ಕನಕಪುರ: ಕಸಬಾ ಹೋಬಳಿ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ಎಂಎಲ್ಸಿಎಸ್.ರವಿ ಅವರ ಭಾವಚಿತ್ರ ಹಾಕಿದ್ದು ಹಾಲಿ ಸಂಸದರಾದ ಡಾ.ಸಿ.ಎನ್ ಮಂಜುನಾಥ್ ಅವರ ಭಾವಚಿತ್ರ ಹಾಕಿಲ್ಲವೆಂದು ಜೆಡಿಎಸ್ ಬೆಂಬಲಿತರು ಆಕ್ಷೇಪಿಸಿದರು.
ಜೆಡಿಎಸ್ ಬೆಂಬಲಿತ ಸದಸ್ಯ ಜಯರಾಮೇಗೌಡ ಮಾತನಾಡಿ, ಕ್ಷೇತ್ರದ ಶಾಸಕರು, ಮಾಜಿ ಸಂಸದರು, ವಿಧಾನಪರಿಷತ್ ಸದಸ್ಯರ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣವಾಗಿರುವುದಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ. ನೀವು ಸಂಸದ ಡಾ. ಮಂಜುನಾಥ್ ಅವರನ್ನು ಕೇಳಿದ್ದರೆ ಅವರು ಕೊಡುತ್ತಿದ್ದರು. ನೂತನ ಕಟ್ಟಡ ನಿರ್ಮಾಣ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಎಸ್.ರವಿ ಅವರ ಸಹಕಾರದಿಂದ ಮಾತ್ರ ಆಗಿಲ್ಲ. ನರೇಗಾ ಯೋಜನೆಯಲ್ಲಿ ಬಳಸಿಕೊಂಡಿರುವ ಹಣ ಯಾವುದು, ಯಾರದು? ಎಂದು ಪ್ರಶ್ನಿಸಿದರು. ಅದು ಕೇಂದ್ರ ಸರ್ಕಾರದ ಅನುದಾನ ಅಲ್ಲವೇ? ಸಂಸದರ ಭಾವಚಿತ್ರ ಅಳವಡಿಕೆಗೆ ಇಷ್ಟೊಂದು ಕೀಳು ಮಟ್ಟದ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ತಾಲೂಕಿನ ಮತದಾರರು ಅವರನ್ನು ಆಯ್ಕೆ ಮಾಡಿದ್ದಾರೆ. ಅವರ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನು ಕೊಡಲೇಬೇಕೆಂದು ಆಗ್ರಹಿಸಿದರು.
ಸದಸ್ಯ ಶಿವಲಿಂಗೇಗೌಡ ಮತ್ತು ಬಿಲ್ಲಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ನಡಾವಳಿಗೆ ಅಧ್ಯಕ್ಷರು ಸಹಿ ಮಾಡದಿದ್ದರೆ ಏನಾಯಿತು? ಈಗ ಸಹಿ ಮಾಡಿದರೆ ತಪ್ಪೇನು? ಅದನ್ನು ಚರ್ಚೆ ಮಾಡುವ ಅಗತ್ಯವೇನಿದೆ ಎಂದು ಪಂಚಾಯಿತಿಯ ಕ್ರಮವನ್ನು ಸಮರ್ಥಿಸಿಕೊಂಡರು.ಸದಸ್ಯ ಮುತ್ತಣ್ಣ ಮಾತನಾಡಿ, ಕಾರ್ಯಕ್ರಮದಲ್ಲಿ ಕೆಲವು ಸಣ್ಣಪುಟ್ಟ ಲೋಪಗಳು ಆಗಿರಬಹುದು. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಮುಂದೆ ಹೀಗಾಗದಂತೆ ಸರಿಪಡಿಸಿಕೊಳ್ಳೋಣ. ನಮ್ಮ ಅವಧಿ ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಮುಂದೆ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಕೊಡಿ ಎಂದು ಮನವಿ ಮಾಡಿದರು.
ಕಾರ್ಯದರ್ಶಿ ಮಹೇಶ್ವರ ಮಾತನಾಡಿ, ಸಭೆ ನಡೆದಾಗ ನಡಾವಳಿಗೆ ಅಧ್ಯಕ್ಷರು ಸಹಿ ಮಾಡುವುದಿಲ್ಲ, ಹಿಂದಿನ ಸಭೆ ನಡಾವಳಿಗೆ ಈ ಸಭೆಯಲ್ಲಿ ಸಹಿ ಪಡೆದುಕೊಳ್ಳುತ್ತೇವೆ, ಪ್ರತಿ ಸಭೆಯಲ್ಲೂ ಇದೇ ರೀತಿ ಮಾಡಿದ್ದೇವೆ. ಹಾಗಾಗಿ ಕಳೆದ ಸಭೆಯ ನಡಾವಳಿಗೆ ಈಗ ಸಹಿ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.ಸಭೆಯಲ್ಲಿ ಸದಸ್ಯ ಶಿವಲಿಂಗೇಗೌಡ, ಬಿಲ್ಲಯ್ಯ, ಶಿವಮ್ಮ ವೆಂಕಟಗಿರಿ, ಚಂದ್ರಕಲಾ, ರೂಪ, ಲಲಿತಾಬಾಯಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 03.ಕನಕಪುರ ತಾಲೂಕಿನ ಕಸಬಾ ಹೋಬಳಿಯ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಯಿತು.