)
- ಉಪ ಚುನಾವಣೆಗೆ ಬಂದ ಗೃಹಲಕ್ಷ್ಮಿ ಮತ್ತೆ ಜಿಪಂ, ತಾಪಂ ಚುನಾವಣೆಗೆ ಬರೋದು: ವಿಜಯೇಂದ್ರ ಟೀಕೆ - - -
ಉಚಿತ ಅಂತಾ ತಮಿಳುನಾಡಿನ ಜನರಿಗೆ ಹೇಳಿದ್ದ ಸ್ಟಾಲಿನ್ಗೆ ಮನೆ ಖಚಿತವಾಗಿದ್ದು, ಗ್ಯಾರಂಟಿ ಹೆಸರನ್ನು ಹೇಳಿಕೊಂಡು ಚುನಾವಣೆ ಮಾಡುತ್ತಿರುವ ಕಾಂಗ್ರೆಸ್ಸಿಗೂ ಮನೆ ಗ್ಯಾರಂಟಿಯಾಗಿದ್ದು, ಡಿಎಂಕೆ ಸ್ಥಿತಿಯೇ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಶ್ರೀನಿವಾಸ ತಾಯಿ, ಪತ್ನಿ, ಸಹೋದರ ಗಣೇಶ, ಸಹೋದರಿಯರು, ಕುಟುಂಬ ವರ್ಗಕ್ಕೆ ಧೈರ್ಯ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಉಚಿತ ಉಚಿತ ಅಂತಾ ಹೇಳಿದ್ದ ಸ್ಟಾಲಿನ್ಗೆ ಮನೆ ಹೇಗೆ ಖಚಿತವಾಗಿದೆಯೋ ಅದೇ ಸ್ಥಿತಿ ಗ್ಯಾರಂಟಿ ಜಪಿಸುವ ಕಾಂಗ್ರೆಸ್ಸಿಗೆ ಕರ್ನಾಟಕದಲ್ಲೂ ಮನೆ ಗ್ಯಾರಂಟಿ ಎಂದರು.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನವರೇ ಉಳಿದ 2 ವರ್ಷಕ್ಕಾದರೂ ಗೆಲ್ಲಿಸುವಂತೆ ತಮ್ಮ ಅಭ್ಯರ್ಥಿ ಪರವಾಗಿ ಹೇಳಿಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶ, ಸ್ಟ್ರಾಂಗ್ ರೂಂ ಬೀಗ ಒಡೆದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಮುಂದೆ ಏನು ಮಾಡಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ದಾವಣಗೆರೆ ದಕ್ಷಿಣದ ಬಗ್ಗೆ ನಾವು ಬಹಳ ನಿರೀಕ್ಷೆ ಹೊಂದಿದ್ದೆವು ಎಂದು ಅವರು ತಿಳಿಸಿದರು.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ನಮ್ಮ ಕಣ್ಣ ಮುಂದಿದೆ. ನಾವು ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ಅದರಲ್ಲೂ ದಾವಣಗೆರೆ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ಪರ ಮತದಾರರ ಒಲವು ಇರುತ್ತದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಎರಡೂ ಕಡೆ ಅನುಕಂಪ, ಆಡಳಿತ ಪಕ್ಷದ ವ್ಯವಸ್ಥೆ, 10-15 ದಿನಗಳ ಕಾಲ ಸಿಎಂ ಬೀಡುಬಿಟ್ಟಿದ್ದು ಸಹ ಪರಿಣಾಮ ಬೀರಿದೆ. ಸಚಿವರು ಹಳ್ಳಿ ಹಳ್ಳಿಗೆ ಬಂದು, ಕುಳಿತಿದ್ದರು. ಇದನ್ನು ತಪ್ಪು ಅಂತಾ ನಾನು ಹೇಳುವುದಿಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಕಾಲದಲ್ಲಿ 17 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳ ಉಪ ಚುನಾವಣೆ ನಾವು ಗೆದ್ದಿದ್ದೆವು ಎಂದು ತಿಳಿಸಿದರು.
ದಕ್ಷಿಣ ಕ್ಷೇತ್ರದಲ್ಲಿ ಸುಮಾರು 70 ಸಾವಿರ ಮತಗಳ ಗುರಿಯೊಂದಿಗೆ ನಮ್ಮ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಶ್ರಮ ಹಾಕಿದ್ದರು. ನಮ್ಮ ಪ್ರಯತ್ನ ಎಲ್ಲೋ ಒಂದಿಷ್ಟು ಕಡಿಮೆಯಾಯಿತು ಅನಿಸುತ್ತದೆ. ಆಡಳಿತ ಪಕ್ಷದ ಹಣ ಬಲದ ಬಗ್ಗೆ ನಾನು ಮಾತನಾಡುವುದಿಲ್ಲ. ಶ್ರೀನಿವಾಸ ಇಲ್ಲಿ ಶಕ್ತಿ ಮೀರಿ, ಗೆಲ್ಲಲೇಬೇಕೆಂದು ಹಠ ತೊಟ್ಟು, ಸಂಘಟನೆ, ಸಹಕಾರದಲ್ಲಿ ಒಳ್ಳೆಯ ಚುನಾವಣೆ ಮಾಡಿದ್ದಾರೆ. ಎಲ್ಲೋ ಒಂದು ಕಡೆ ನಮ್ಮ ಅದೃಷ್ಟ ಕೈಹಿಡಿಯಲಿಲ್ಲ. ಕಳೆದ ಬಾರಿ ಬಿ.ಜಿ.ಅಜಯಕುಮಾರ ಸಹ ಸಾಕಷ್ಟು ಶ್ರಮ ಹಾಕಿದ್ದರು. ಶ್ರೀನಿವಾಸ, ಅಜಯಕುಮಾರ ಇಬ್ಬರ ನಡವಳಿಕೆ ಗಮನಿಸಿದ್ದೇನೆ. ಜನಾನುರಾಗಿ ವ್ಯಕ್ತಿತ್ವ ಗಮನಿಸಿದ್ದೇವೆ. ಬರುವ ದಿನಗಳು ಬಿಜೆಪಿ ದಿನಗಳೆಂದಷ್ಟೇ ಹೇಳಬಲ್ಲೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಂ.ಬಸವರಾಜ ನಾಯ್ಕ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಿ.ಸಿ. ಶ್ರೀನಿವಾಸ ಭಟ್, ದೊಗ್ಗಳ್ಳಿ ವೀರೇಶ, ಎನ್.ಎಂ. ಮುರುಗೇಶ, ಧನಂಜಯ ಕಡ್ಲೇಬಾಳು, ಗಣೇಶ ಟಿ.ದಾಸಕರಿಯಪ್ಪ, ಶ್ರೀಮತಿ ದಾಸಕರಿಯಪ್ಪ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬ ವರ್ಗ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
(ಬಾಕ್ಸ್)
- - -