ಕನ್ನಡಪ್ರಭ ವಾರ್ತೆ ತಿಪಟೂರು
ಕೆಲಸಕ್ಕಾಗಿ ಅಲೆದಾಡುತ್ತಿರುವ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರು ಕೌಶಲ್ಯ ತರಬೇತಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳವ ಮೂಲಕ ಉದ್ಯೋಗಸ್ಥರಾಗಬೇಕೆಂದು ಎಂಜೆಎಸ್ಪಿಆರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜೆ. ಶ್ರೀಕಾಂತ್ ತಿಳಿಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಬೇಡಿಕೆ ಹಾಗೂ ಅತ್ಯವನ್ನು ಮನಗಂಡು ನಾವು ನಗರದ ಶ್ರೀ ಶಂಕರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಈಗಾಗಲೇ ಮೊದಲ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸಿ ಸುಮಾರು 130ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಆಸಕ್ತಿ ಆಧರಿಸಿ ಕೌಶಲ್ಯ ತರಬೇತಿ ನೀಡಲಾಗಿದೆ. ಇದರಲ್ಲಿ 100 ಅಭ್ಯರ್ಥಿಗಳು ಈಗಾಗಲೇ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಹೆಚ್ಚಿನ ನಿರುದ್ಯೋಗವಂತರಿಗೆ ಈ ತರಬೇತಿ ಅನುಕೂಲವಾಗಲೆಂದು ಎರಡನೇ ಕೌಶಲ್ಯ ತರಬೇತಿ ಕೇಂದ್ರ ಆರಂಭ ಮಾಡುತ್ತಿದ್ದು ನಗರ ಹಾಗೂ ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಅನುತ್ತೀರ್ಣರಾದ ಯುವಕ, ಯುವತಿಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮಲ್ಲಿ ಇಂಗ್ಲಿಷ್ ಸಂವಹನ ತರಬೇತಿ, ಜಿಎಸ್ಟಿ ನಿರ್ವಹಣೆ, ಕಂಪ್ಯೂಟರ್ ತರಬೇತಿ, ಬದುಕಿನ ಕೌಶಲ್ಯಗಳು, ಆಪ್ತ ಸಮಾಲೋಚನೆ ಹಾಗೂ ಆತ್ಮವಿಶ್ವಾಸವೃದ್ಧಿ ಮತ್ತಿತರ ತರಬೇತಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಮಾಡಿಸಿ ನಂತರ ನಂತರ ಪ್ರಮಾಣ ಪತ್ರ ನೀಡಲಾಗುವುದು. ನಮ್ಮ ಮುಖ್ಯ ಉದ್ದೇಶ ಒಂದು ವರ್ಷದಲ್ಲಿ 700ಕ್ಕೂ ಹೆಚ್ಚು ನಿರುದ್ಯೋಗ ವಿದ್ಯಾವಂತರಿಗೆ ಉದ್ಯೋಗ ದೊರಕಿಸಿಕೊಡುವುದಾಗಿದ್ದು ಭವಿಷ್ಯದ ಉದ್ಯೋಗಕ್ಕಾಗಿ ನಮ್ಮ ಸಂಸ್ಥೆಗಳು ಶ್ರಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ತರಬೇತಿಯ ಪ್ರಯೋಜನ ಪಡೆದುಕೊಂಡು ಉದ್ಯೋಗಸ್ಥರಾಗಬೇಕೆಂದು ತಿಳಿಸಿದರು. ಎಸ್ಆರ್ಎಫ್ ಫೌಂಡೇಶನ್ ಟ್ರಸ್ಟ್ನ ಡಾ. ಜಿ.ಎಸ್. ಶ್ರೀಧರ್ ಮಾತನಾಡಿ, ಈಗಾಗಲೇ ನಮ್ಮ ತರಬೇತಿ ಕೇಂದ್ರದಲ್ಲಿ ನೂರು ಜನರಿಗೆ ತುಮಕೂರು, ಹಾಸನ, ಬೆಂಗಳೂರು ಕಡೆಗಳಲ್ಲಿ ಅರ್ಹತೆಗೆ ತಕ್ಕಂತೆ ಉದ್ಯೋಗ ಕೊಡಿಸಲಾಗಿದೆ. ಬೇಡಿಕೆ ಹೆಚ್ಚಾದ ಕಾರಣ ಈಗ ಎರಡನೇ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಮೂಲಕ ನೂರಕ್ಕೆ ನೂರಷ್ಟು ಉದ್ಯೋಗ ದೊರಕಿಸುವ ಸಲುವಾಗಿ ಗ್ರಾಮೀಣ ಮಕ್ಕಳಿಗೆ ಆದ್ಯತೆ ನೀಡುತ್ತಿದ್ದು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದರು. ಶ್ರೀ ಶಂಕರ ಟ್ರೈನಿಂಗ್ ಸೆಂಟರ್ನ ಸಂಸ್ಥಾಪಕ ಶಿವಪ್ರಕಾಶ್ ಹಾಗೂ ವೀಣಾ ಮಾತನಾಡಿ, ಎರಡು ದಶಕಗಳಿಂದಲೂ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು ಈಗ ಎಂಜೆಎಸ್ಪಿಆರ್ ಸಂಸ್ಥೆ, ಎಸ್ಆರ್ಎಫ್, ಉನ್ನತಿ ಪ್ರತಿಷ್ಠಾನದ ಮೂಲಕ ಕೌಶಲ್ಯ ತರಬೇತಿ ಕೇಂದ್ರ ಆರಂಭಿಸಿ ಯಶಸ್ಸು ಸಾಧಿಸಿದ್ದೇವೆ. ಮತ್ತಷ್ಟು ಯುವಕ ಯುವತಿಯರು ತರಬೇತಿ ಪಡೆದುಕೊಂಡು ಉದ್ಯೋಗಿಗಳಾಗಬೇಕೆಂದರು.