ಕನ್ನಡ ಸಾಹಿತ್ಯಕ್ಕೆ ಜೆ.ಪಿ.ದೊಡ್ಡಮನಿ ಕೊಡುಗೆ ಅನನ್ಯ

KannadaprabhaNewsNetwork |  
Published : Jun 16, 2025, 01:23 AM IST
ಅಥಣಿ | Kannada Prabha

ಸಾರಾಂಶ

ಜೆ.ಪಿ.ದೊಡಮನಿ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಬಹುಮುಖ ಸಾಧನೆ ತೋರಿ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಿದ ಡಾ.ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠವಾದುದು. ಅವರ ಅನುವಾದ ಜ್ಯೋತಿ, ಈ ಅಭಿನಂದನಾ ಗ್ರಂಥವು ಕೇವಲ ಒಂದು ಪುಸ್ತಕವಲ್ಲ. ಅವರ ಸಮಗ್ರ ವ್ಯಕ್ತಿತ್ವ ಅರ್ಥಮಾಡಿಕೊಳ್ಳುವ ಹೊತ್ತಿಗೆಯಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಹೇಳಿದರು.

ಇಲ್ಲಿನ ಮೋಟಗಿ ಮಠದ ಅನುಭವ ಮಂಟಪ ವೇದಿಕೆಯಲ್ಲಿ ಭಾನುವಾರ ಡಾ.ಜೆ.ಪಿ.ದೊಡಮನಿ ಅಭಿನಂದನಾ ಸಮಿತಿ, ಅಥಣೀಶ ಯುವ ವೇದಿಕೆ ಹಾಗೂ ವಿವಿಧ ಸಾಹಿತ್ಯ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತಿ ಜೆ.ಪಿ.ದೊಡಮನಿ ಸಾಹಿತ್ಯ ಅವಲೋಕನ, ಅಭಿನಂದನೆ, ಅನುವಾದ ಜ್ಯೋತಿ, ಸಂಕೀರ್ಣ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜೆ.ಪಿ.ದೊಡಮನಿ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಬಹುಮುಖ ಸಾಧನೆ ತೋರಿ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಸೃಜನಶೀಲ ಸಾಹಿತ್ಯ ಮತ್ತು ದಾರ್ಶನಿಕರ ಜೀವನ ಚರಿತ್ರೆ ಕನ್ನಡ ಭಾಷೆಯಲ್ಲಿ ಅನುವಾದಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಸಾವಿತ್ರಿಬಾಯಿ ಪುಲೆ, ಜ್ಯೋತಿಬಾಪುಲೆ, ಅಂಬೇಡ್ಕರ್‌, ಶಾಹು ಮಹಾರಾಜ ಸೇರಿದಂತೆ ಇನ್ನಿತರ ಗ್ರಂಥಗಳನ್ನು ಅನುವಾದಿಸಿದ್ದಾರೆ. ಜೆಪಿ ದಂಪತಿ ನನ್ನ ಶಿಷ್ಯರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಭಾ ಬೋರಗಾಂವಕರ ಒಲವ ಉಡುಗೊರೆ ಎಂಬ ಭಾವಗೀತೆಗಳ ದ್ವನಿಸುರುಳಿ ಬಿಡುಗಡೆಗೊಳಿಸಿದ ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ ಡಾ.ಮುರಿಗೆಪ್ಪ ಮಾತನಾಡಿ, ಡಾ.ಜೆ.ಪಿ.ದೊಡಮನಿ ಹಾಗೂ ಪ್ರಭಾ ಅವರ ಸಾಹಿತಿಕ ದಾಂಪತ್ಯ ಜೀವನ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಲೋಕಕ್ಕೆ ಮೌಲ್ಯವುತ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರದು ಅಪರೂಪದ ದಾಂಪತ್ಯ ಜೀವನ. ಅವರು ನಮ್ಮ ಶಿಷ್ಯರೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಚಿತ್ತರಗಿ ಇಳಕಲ್ಲ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಸಾಹಿತಿ ದೊಡಮನೆಯವರ ಅಭಿನಂದನಾ ಸಮಾರಂಭವು ಒಂದು ಅನುಭಾವದ ವೇದಿಕೆಯಾಗಿದೆ. ವಿದ್ವಾಂಸ ಡಾ.ಕಲಬುರ್ಗಿಯವರ ಅರಿವಿನ ಸಂಸ್ಕಾರದಲ್ಲಿ ಜೆ.ಪಿಯವರು ಕ್ರಿಯಾಶೀಲ ಮೂರ್ತಿಗಳಾಗಿ ಬೆಳೆದಿದ್ದಾರೆ. ಅಜ್ಞಾನದಲ್ಲಿರುವ ಸಮಾಜಕ್ಕೆ ತಮ್ಮ ಸಾಹಿತ್ಯದ ಶಕ್ತಿ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಂದ ಇನ್ನಷ್ಟು ಶ್ರೇಷ್ಠ ಗ್ರಂಥಗಳು ನಾಡಿಗೆ ದೇಶಕ್ಕೆ ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನ ಸುಖಕರವಾಗಿರಲಿ, ಅವರಿಂದ ಇನ್ನಷ್ಟು ಶ್ರೇಷ್ಠವಾದ ಗ್ರಂಥಗಳು ಮೂಡಿಬರಲಿ ಎಂದರು. ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಎ.ಹಡಗಲಿ ಜೆಪಿ ಅವರ ಸಂಕೀರ್ಣ ಗ್ರಂಥಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಖ್ಯಾತ ಸಾಹಿತಿ ಡಾ.ವ್ಹಿ.ಎಸ್.ಮಾಳಿ ದೊಡ್ಮನಿಯವರ ಒಟ್ಟು ಸಾಹಿತ್ಯ ಅವಲೋಕನ ಕುರಿತು ಮಾತನಾಡಿದರು. ಜಮಖಂಡಿ ಪ್ರಾಧ್ಯಾಪಕ ಡಾ. ವೈ.ವೈ.ಕೊಕ್ಕನವರ ಅಭಿನಂದನಾ ನುಡಿ ಆಡಿದರು.

ಅಭಿನಂದನಾ ಸಮಿತಿಯ ಸನ್ಮಾನ ಸ್ವೀಕರಿಸಿ ಡಾ.ಜೆ.ಪಿ.ದೊಡಮನಿ ಮಾತನಾಡಿ, ನನಗೆ ದಲಿತ ಎಂಬ ಭಾವನೆ ಎಲ್ಲಿಯೂ ಕಾಡಲಿಲ್ಲ, ಎಲ್ಲರೂ, ಎಲ್ಲ ಸಮಾಜದವರು ಆತ್ಮೀಯವಾಗಿ ಕಂಡಿದ್ದಾರೆ. ನಾನು ಕೂಡಾ ಮಾನವೀಯತೆ ಆಧಾರದ ಮೇಲೆ ಸಾಹಿತ್ಯ ರಚನೆ ಮಾಡಿದ್ದೇನೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನ ಎಲ್ಲ ಗುರುಗಳು ಕೂಡಾ ಪ್ರೀತಿಯಿಂದ ಮಾರ್ಗದರ್ಶನ ಮಾಡಿದರು. ಮಠಗಳ ಆಶ್ರಯದಲ್ಲಿ ಬೆಳೆದ ನಾನು ಬಡತನ ಸಂಕಷ್ಟ ಎದುರಿಸಿ ಶಿಕ್ಷಣ ಮುಗಿಸಿದ್ದೇನೆ. ಪ್ರಭಾ ಅವಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದೇವೆ. ಅವರು ಸಾಹಿತಿಗಳಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ನಾನು ಏಳು ಗ್ರಂಥಗಳನ್ನು ರಚಿಸಿದ್ದೇನೆ ಎಂದರು.

ನಂತರ ಸಂಘಟನೆಯ ಪದಾಧಿಕಾರಿಗಳು, ಅಭಿಮಾನಿಗಳು, ದೊಡಮನಿ ಬಂಧುಗಳು ಡಾ.ಜೆ.ಪಿ ದೊಡಮನಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಮಹೇಶ ಕಾಂಬಳೆ ಮತ್ತು ಸಂಗಡಿಗರು ಭಾವಗೀತೆಗಳನ್ನು ಪ್ರಸ್ತುತಪಡಿಸಿದ್ದರು. ಸಾಹಿತಿ, ಶಿಕ್ಷಕಿ ಪ್ರಭಾ ಬೋರಗಾಂವಕರ ಸ್ವಾಗತಿಸಿದರು. ಡಾ.ಪ್ರಿಯಂವದಾ ಹುಲಗಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಮಣ್ಣ ದೊಡ್ಡನಿಂಗಪ್ಪಗೋಳ ನಿರೂಪಿಸಿದರು. ಡಾ. ದುರ್ಗಪ್ಪ ದೊಡ್ಡಮನಿ ವಂದಿಸಿದರು.

ಅಭಿನಂದನಾ ಸಮಿತಿಯವರು, ಸಾಹಿತ್ಯ ಅಭಿಮಾನಿಗಳು ಪ್ರೀತಿಯಿಂದ ಅಭಿನಂದನಾ ಸಮಾರಂಭ ಆಯೋಜಿಸುವ ಮೂಲಕ ನಮ್ಮನ್ನು ಸನ್ಮಾನಿಸಿದ್ದೀರಿ. ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ, ಸ್ಪೂರ್ತಿದಾಯಕ ಮಾತುಗಳನ್ನಾಗಿ ಹರಸಿದ ಪೂಜ್ಯರಿಗೆ, ನನ್ನ ಗುರುಗಳಿಗೆ, ಅತಿಥಿಗಳಿಗೆ, ಎಲ್ಲ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಡಾ.ಜೆ.ಪಿ.ದೊಡಮನಿ, ಖ್ಯಾತ ಸಾಹಿತಿ ಅಥಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ