ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಒಂದು ನಾಣ್ಯದ ಎರಡು ಮುಖವಿದ್ದಂತೆ, ಒಂದು ಮುಖಕ್ಕೆ ಕಪ್ಪು ಚುಕ್ಕೆ ಬಂದರೂ ಸಹ ಇಡೀ ನ್ಯಾಯಾಂಗಕ್ಕೆ ಕಪ್ಪು ಚುಕ್ಕೆ ಬಂದಂತೆ. ಕ್ಷಕಿದಾರರು ಎಲ್ಲಿಯೂ ನ್ಯಾಯ ಸಿಗದೇ ಇರುವ ಸಂದರ್ಭದಲ್ಲಿ ವಕೀಲರ ಬಳಿಗೆ ಬರುತ್ತಾರೆ, ಇಂತಹ ಸನ್ನಿವೇಶದಲ್ಲಿ ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡಬೇಕು, ಅಗತ್ಯ ಸಾಕ್ಷಿಗಳ ಆಧಾರ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿ, ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ಆದ್ದರಿಂದ ಬಡ ಜನರಿಗೆ ಧ್ವನಿಯಾಗಿ, ಅವರ ಕಷ್ಟಗಳಿಗೆ ಸಹಾಯಕರಾಗಿ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದರು. ಇತ್ತೀಚಿನ ದಿನಗಳಲ್ಲಿ ಹಣದ ಅಗತ್ಯತೆ ಹೆಚ್ಚಿದ್ದರೂ ಸಹ ಕಿರಿಯ ವಕೀಲರು ಹಿರಿಯ ವಕೀಲರ ಮಾರ್ಗದರ್ಶನದ ಜತೆಗೆ ಜ್ಞಾನ ಪಡೆಯಲು ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಮುನ್ನಡೆದಲ್ಲಿ ಸರಸ್ಪತಿ ನಿಮ್ಮ ಕೈ ಹಿಡಿಯುತ್ತಾರೆ, ಆಗ ಲಕ್ಷ್ಮೀ ನಿಮ್ಮಲಿಗೆ ಬರುವುದರಿಂದ ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದರು. ಡಿಸೆಂಬರ್ ೧೩ರಂದು ಬೃಹತ್ ಲೋಕ ಅದಾಲತ್ ನಡೆಯಲಿದ್ದು, ವಕೀಲರ ಸಹಕಾರ ಜತೆಗೆ ಇದರ ಪ್ರಯೋಜನವನ್ನು ಕಕ್ಷಿದಾರರಿಗೆ ಒದಗಿಸುವ ನಿಟ್ಟಿನಲ್ಲಿ ನಿಮ್ಮ ಸಹಕಾರ ಅಗತ್ಯವೆಂದರು.
ಸಂವಿಧಾನ ಪೀಠಿಕೆಯ ಪ್ರಮಾಣವಚನವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅವರು ಬೋಧಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತ ಮಹಾಂತೇಶ್ ಮನವಳ್ಳಿಮರ್, ರಾಷ್ಟ್ರೀಯ ಪತ್ರಿಕಾ ಮಂಡಳಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಬಿ. ಮಾತನಾಡಿದರು. ಕ್ರೀಡಾಕೂಟದ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿದ ಹಿರಿಯ ವಕೀಲ ಆರ್. ಡಿ. ರವೀಶ್ ಹಾಗೂ ಕೆ. ರವಿ ಅವರನ್ನು ಗೌರವಿಸಲಾಯಿತು ಮತ್ತು ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚೇತನ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಎಂ.ವಿ, ಅಪಾರ ಸರ್ಕಾರಿ ಸಹಾಯಕ ಅಭಿಯೋಜಕರಾದ ಸುರೇಶ ಜಿ.ಎಸ್, ಹಿರಿಯ ಸಿವಿಲ್ ನ್ಯಾಯಾಲಯದ ಸಹಾಯಕ ಅಭಿಯೋಜಕ ಸುನೀಲ್ ಕುಮಾರ್, ಪ್ರಧಾನ ಸಿವಿಲ್ ನ್ಯಾಯಾಲಯದ ಸಹಾಯಕ ಅಭಿಯೋಜಕಿ ಶಿವಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರಾದ ಸಂಗೀತಾ ಪ್ರಾರ್ಥಿಸಿದರು, ಜಯಪ್ರಕಾಶ್ ಸ್ವಾಗತಿಸಿದರು, ರಾಜಶೇಖರಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.