ಯಲಬುರ್ಗಾ: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೂ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠಕ್ಕೂ ಅನನ್ಯ ಸಂಬಂಧವಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರತೀರ್ಥ ಶ್ರೀಪಾದಂಗಳ ಹೇಳಿದರು.
ಮಂತ್ರಾಲಯಕ್ಕೆ ಕ್ಷೇತ್ರವು ತವರು ಮನೆ ಇದ್ದಂತೆ. ಶ್ರೀಮಠದ ಎಲ್ಲ ಯತಿಶೇಖರರು ಕಾಲಕಾಲಕ್ಕೆ ಇಲ್ಲಿಗೆ ಬಂದು ಶಿಷ್ಯರಿಗೆ ತತ್ವೋಪದೇಶ, ಪೂಜೆ ಮತ್ತು ಭಿಕ್ಷೆ ಸ್ವೀಕರಿಸಿ ಅನುಗ್ರಹಿಸಿದ್ದಾರೆ. ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಈ ಕ್ಷೇತ್ರಕ್ಕೆ ಸದಾಕಾಲ ಒಳಿತಾಗಲಿ ಎಂದರು.
ನೂರಾರು ವರ್ಷಗಳ ಹಿಂದೆ ಯಲಬುರ್ಗಾದ ಪೂರ್ವಜರು ಮಂತ್ರಾಲಯದ ಸುವರ್ಣ ಮಂಟಪ ನಿರ್ಮಾಣಕ್ಕೆ ಬಂಗಾರ ದಾನ ಮಾಡಿದ್ದನ್ನು ಸ್ಮರಿಸಬಹುದು. ಈ ಪುಣ್ಯ ಕ್ಷೇತ್ರದ ಜನತೆಯ ಭಕ್ತಿ, ಭಾವದ ಸಮರ್ಪಣೆ ಮರೆಯುವಂತಿಲ್ಲ. ಈ ಬಾಂಧವ್ಯ ಪರಂಪರೆ ಹೀಗೆ ಮುಂದುವರೆಯಲಿದೆ ಎಂದರು.೧೯೭೦ರ ದಶಕದಲ್ಲಿ ಇಲ್ಲಿಗೆ ಸುಶಮೀಂದ್ರತೀರ್ಥ ಶ್ರೀಪಾದಂಗಳವರು ಬಂದು ಎರಡು ತಿಂಗಳ ಕಾಲ ನೆಲೆಸಿ, ರಾಯರಮಠ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈಗ ಶ್ರೀಮಠ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ.ಮುಂದೆ ಶ್ರೀಮಠದ ವಜ್ರ ಮಹೋತ್ಸವ ಆಚರಣೆಗೆ ನಾವೆಲ್ಲರೂ ಸಿದ್ಧರಾಗೋಣ ಎಂದರು.
ಅದ್ಧೂರಿ ಶೋಭಾಯಾತ್ರೆ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದದಿಂದ ಶ್ರೀ ಮಠದ ವರೆಗೆ ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿಯಾಗಿ ಶೋಭಾಯಾತ್ರೆಯ ಮೂಲಕ ವಿವಿಧ ವಾದ್ಯ ಮೇಳದೊಂದಿಗೆ ಶ್ರೀಮಠಕ್ಕೆ ಸ್ವಾಗತಿಸಲಾಯಿತು. ಇದೇ ವೇಳೆ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು ಮಂತ್ರಾಲಯ ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಸತ್ಕರಿಸಿದರು. ದಾರಿಯುದ್ದಕ್ಕೂ ರಾಯರ ಜಯಘೋಷ, ಭಜನೆ ನೋಡುಗರ ಗಮನ ಸೆಳೆಯಿತು. ವಿವಿಧ ವಿದ್ವಾಂಸರು, ಪಂಡಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಸುನಿಲ್ ಕುಲಕರ್ಣಿ, ರಾಘವೇಂದ್ರಾಚಾರ ಜೋಶಿ, ಸುಧೀರ ಕೊರ್ಲಹಳ್ಳಿ, ವಂಶಿಕೃಷ್ಣ, ಗುರುರಾಜ ತೊಂಡಿಹಾಳ, ಅಪ್ಪಣ್ಣ ಜೋಶಿ, ಜಗನ್ನಾಥ ದೇಸಾಯಿ, ಸಂತೋಷಿಮಾ ಜೋಶಿ, ವಂಸತರಾವ್ ಕುಲಕರ್ಣಿ, ಕೃಷ್ಣ ಮುಕ್ತೇದಾರ್, ಗುರುರಾಜ್ ಆಚಾರ್ ಪುರೋಹಿತ್, ಶೇಷಗಿರಿರಾವ್ ಪಟವಾರಿ, ನಾರಾಯಣ ಗಂಗಾಖೇಡ್ ಸೇರಿದಂತೆ ಅನೇಕ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಮೂಲರಾಮನಿಗೆ ವಿಶೇಷ ಪೂಜೆ: ಪಟ್ಟಣದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಎರಡನೇ ದಿನದ ಕಾರ್ಯಕ್ರಮ ನಿಮಿತ್ತ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮೂಲರಾಮನ ಪೂಜಾ ಕೈಂಕರ್ಯಗಳು ನಡೆದವು. ರಾಯರ ಬ್ರಂದಾವನಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಗಳಿಗೆ ಭಕ್ತರಿಂದ ಪಾದಪೂಜೆ ಕಾರ್ಯಕ್ರಮ ಸಮರ್ಪಿಸಲಾಯಿತು. ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ಜರುಗಿದವು. ಇದೆ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಶ್ರೀಗಳಿಗೆ ಸನ್ಮಾನಿಸಿದರು.