ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಪತ್ರಿಕಾರಂಗವು ಬಹುಮುಖ್ಯ ಕೊಡುಗೆ ನೀಡಿದೆ. ಸರ್ಕಾರ ಏನೇ ತಪ್ಪು ಮಾಡಿದರೂ ಆ ಕುರಿತು ಸುದ್ದಿ ಪ್ರಸಾರ ಮಾಡುವ ಜತೆಗೆ ಸಮಾಜಮುಖಿ ಕೆಲಸದಲ್ಲಿ ಪತ್ರಕರ್ತರು ತೊಡಗಿಕೊಳ್ಳಬೇಕು.
ಯಲಬುರ್ಗಾ:
ಪವಿತ್ರವಾದ ಪತ್ರಿಕಾ ವೃತ್ತಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ತ್ರಿಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕದಿಂದ ಇತ್ತೀಚೆಗೆ ನಡೆದ ಪತ್ರಿಕಾ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಪತ್ರಿಕಾರಂಗವು ಬಹುಮುಖ್ಯ ಕೊಡುಗೆ ನೀಡಿದೆ. ಸರ್ಕಾರ ಏನೇ ತಪ್ಪು ಮಾಡಿದರೂ ಆ ಕುರಿತು ಸುದ್ದಿ ಪ್ರಸಾರ ಮಾಡುವ ಜತೆಗೆ ಸಮಾಜಮುಖಿ ಕೆಲಸದಲ್ಲಿ ಪತ್ರಕರ್ತರು ತೊಡಗಿಕೊಳ್ಳಬೇಕು ಎಂದರು.
ಶಿಕ್ಷಕ ದೇವೇಂದ್ರ ಜಿರ್ಲಿ ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳ ಪೈಕಿ ನಾಲ್ಕನೇ ಸ್ತಂಭವಾಗಿ ಪತ್ರಿಕಾರಂಗವನ್ನು ಪರಿಗಣಿಸಲಾಗಿದೆ. ಪತ್ರಿಕೋದ್ಯಮ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂಪರ್ಕಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತನ್ಮೂಲಕ ಜನರ ಕುಂದು-ಕೊರತೆ ಪರಿಹರಿಸುವ ಮಹತ್ತರ ಕೆಲಸ ಮಾಡುತ್ತಿದೆ. ಪತ್ರಿಕೆ, ಪತ್ರಕರ್ತ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದು ಹೇಳಿದರು.
ಪತ್ರಕರ್ತ ಬಸವರಾಜ ಮುಂಡರಗಿ ಮಾತನಾಡಿದರು. ಮೈಸೂರಿನ ನಿರಂಜನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಗ್ರಾಪಂ ಅಧ್ಯಕ್ಷೆ ಮಮ್ತಾಜ್ಬಿ ಹಿರೇಮನಿ, ತಾಪಂ ಸಹಾಯಕ ನಿರ್ದೇಶಕ ಎಫ್.ಡಿ. ಕಟ್ಟಿಮನಿ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಶ್ರೀಕಾಂತಗೌಡ ಮಾಲಿಪಾಲ್, ತ್ರಿಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರು ದೇಸಾಯಿ, ಗಣ್ಯರಾದ ಯಲ್ಲಪ್ಪ ಹುನಗುಂದ, ವಿಶ್ವನಾಥ ಕಮತರ, ವೀರಣ್ಣ ನಿಂಗೋಜಿ, ಶರಣಪ್ಪ ಪುರ್ತಗೇರಿ, ಚನ್ನಮ್ಮ ಆರ್. ಪಾಟೀಲ್, ಸುನಿತಾ ಪತಂಗರಾಯ ಸೇರಿದಂತೆ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.