ಗದಗ: ಪ್ರತಿಭೆ ಮತ್ತು ಕೌಶಲ್ಯವಿದ್ದರೆ ಉದ್ಯೋಗ ಅವಕಾಶಗಳು ಒಲಿದು ಬರಲು ಸಾಧ್ಯ. ಜೀವನದಲ್ಲಿ ಯಶಸ್ಸು ಪಡೆಯಲು ಉದ್ಯೋಗ ಅವಶ್ಯ, ಇಂತಹ ಉದ್ಯೋಗವಿರುವ ವ್ಯಕ್ತಿಗಳಿಗೆ ವಿಜಯಲಕ್ಷ್ಮೀ ಒಲಿಯಬಲ್ಲಳು ಎಂದು ಜ. ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಈ ಬೃಹತ್ ಉದ್ಯೋಗ ಮೇಳ ಏರ್ಪಡಿಸಲು ಕಾರಣರಾದ ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮತ್ತು ಪದಾಧಿಕಾರಿಗಳು, ಧಾರವಾಡದ ಕನೆಕ್ಟ್ ಸಂಸ್ಥೆ ಹಾಗೂ ಬಸವೇಶ್ವರ ಮಹಾವಿದ್ಯಾಲಯದ ಸಿಬ್ಬಂದಿಯ ಶ್ರಮ ಸಾರ್ಥಕತೆ ಪಡೆದಿದೆ. ಇಂದಿಲ್ಲಿ ಉದ್ಯೋಗಕ್ಕೆ ನೇಮಕಾತಿ ಪತ್ರ ಪಡೆದುಕೊಳ್ಳುವ ಅಭ್ಯರ್ಥಿಗಳ ಭವಿಷ್ಯ ಸುಂದರವಾಗಿ ರೂಪುಗೊಳ್ಳಲಿ ಎಂದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತಿದೆ. ಜತೆಗೆ ತಮ್ಮ ಮಕ್ಕಳನ್ನು ಕಲಿಸಬೇಕೆಂಬ ಹಂಬಲ ಪಾಲಕರಲ್ಲಿಯೂ ಬೇಕು. ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಿದೆ. ಇದು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅವಶ್ಯ ಹಾಗೂ ಅನಿವಾರ್ಯ. ಇತ್ತಿಚೆಗೆ ಪ್ರಕಟಗೊಂಡ ಪಿಯುಸಿ ಫಲಿತಾಂಶವು ಸಾಕಷ್ಟು ತೃಪ್ತಿ ತಂದಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಮೇಳದಿಂದಾಗಿ ಉದ್ಯೋಗ ಲಭ್ಯವಾಗಿ ಉತ್ತಮ ಭವಿಷ್ಯ ರೂಪುಗೊಳ್ಳಲಿ ಎಂದರು. ರಾಜಕಾರಣಿಗಳ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು ಎಂಬುದು ಮುಗಿದ ಅಧ್ಯಾಯವಾಗಿದೆ. ಸ್ವಯಂಪ್ರತಿಭೆ, ಕೌಶಲ್ಯವಿದ್ದವರನ್ನು ಉದ್ಯೋಗಗಳು ಹುಡುಕಿಕೊಂಡು ಬರುವುದು. ಈ ನಿಟ್ಟಿನಲ್ಲಿ ಚೇಂಬರ್ ಒಳ್ಳೆ ಕೆಲಸ ಮಾಡಿದೆ ಎಂದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನಿರುದ್ಯೋಗ ಸಮಸ್ಯೆ ಜಾಗತಿಕವಾಗಿದೆ. ಕೌಶಲ್ಯತೆಯ ಕೊರತೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಧೈರ್ಯ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ವಿವಿದ ಇಲಾಖೆಗಳಲ್ಲಿ ಒಟ್ಟು 4 ಲಕ್ಷ ಹುದ್ದೆಗಳು ಖಾಲಿ ಆಗಿದ್ದು, ಅವುಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದರು.
ವಿಪ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕೌಶಲ್ಯ ಆಧಾರಿತ ಶಿಕ್ಷಣ ಇಂದು ಅವಶ್ಯವಿದೆ. ಪ್ರಧಾನಿ ಮೋದಿ ಅವರು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸಾಕಷ್ಟು ಪ್ರಗತಿಯ ಕಾರ್ಯಗಳನ್ನು ಮಾಡಿದ್ದಾರೆ. ಭಾಷೆಯ ಮೇಲೆ ಪ್ರಭುತ್ವ ಮತ್ತು ಪ್ರಾಬಲ್ಯ ಹೊಂದಿದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಉನ್ನತ ಹುದ್ದೆ ಹೊಂದಲು ಸಾಧ್ಯ ಎಂದರು.