ಹಿರಿಯೂರು: ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಈಶ್ವರ್ ರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯ್ತಿಗೆ ಸಂಬoಧಿಸಿದ 15ನೇ ಹಣಕಾಸಿನ ಖರ್ಚು ವೆಚ್ಚದ ಮಾಹಿತಿಯನ್ನು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ನೀಡದೆ ಉದ್ಧಟತನವನ್ನು ತೋರುವುದರ ಜೊತೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ನೇಮಿಸಲಾದ ತನಿಖಾ ತಂಡ ಆಡಿಟ್ ನಡೆಸಲು ಸೂಕ್ತ ದಾಖಲೆಗಳನ್ನು ನೀಡದೆ ಬೇಜವಾಬ್ದಾರಿಯನ್ನು ಪಿಡಿಓ ಸಿ.ಈಶ್ವರ್ ಪ್ರದರ್ಶಿಸಿದ್ದಾರೆ. ಹಣಕಾಸಿನ ವ್ಯವಹಾರದ ಲೆಕ್ಕ ಒದಗಿಸದೆ ಕರ್ತವ್ಯ ಲೋಪ ತೋರಿದ್ದರಿಂದ ಸರ್ಕಾರಿ ನೌಕರರಾಗಿ ಕರ್ನಾಟಕ ನಾಗರಿಕ ಸೇವಾ (ನಡವಳಿ) ನಿಯಮಾವಳಿಗಳು-1966 ನಿಯಮ-3(I)(II)&(III) ಉಲ್ಲಂಘಿಸಿದ ಕಾರಣ ಪಿಡಿಒ ಸಿ.ಈಶ್ವರ್ ಅವರನ್ನು ಅಮಾನತು ಮಾಡಿರುವುದಾಗಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.ನ.11ರ ಸೋಮವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಪಿಡಿಒ ಈಶ್ವರ್ ರವರ ಬೇಜವಾಬ್ದಾರಿತನ ಮತ್ತು ಹಣ ದುರ್ಬಳಕೆಯ ಬಗ್ಗೆ ವಿವರವಾದ ವರದಿ ಪ್ರಕಟವಾಗಿತ್ತು.ತನಿಖೆಯನ್ನು ಇಡಿ ವ್ಯಾಪ್ತಿಗೆ ನೀಡಿ
ಪಿಡಿಓ ಈಶ್ವರ್ ರವರ ಅಮಾನತ್ತು ಆದದ್ದಕ್ಕೆ ದೂರುದಾರ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಶಶಿಕಾಂತ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಪಿಡಿಒ ಈಶ್ವರ್ ರವರ ಅಧಿಕಾರ ಭ್ರಷ್ಟತೆಯ ಬಗ್ಗೆ ಕನ್ನಡಪ್ರಭ ಮಾತ್ರ ವಿವರವಾಗಿ ಸುದ್ದಿ ಪ್ರಕಟಿಸಿತ್ತು. ಪಿಡಿಒ ಈಶ್ವರ್ ರವರನ್ನು ಅಮಾನತ್ತು ಮಾಡಿರುವುದು ಕೇವಲ ಕಣ್ಣೊರಿಸುವ ತಂತ್ರ. ಸುಮಾರು 4 ಕೋಟಿಗೂ ಅಧಿಕ ಹಣ ದುರುಪಯೋಗ ಆಗಿದ್ದು, ಆತನ ಮೇಲೆ ಪ್ರಕರಣ ದಾಖಲಿಸಬೇಕು. ಖಾಸಗಿಯವರ ಬಳಿ ಆಡಿಟ್ ಮಾಡಿಸಿ ಅದನ್ನು ಒಪ್ಪಿರುವ ಮೇಲಾಧಿಕಾರಿಗಳು ಸಹ ಪ್ರಕರಣದಲ್ಲಿ ಭಾಗಿದಾರರೇ ಆಗಿದ್ದಾರೆ. 50 ಲಕ್ಷಕ್ಕಿಂತ ಹೆಚ್ಚಿನ ಹಣದ ದುರುಪಯೋಗ ಆಗಿರುವುದರಿಂದ ಹಣ ದುರುಪಯೋಗದ ತನಿಖೆಯನ್ನು ಇಡಿ ವ್ಯಾಪ್ತಿಗೆ ಕೊಡಬೇಕು ಎಂದು ಒತ್ತಾಯಿಸಿದರು.