ ಸಾಧಿಸುತ್ತಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸೋಲೂರು ಗ್ರಾಪಂ ಸದಸ್ಯ ರಾಘವೇಂದ್ರ ಗಡಿಪಾರು ಆದೇಶ ರದ್ದು ಪಡಿಸುವಂತೆ ಎಸ್ಪಿ ಅವರನ್ನು ಮನವಿ ಮಾಡಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

ಎ.ಮಂಜುನಾಥ್, ಜಿಲ್ಲಾಧ್ಯಕ್ಷರು, ಜೆಡಿಎಸ್‌, ರಾಮನಗರ

6ಕೆಆರ್ ಎಂಎನ್ 1.ಜೆಪಿಜಿ

ಸೋಲೂರು ಗ್ರಾಪಂ ಸದಸ್ಯ ರಾಘವೇಂದ್ರ ಗಡಿಪಾರು ಆದೇಶ ರದ್ದು ಪಡಿಸುವಂತೆ ಆಗ್ರಹಿಸಿ ಜೆಡಿಎಸ್ ನಾಯಕರು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌