ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಯೋಜನೆಗಳ ಸೌಲಭ್ಯ ದುರ್ಬಳಕೆಯಾಗದಂತೆ ಸರ್ಕಾರ ಅನ್ನಭಾಗ್ಯ ಯೋಜನೆಗೆ ಇಕೆವೈಸಿ, ಗೃಹಜ್ಯೋತಿ ಯೋಜನೆಗೆ ಮರು ಪರಿಶೀಲನೆ ಕಾರ್ಯ ನಡೆಸುತ್ತಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಯಾವುದೇ ಬಗೆಯ ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಅಗತ್ಯ ದಾಖಲೆ ಕೊಟ್ಟು ಮರುಪರಿಶೀಲನೆ ಮಾಡಿಸಬೇಕು. ತಪ್ಪಿದಲ್ಲಿ ಯೋಜನೆ ಸೌಲಭ್ಯ ಕೈತಪ್ಪುವ ಸಾಧ್ಯತೆ ಇದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಯೋಜನೆಗಳ ಸೌಲಭ್ಯ ದುರ್ಬಳಕೆಯಾಗದಂತೆ ಸರ್ಕಾರ ಅನ್ನಭಾಗ್ಯ ಯೋಜನೆಗೆ ಇಕೆವೈಸಿ, ಗೃಹಜ್ಯೋತಿ ಯೋಜನೆಗೆ ಮರು ಪರಿಶೀಲನೆ ಕಾರ್ಯ ನಡೆಸುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆ ಕುರಿತು ಆಹಾರ ನಿರೀಕ್ಷಕ ಅನಿಲ್ ಕುಮಾರ್ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 4400 ಅಂತ್ಯೋದಯ, 43634 ಬಿಪಿಎಲ್ ಮತ್ತು 1811 ಎಪಿಎಲ್ ಕಾರ್ಡ್ಗಳಿವೆ. ಅರ್ಹ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಸಮರ್ಪಕವಾಗಿ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ ಎಂದರು.ಎಲ್ಲಾ ಬಗೆಯ ಪಡಿತರ ಕಾರ್ಡ್ಗಳಲ್ಲಿರುವ ಒಟ್ಟು 1,72,464 ಜನರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸೆ.1 ರಿಂದ 30 ರೊಳಗೆ ಕಡ್ಡಾಯವಾಗಿ ಇಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ಕಾರ್ಡ್ನಲ್ಲಿ ರದ್ದುಗೊಂಡು ಆಹಾರ ಪದಾರ್ಥ ಸ್ಥಗಿತಗೊಳ್ಳಲಿದೆ ಎಂದರು.
ಬಿಪಿಎಲ್ನಿಂದ ಅನರ್ಹಗೊಂಡು ಎಪಿಎಲ್ ಕಾರ್ಡ್ಗಳಾಗಿದ್ದ 1650 ಪಡಿತರ ಚೀಟಿಗಳನ್ನು ಪಾರದರ್ಶಕವಾಗಿ ಮರುಪರಿಶೀಲನೆ ನಡೆಸಿ ನಿಜವಾದ ಬಡ ಕುಟುಂಬ ಹಾಗೂ ವೈದ್ಯಕೀಯ ಉದ್ದೇಶಕ್ಕೆಂದು ಕಂಡುಬಂದ ಹಿನ್ನೆಲೆಯಲ್ಲಿ 135 ಎಪಿಎಲ್ ಕಾರ್ಡ್ಗಳನ್ನು ಬಿಪಿಎಲ್ ಕಾರ್ಡ್ಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.ಗೃಹಲಕ್ಷ್ಮಿ ಯೋಜನೆ ಕುರಿತು ಮಾಹಿತಿ ನೀಡಿದ ಸಿಡಿಪಿಒ ಕಚೇರಿ ಅಧಿಕಾರಿ ಲಕ್ಷ್ಮಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 48,359 ಅರ್ಹ ಫಲಾನುಭವಿಗಳಿದ್ದು, 1528 ಫಲಾನುಭವಿಗಳು ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 300 ಕ್ಕೂ ಹೆಚ್ಚು ಮೃತ ಫಲಾನುಭವಿಗಳ ಹೆಸರನ್ನು ಯೋಜನೆಯಿಂದ ಕೈಬಿಡಲಾಗಿದೆ ಎಂದರು.
ಸೆಸ್ಕಾಂ ನಾಗಮಂಗಲ ಉಪ ವಿಭಾಗದ ಎಇ ಅನುಷ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 57124 ವಿದ್ಯುತ್ ಗ್ರಾಹಕರು ಫಲಾನುಭವಿಗಳಾಗಿ ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ತಾಲೂಕಿನಾದ್ಯಂತ ಮರು ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ. ಶೇ.100ರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ ಮಾತನಾಡಿ, ಕಳೆದ ಜುಲೈ ತಿಂಗಳಲ್ಲಿ 7,46,599 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಸಂಸ್ಥೆಗೆ 2.56 ಕೋಟಿ ರು. ಹಣ ಸರ್ಕಾರದಿಂದ ಪಾವತಿಯಾಗಿದೆ. ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ ಸಭೆಗೆ ಮಾಹಿತಿ ನೀಡಿದರು.
ಯುವ ನಿಧಿ ಯೋಜನೆಯಡಿ ಈವರೆಗೆ ನೋಂದಣಿಯಾಗಿರುವ ತಾಲೂಕಿನ 10900 ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಒಟ್ಟು 3.24 ಕೋಟಿಗೂ ಹೆಚ್ಚು ಹಣ ಡಿಬಿಟಿ ಮೂಲಕ ವರ್ಗಾವಣೆಯಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಹೇಮಲತ ಸಭೆಗೆ ಮಾಹಿತಿ ನೀಡಿದರು.ಶಕ್ತಿ ಯೋಜನೆಯಡಿ ಮಹಿಳೆಯರು ಹೆಚ್ಚು ಪ್ರಯಾಣಿಸುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ. ಹಾಗಾಗಿ ನಾಗಮಂಗಲ ಘಟಕಕ್ಕೆ ಹೆಚ್ಚುವರಿ ಬಸ್ಗಳನ್ನು ಒದಗಿಸುವಂತೆ ಇಲಾಖೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರಿಗೆ ಮೂಡ್ಲೀಗೌಡ ಸೂಚಿಸಿದರು.
ಸಭೆಯಲ್ಲಿ ತಾಪಂ ವ್ಯವಸ್ಥಾಪಕ ಜಗನ್, ಸಮಿತಿ ಸದಸ್ಯರಾದ ನೀಲಾಮೂರ್ತಿ, ಗೀತಾ, ಎ.ಎನ್.ದಿನೇಶ್. ವಿನಯ್, ನವೀನ್, ರವಿಕಾಂತೇಗೌಡ, ಸಿ.ಧನರಾಜ್, ಶ್ರೀಧರ್, ತಮ್ಮಣ್ಣಗೌಡ, ತಾಪಂ ಅಧಿಕಾರಿ ರವಿ, ಭಾಗ್ಯಮ್ಮ ಇದ್ದರು.