ಪಕ್ಷ ನಿಷ್ಠೆ ಇಲ್ಲದೇ ಕಾಂಗ್ರೆಸ್‌ಗೆ ಸೇರ್ಪಡೆ: ರಾಜು

KannadaprabhaNewsNetwork |  
Published : Mar 27, 2024, 01:04 AM IST
ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಮಾಜಿ ಗ್ರಾಮಾಂತರ ಅಧ್ಯಕ್ಷ ಕೆ.ಟಿ.ಜಯರಾಮು, ಮುಖಂಡರಾದ ರಾಂಪುರ ರಾಜಣ್ಣ, ವಿ.ಬಿ.ಚಂದ್ರು, ಲಾಯರ್ ಹನುಮಂತು ಇತರರು ಇದ್ದರು. | Kannada Prabha

ಸಾರಾಂಶ

ಚನ್ನಪಟ್ಟಣ: ಬಿಜೆಪಿಯಿಂದ ಸಾಕಷ್ಟು ಫಲ ಪಡೆದ ರಾಂಪುರ ಮಲವೇಗೌಡ ಹಾಗೂ ಹರೂರು ರಾಜಣ್ಣ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಉಂಡ ಮನೆಗೆ ದ್ರೋಹ ಬಗೆದು ಹೋಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ತೂಬಿನಕೆರೆ ರಾಜು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಬಿಜೆಪಿಯಿಂದ ಸಾಕಷ್ಟು ಫಲ ಪಡೆದ ರಾಂಪುರ ಮಲವೇಗೌಡ ಹಾಗೂ ಹರೂರು ರಾಜಣ್ಣ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಉಂಡ ಮನೆಗೆ ದ್ರೋಹ ಬಗೆದು ಹೋಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ತೂಬಿನಕೆರೆ ರಾಜು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಸಾಕಷ್ಟು ಬೆಳೆದ ಈ ಇಬ್ಬರು ನಾಯಕರು ಸ್ವಲ್ಪವೂ ನಿಷ್ಠೆ ಇಲ್ಲದೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಆ ಪಕ್ಷಕ್ಕೆ ಸೇರ್ಪಡೆಯಾದ ನಂತರ ಯೋಗೇಶ್ವರ್ ಎರಡನೇ ಹಂತದ ನಾಯಕರನ್ನು ಬೆಳೆಸಲಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗಿದ್ದರೆ, ಇವರು ಎಷ್ಟು ಜನ ಮುಖಂಡರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದರು.

ರಾಂಪುರ ಮಲವೇಗೌಡರು ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ಹಾಗೂ ಅವರ ಪತ್ನಿ ಒಮ್ಮೆ ತಾಪಂ ಸದಸ್ಯರಾಗಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಹಸಂಚಾಲಕರಾಗಿದ್ದರು. ಪಕ್ಷದ ನೀತಿ ನಿರೂಪಣೆಯಲ್ಲಿ ಅವರಿಗೆ ಎರಡನೇ ಹಂತದ ಸ್ಥಾನವಿತ್ತು. ಇಷ್ಟೆಲ್ಲ ನೀಡಿದ ಪಕ್ಷಕ್ಕೆ ಅವರ ಕೊಡುಗೆ ಏನು ಎಂದು ತಿಳಿಸಲಿ ಎಂದರು.

ಹರೂರು ರಾಜಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಾಪಂ ಅಧ್ಯಕ್ಷರಾಗಿ ಮಾಡಿದರು. ಐದು ವರ್ಷ ಆಡಳಿತ ನಡೆಸಿದ ಅವರು, ಯಾವ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಕಾರ್ಯಕರ್ತರನ್ನು ಬೆಳೆಸುವ ಕೆಲಸ ಮಾಡಲಿಲ್ಲ. ತಮ್ಮ ಊರಿನಲ್ಲೇ ಅವರಿಗೆ ಗ್ರಾಪಂ ಚುನಾವಣೆಗೆ ಒಬ್ಬರನ್ನು ನಿಲ್ಲಿಸುವ ತಾಕತ್ತು ಇಲ್ಲ ಎಂದು ವಾಗ್ದಾಳಿ ನಡೆಸಿದರು.ಕಾರು ವಾಪಸ್ ನೀಡಿ!:

ಹರೂರು ರಾಜಣ್ಣ ಅವರಿಗೆ ಯೋಗೇಶ್ವರ್ ಅಭಿವೃದ್ಧಿ ಕಾರ್ಯಕ್ಕಾಗಿ ಹಾಗೂ ಪಕ್ಷ ಸಂಘಟಿಸಲು ಕಾರನ್ನು ನೀಡಿದ್ದಾರೆ. ಈಗ ನೀವು ಅದೇ ಕಾರಿನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಓಡಾಡುತ್ತಿದ್ದೀರಾ. ನಿಮಗೆ ಸ್ವಾಭಿಮಾನವಿದ್ದರೆ ಯೋಗೇಶ್ವರ್ ನೀಡಿರುವ ಕಾರನ್ನು ಮರಳಿಸಿ ಎಂದು ಸವಾಲು ಹಾಕಿದರು.

ಮುಖಂಡ ನಾಗೇಶ್ ಮಾತನಾಡಿ, ಸಿಂಗರಾಜಿಪುರ ರಾಜಣ್ಣ ಪದೇ ಪದೇ ಪಕ್ಷ ಬದಲಿಸುವುದನ್ನು ಮಾಡುತ್ತಿದ್ದಾರೆ. ಬಿಜೆಪಿಗೆ ಬಂದು ವರ್ಷವಾಗಿಲ್ಲ, ಆಗಲೇ ಪಕ್ಷ ತ್ಯಜಿಸಿದ್ದಾರೆ. ಈ ರೀತಿ ಪಕ್ಷಾಂತರ ಮಾಡುವವರಿಗೆ ಮತದಾರರು ಬೆಲೆ ನೀಡುವುದಿಲ್ಲ. ಪಕ್ಷಾಂತರ ಮಾಡುವವರು ಇದನ್ನು ಅರಿಯಬೇಕು ಎಂದರು.

ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ಪಕ್ಷಾಂತರ ಮಾಡುವುದು ಅವರ ವೈಯಕ್ತಿಕ ವಿಚಾರ. ಚುನಾವಣೆ ಸಮಯದಲ್ಲಿ ಪಕ್ಷಾಂತರ ಸಾಮಾನ್ಯ. ಆದರೆ, ಪಕ್ಷ ಬಿಟ್ಟ ತಕ್ಷಣ ತೆಗಳುವ ಕೆಲಸ ಮಾಡುವುದು ಸರಿಯಲ್ಲ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದಾಗಿದ್ದು, ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸುವುದು ಮುಖ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಮಾಜಿ ಗ್ರಾಮಾಂತರ ಅಧ್ಯಕ್ಷ ಕೆ.ಟಿ.ಜಯರಾಮು, ಮುಖಂಡರಾದ ರಾಂಪುರ ರಾಜಣ್ಣ, ವಿ.ಬಿ.ಚಂದ್ರು, ಲಾಯರ್ ಹನುಮಂತು ಇತರರಿದ್ದರು.

ಕೋಟ್...

ಪಕ್ಷಾಂತರ ಮಾಡುವವರಿಗೆ ರಾಷ್ಟ್ರದ ಹಿತಕ್ಕಿಂತ ವೈಯಕ್ತಿಕ ಹಿತವೇ ಮುಖ್ಯವಾಗಿದೆ. ಯಾರೋ ಒಂದಿಬ್ಬರು ಪಕ್ಷ ಬಿಟ್ಟ ಮಾತ್ರಕ್ಕೆ ಏನು ನಷ್ಟವಾಗುವುದಿಲ್ಲ. ಬಿಜೆಪಿ ಸದೃಢವಾಗಿದೆ.

-ಆನಂದಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ

ಪೊಟೋ೨೬ಸಿಪಿಟಿ: ಚನ್ನಪಟ್ಟಣದಲ್ಲಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಲಿಂಡರ್‌ ಬೆಲೆ ಹೆಚ್ಚಳ ಶರಣಾಗತಿಯ ಫಲ: ಸಿಎಂ
ಹಳ್ಳಿಗಳಿಗೂ ಎಲೆಕ್ಟ್ರಿಕ್‌ ಬಸ್‌ ಓಡಿಸಲು ಸಿದ್ಧತೆ?