ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಭುವನೇಶ್ವರಿ ವೃತ್ತದಲ್ಲಿ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ನಾಗಮೋಹನ್ ದಾಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವೆಂಕಟರಮಣಸ್ವಾಮಿ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ವರದಿ ಅವೈಜ್ಞಾನಿಕವಾಗಿದೆ. ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ನಾಗಮೋಹನ್ ದಾಸ್ ಅವರು ಹೊಲಯ ಸಮುದಾಯಕ್ಕೆ ಮರಣ ಶಾಸನ ವರದಿ ನೀಡಿದ್ದಾರೆ. ಹಾಗಾಗಿ ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡದೇ ತಿರಸ್ಕರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಚಿವ ಸಂಪುಟ ಕರೆದು ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ಸಲ್ಲಿಸಿರುವ ಸಮೀಕ್ಷೆ ವರದಿಯನ್ನು ಪುನರ್ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಲಗೈ ಸಮುದಾಯಕ್ಕೆ ಸೇರಿದ ಛಲವಾದಿ/ ಹೊಲಯ ಒಳಮೀಸಲಾತಿಯ ಜಾಗೃತಿ ಸಮಿತಿಯ ಪ್ರಮುಖರು, ಜಿ.ಪಂ..ಮಾಜಿ ಅಧ್ಯಕ್ಷ ,ಅಯ್ಯನಪುರ ಶಿವಕುಮಾರ್, ಸಿ.ಎಂ.ಶಿವಣ್ಣ, ಆಲೂರು ನಾಗೇಂದ್ರ, ನಾಗಯ್ಯ, ವಕೀಲ ದಲಿತರಾಜ್, ಆಟೋ ಉಮೇಶ್ , ನಾಗೇಶ್, ಶಿವಣ್ಣ ಇತರರು ಭಾಗವಹಿಸಿದ್ದರು.