ಬಳ್ಳಾರಿ: ನಗರದ ರಾಘವ ಕಲಾಮಂದಿರದಲ್ಲಿ ಭಾನುವಾರ ಸಂಜೆ ರಂಗತೋರಣ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದ ಪ್ರಭು ಗುರಪ್ಪನವರಗೆ 2022ನೇ ಸಾಲಿನ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಹಾಗೂ ಹಿರಿಯ ಲೇಖಕ ಮೃತ್ಯುಂಜಯ ರುಮಾಲೆ ಅವರ ರಚನೆಯ ''''ಬಳ್ಳಾರಿ ರಾಘವ'''' ಕೃತಿ ಲೋಕಾರ್ಪಣಾ ಸಮಾರಂಭ ಜರುಗಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಲೋಹಿಯಾ ಪ್ರಕಾಶನದ ಮುಖ್ಯಸ್ಥ, ಚಿಂತಕ ಚನ್ನಬಸವಣ್ಣ, ಬಳ್ಳಾರಿ ರಾಘವ ಹಾಗೂ ಜೋಳದರಾಶಿ ದೊಡ್ಡನಗೌಡರು ರಂಗಭೂಮಿ ಕ್ಷೇತ್ರದಲ್ಲಿ ನೀಡಿದ ಅನನ್ಯ ಕೊಡುಗೆ ಕುರಿತು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೇಖಕ ಮೃತ್ಯುಂಜಯ ರುಮಾಲೆ ಅವರು ಬಳ್ಳಾರಿ ರಾಘವರು ವಿಶ್ವಮಾನ್ಯ ರಂಗಕರ್ಮಿಯಾಗಿ ಬೆಳೆದ ಪರಿಯನ್ನು ಸ್ಮರಿಸಿದರು.ರವೀಂದ್ರನಾಥ ಟ್ಯಾಗೋರ್ ಅವರು ಬಳ್ಳಾರಿ ರಾಘವ ಅವರನ್ನು ಪಶ್ಚಿಮಬಂಗಾಳಕ್ಕೆ ಕರೆಯುತ್ತಾರೆ. ಸರೋಜಿನಿ ನಾಯ್ಡು ಬಳ್ಳಾರಿ ರಾಘವರಿಗೆ ವೇದಿಕೆಯಲ್ಲಿ ನಮಸ್ಕರಿಸಿ, ನಿಮ್ಮಂತಹ ಕಲಾವಿದರನ್ನು ಪಡೆದ ಭಾರತ ದೇಶವೇ ಧನ್ಯ ಎನ್ನುತ್ತಾರೆ. ಬಳ್ಳಾರಿ ರಾಘವರಿಗೆ ಸಿಕ್ಕ ಗೌರವ, ಇಡೀ ಬಳ್ಳಾರಿ ಜಿಲ್ಲೆಗೆ ಸಿಕ್ಕ ಗೌರವ ಎಂದು ಹೇಳಿದರು.
ಬಳ್ಳಾರಿ ರಾಘವರು, ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಪೈಲ್ವಾನ್ ರಂಜಾನಸಾಬ್ ಹಾಗೂ ಜೋಳದರಾಶಿ ದೊಡ್ಡನಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಹಾಗೂ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಉಪಸ್ಥಿತರಿದ್ದರು.
ರಂಗತೋರಣ ಅಧ್ಯಕ್ಷ ಪ್ರೊ. ಆರ್. ಭೀಮಸೇನ ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮ ಮುನ್ನ ಕವಿತಾ ಗಂಗೂರು ಹಾಗೂ ಕೆ. ವಸಂತಕುಮಾರ್ ಅವರಿಂದ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.
2023ನೇ ಸಾಲಿನ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರಶಸ್ತಿ ಪುರಸ್ಕೃತರಾದ ಡಿ. ಹನುಮಕ್ಕ ಅನಾರೋಗ್ಯ ಹಿನ್ನೆಲೆಯಲ್ಲಿ ಗೈರಾಗಿದ್ದರು. ನೂರಾರು ರಂಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.