ಉದ್ಯೋಗ ಸೃಷ್ಟಿಸಲು ಮೊದಲ ಆದ್ಯತೆ

KannadaprabhaNewsNetwork | Published : Nov 2, 2024 1:18 AM

ಸಾರಾಂಶ

ರೈತರ ಆದಾಯ ಇಮ್ಮಡಿಗೊಳಿಸಿ ರೈತರನ್ನು ಶೋಷಣೆಯಿಂದ ಮುಕ್ತರನ್ನಾಗಿಸಿ ವೈಜ್ಞಾನಿಕ ಬದಲಾವಣೆಗೆ ಹೆಜ್ಜೆಯನ್ನಿರಿಸಿಬೇಕಾಗಿದೆ

ಗದಗ: ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಪ್ಪಿಸುವುದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರ ಉದ್ಯೋಗಕ್ಕಾಗಿ ಜಿಲ್ಲೆಯಲ್ಲಿ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಇರುವ ನೆಲೆಯಲ್ಲಿಯೇ ಉದ್ಯೋಗಕ್ಕಾಗಿ ಅವಕಾಶ ಸೃಷ್ಟಿ ಮಾಡುವುದು ನಮ್ಮ ಗುರಿ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮೂಲಭೂತ ಸೌಲಭ್ಯಗಳ ಸೃಷ್ಟಿ ನಮ್ಮ ಸವಾಲು. ಜಿಲ್ಲೆಯ ವ್ಯವಹಾರ, ವಾಣಿಜ್ಯ, ಸಂಸ್ಕೃತಿ, ವಸ್ತು ಪ್ರದರ್ಶನಗಳ ಕೇಂದ್ರ ಸ್ಥಾನವನ್ನಾಗಿ ನಿರ್ಮಾಣ ಮಾಡುವುದು ಸೇರಿದಂತೆ ರೈತರ ಆದಾಯ ಇಮ್ಮಡಿಗೊಳಿಸಿ ರೈತರನ್ನು ಶೋಷಣೆಯಿಂದ ಮುಕ್ತರನ್ನಾಗಿಸಿ ವೈಜ್ಞಾನಿಕ ಬದಲಾವಣೆಗೆ ಹೆಜ್ಜೆಯನ್ನಿರಿಸಿಬೇಕಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ಅವರ ಸುತ್ತಲಿನ ಜಗತ್ತನ್ನು ಪರಿಚಯಿಸಿದ ಶಕ್ತಿಯೋಜನೆ, ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದೊಂದಿಗೆ ಅನುಷ್ಠಾನಕ್ಕೆ ಬಂದ ಅನ್ನಭಾಗ್ಯ ಯೋಜನೆ, ಉಚಿತ ಬೆಳಕು ಸುಸ್ಥಿರ ಬದುಕು, ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯ ಸಂಕೇತವಾದ ಗೃಹಜ್ಯೋತಿ ಯೋಜನೆ, ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕಾರಣವಾದ ಗೃಹಲಕ್ಷ್ಮಿ, ಯುವಕರಿಗೆ ನಿರುದ್ಯೋಗ ಭದ್ರತೆ ಒದಗಿಸುವ ಯುವನಿಧಿ ಯೋಜನೆಗಳು ರಾಜ್ಯದ 99ರಷ್ಟು ಫಲಾನುಭವಿಗಳಿಗೆ ತಲುಪಿವೆ.

ಗದಗ ಜಿಲ್ಲೆಯ ಭೀಷ್ಮ ಕೆರೆ ಪ್ರವಾಸಿ ತಾಣದಲ್ಲಿ ₹ 62 ಲಕ್ಷ ವೆಚ್ಚದಲ್ಲಿ ವರ್ಗ ಎ ಮಾದರಿಯ ಪ್ರವಾಸಿ ಸ್ನೇಹಿ ಸಂಕಿರ್ಣ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸೊರಟೂರು ವಲಯದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಅಂದಾಜು ₹850 ಲಕ್ಷ ವೆಚ್ಚದಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿರ್ಮಿಸಲು ಭೂಮಿಪೂಜೆ ಮಾಡಲಾಗಿದೆ.

ಗದಗ ಶಹರದಲ್ಲಿ ತ್ರೀ ಸ್ಟಾರ್ ಹೋಟೆಲ್ ಕಾಮಗಾರಿಗೆ ₹9 ಕೋಟಿ, ಕ್ಯಾಟರಿಂಗ್ ಹಾಸ್ಪಿಟ್ಯಾಲಿಟಿ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಿರ್ಮಾಣಕ್ಕೆ ₹ 8 ಕೋಟಿ, ಮಹಾಲಿಂಗಪುರ ಗ್ರಾಮದ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಶಿಬಿರಕ್ಕೆ ₹7 ಕೋಟಿ, ಲಕ್ಕುಂಡಿ ಗ್ರಾಮದ 13 ದೇವಸ್ಥಾನದ ಪುನರುಜ್ಜೀವನ ಕಾಮಗಾರಿಗೆ ₹5 ಕೋಟಿ, ಬಿಂಕದಕಟ್ಟಿಯ ಮೃಗಾಲಯ ನೈಟ್ ಸಫಾರಿಗೆ ₹4 ಕೋಟಿ, ತಿರಂಗಾ ಪಾರ್ಕ್ ಪ್ರದರ್ಶನ ಕಾಮಗಾರಿಗೆ ₹3 ಕೋಟಿ, ಭೀಷ್ಮ ಕೆರೆ ಮತ್ತು ಮೃಗಾಲಯದಲ್ಲಿ ಪುಟಾಣಿ ರೈಲು ಕಾಮಗಾರಿಗೆ ₹3 ಕೋಟಿ, ಕೊಣ್ಣೂರ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ, ಜಿಗಳೂರು ಕೆರೆ ಹತ್ತಿರ ಪ್ರವಾಸಿ ಉದ್ಯಾನವನ ನಿರ್ಮಾಣಕ್ಕೆ ₹50 ಲಕ್ಷ ಸೇರಿದಂತೆ ವಿವಿಧ ಒಟ್ಟು 24 ಕಾಮಗಾರಿಗಳಿಗೆ ₹50.85 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಗದಗ ನರಗುಂದ ಮತಕ್ಷೇತ್ರಕ್ಕೆ 53 ಕಾಮಗಾರಿಗಳಿಗೆ ₹11.55 ಕೋಟಿ ಅನುದಾನ ಮಂಜೂರಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹7 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಆಶ್ರಮದ ಪಕ್ಕದಲ್ಲಿ ಯುವಕರಲ್ಲಿ ಚೈತನ್ಯ ಮತ್ತು ಸ್ಫೂರ್ತಿ ತುಂಬುವ ಆಕಾಂಕ್ಷೆಯಿಂದ 39 ಅಡಿ ಎತ್ತರದ ವಿವೇಕಾನಂದರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದು ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸುದೀರ್ಘವಾಗಿ ತಿಳಿಸಿದರು.

Share this article