ಕನ್ನಡಪ್ರಭ ವಾರ್ತೆ ಹಾಸನ
ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಜೊತೆಗೆ ಉದ್ಯೋಗ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಗರದ ಡೈರಿ ವೃತ್ತ ಬಿ. ಕಾಟಿಹಳ್ಳಿ ಬಳಿ ಇರುವ ಸಂತ ಜೋಸೆಫ್ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮೊದಲ ದಿನ ಸುಮಾರು ೧೫೦ ಅಭ್ಯರ್ಥಿಗಳಿಗೆ ಉಚಿತ ಉದ್ಯೋಗಪೂರ್ವ ತರಬೇತಿ ನೀಡಲಾಯಿತು. ಬೆಂಗಳೂರಿನ ಮ್ಯಾಜಿಕ್ ಬಸ್ ಫೌಂಡೇಶನ್ನ ಪರಿಣತ ತರಬೇತುದಾರರು ನಡೆಸಿದ ತರಬೇತಿ ಕಾರ್ಯಾಗಾರದಲ್ಲಿ ಉತ್ತಮ ರೆಸ್ಯೂಮ್ ತಯಾರಿಕೆ, ಉದ್ಯೋಗ ಸಂದರ್ಶನ ಎದುರಿಸುವ ವಿಧಾನ, ಪರಿಣಾಮಕಾರಿ ಸಂವಹನ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಉದ್ಯೋಗದ ಜವಾಬ್ದಾರಿಗಳ ಅರಿವು ಹಾಗೂ ವೃತ್ತಿಪರ ಕೌಶಲ್ಯಗಳ ಕುರಿತು ಅಭ್ಯರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಸಂದರ್ಶನದ ವೇಳೆ ಆತ್ಮವಿಶ್ವಾಸದಿಂದ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವುದು ಹಾಗೂ ಉದ್ಯೋಗದಾತರ ನಿರೀಕ್ಷೆಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳುವ ಬಗ್ಗೆ ತರಬೇತುದಾರರು ಮಾರ್ಗದರ್ಶನ ನೀಡಿದರು.