ದಾವಣಗೆರೆ: ವಿಕಲಚೇನತರಿಗೆ ಅನುಕಂಪದ ಬದಲಿಗೆ ಸ್ವಾವಲಂಬಿಯಾಗಿ ಬಾಳಲು ಪೂರಕ ವಾತಾವರಣ, ಪ್ರೋತ್ಸಾಹ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾ.ಮಹಾವೀರ ಮ.ಕರೆಣ್ಣವರ ಕರೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಏನೆಬಲ್ ಇಂಡಿಯಾ ಬೆಂಗಳೂರು, ಸ್ಫೂರ್ತಿ ಸಂಸ್ಥೆ, ಕರ್ನಾಟಕ ರಾಜ್ಯ ಆರ್ಪಿಡಿ ಟಾಸ್ಕ್ಫೋರ್ಸ್, ಸಂಸ್ಥೆಗಳ ಒಕ್ಕೂಟದಿಂದ ಪಿಡಬ್ಲ್ಯುಡಿ ಕಾಯ್ದೆ-2016 ಮತ್ತು ಶೇ.5ರಷ್ಟು ಅನುದಾನ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಿಡಬ್ಲ್ಯೂಡಿ ಕಾಯ್ದೆ-2016 ಮತ್ತು ಶೇ.5ರಷ್ಟು ಅನುದಾನದಲ್ಲಿ ವಿಶೇಷ ಚೇತನರಿಗೆ ಗೌರವಯುತ, ಸ್ವಾಭಿಮಾನದ ಬದುಕು ಬಾಳಲು ಪ್ರೋತ್ಸಾಹಿಸಬೇಕು ಎಂದರು.ನ್ಯಾಯಾಧೀಶರನ್ನು ಒಳಗೊಂಡ ಜಿಲ್ಲಾ ಸಮಿತಿಯು ವಿಶೇಷ ಚೇತನರ ಬಗ್ಗೆ ಗಮನ ಹರಿಸುತ್ತದೆ. ವಿಶೇಷ ಚೇತನರನ್ನು ಆರ್ಥಿಕವಾಗಿ ಸಬಲರಾಗಿಸುವ ಕೆಲಸ ಆಗಬೇಕು. ಸ್ವಾವಲಂಬಿಯಾಗಿ ಬದುಕಲು ಅನುವು ಮಾಡಿಕೊಡಬೇಕು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಬಿ.ಮಲ್ಲಾನಾಯ್ಕ ಮಾತನಾಡಿ, ಯಾವುದೇ ಯೋಜನೆಗಳನ್ನು ರೂಪಿಸುವಾಗ ಶೇ.5ರಷ್ಟು ಅನುದಾನ ಮೀಸಲಿಡಲಾಗುತ್ತದೆ. ಶೇ.5ರಷ್ಟು ಅನುದಾನವೆಂದರೆ ಅಷ್ಟೇ ಹಣ ಮೀಸಲು ಇಡಬೇಕೆಂದಲ್ಲ. ಅವಶ್ಯಕತೆ ನೋಡಿಕೊಂಡು, ಶೇ.5ರ ಪ್ರಮಾಣ ಹೆಚ್ಚಿಸುವುದಕ್ಕೂ ಅವಕಾಶವಿದೆ. ವಿಶೇಷ ಚೇತನರಿಗೆ ವಿಶೇಷ ಆದ್ಯತೆ ನೀಡುವ ಪಿಡಬ್ಲ್ಯೂಡಿ ಕಾಯ್ದೆ, ಅನುದಾನದ ಬಗ್ಗೆ ಎಲ್ಲಾ ತಾಪಂ, ಗ್ರಾಪಂಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲೆಯ ಕೆಲವು ಗ್ರಾಪಂಗಳು ಡಿಜಿಟಲ್ ಗ್ರಂಥಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ಅದೇ ಮಾದರಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದರು.ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಮಭೋವಿ ಮಾತನಾಡಿ, ಯಾವುದೇ ಸೌಲಭ್ಯ ಕಲ್ಪಿಸುವಾಗ ಅದನ್ನು ನಿರಂತರವಾಗಿ ಬೆನ್ನು ಹತ್ತಿ, ಫಲಾನುಭವಿ ವಿಶೇಷ ಚೇತನರಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಡಾ.ಕೆ.ಪ್ರಕಾಶ, ಬೆಂಗಳೂರಿನ ಏನೆಬಲ್ ಇಂಡಿಯಾದ ಕಾರ್ಯ ನಿರ್ವಾಹಕ ಸಂಪರ್ಕ ಅಧಿಕಾರಿ ಸತ್ಯನಾರಾಯಣ, ರಾಜ್ಯ ಆರ್ಪಿಡಿ ಟಾಸ್ಕ್ಫೋರ್ಸ್ ಸ್ವ.ಸೇ. ಸಂಸ್ಥೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಬೆಂಗಳೂರಿನ ಸಿಬಿಆರ್ ಫೋರಂನ ಸಂಪನ್ಮೂಲ ವ್ಯಕ್ತಿಗಳಾದ ಅರುಣಕುಮಾರ, ಸುಧೀಂದ್ರ ಕುಮಾರ ಇತರರು ಇದ್ದರು.