ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗದ ಕೋತಿರಾಜ್ ಆಲಿಯಾಸ್ ಜ್ಯೋತಿರಾಜ್ ಎಂಬ ಸ್ಪೈಡರ್ ಮ್ಯಾನ್ ಭಾನುವಾರ ವಿವಾಹವಾಗುವ ಮೂಲಕ ನವಜೀವನಕ್ಕೆ ಕಾಲಿಟ್ಟಿದ್ದಾರೆ.
ನೋಡುಗರನ್ನು ಕ್ಷಣಕಾಲ ದಂಗಾಗುವಂತೆ ಕೋಟೆಯ ಕಲ್ಲುಗಳನ್ನು ಕೋತಿಯಂತೆ ಮೇಲೇರುವ ಈತನ ಸಾಹಸಕ್ಕೆ ತಲೆದೂಗದವರೇ ಇಲ್ಲ. ಚಿತ್ರದುರ್ಗ ಕೋಟೆ ಮಾತ್ರವಲ್ಲದೇ ರಾಜ್ಯದ ಬೇರೆ ಭಾಗಗಳಲ್ಲೂ ಇಂತಹ ಸಾಹಸ ಮಾಡುವ ಮೂಲಕ ರಾಜ್ಯದಾದ್ಯಂತ ದೊಡ್ಡ ಹೆಸರು ಮಾಡಿದ್ದರು.
ಇಂತಹ ಸಾಹಸಿಗ ಇದೀಗ ಚಳ್ಳಕೆರೆಯ ಬಾಳ ಸಂಗಾತಿಯೊಂದಿಗೆ ಅಸಂಖ್ಯಾತ ಅಭಿಮಾನಿಗಳು, ಮಾರ್ಗದರ್ಶಕರು, ಕುಟುಂಬಸ್ಥರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ದಾರೆ.ಸ್ಪೈಡರ್ ಮ್ಯಾನ್, ಮಂಕಿಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ರಾಕ್ ಕ್ಲೈಂಬಿಂಗ್ ಸಾಹಸಕ್ಕೆ ಹೆಸರಾಗಿದ್ದಾರೆ. ಜೋಗಜಲಪಾತ ಸೇರಿದಂತೆ ಬೆಂಗಳೂರಿನ ಬಹುಮಹಡಿ ಕಟ್ಟಡವೊಂದನ್ನು ಏರಿ ಹೆಸರಾಗಿದ್ದ.
ಮೂಲತಃ ತಮಿಳುನಾಡಿನವರಾದ ಜ್ಯೋತಿರಾಜ್ ಕರ್ನಾಟಕದ ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ತಮ್ಮ ಸಾಹಸ ಕ್ರೀಡೆಯನ್ನು ಪ್ರದರ್ಶನ ಮಾಡಿ ಹೆಸರಾದವರು. ಕನ್ನಡನಾಡು ನುಡಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುವ ಸಾಹಸಿಗ ಇದೀಗ ವೃತ್ತಿಗೆ ಆಶ್ರಯ ನೀಡಿದ್ದ ಕೋಟೆನಾಡಿನಲ್ಲೇ ವಿವಾಹವಾಗಿರುವುದು ಕನ್ನಡ ನೆಲದ ಬಗ್ಗೆ ಇವರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಕೋತಿರಾಜ್ ಆಲಿಯಾಸ್ ಜ್ಯೋತಿರಾಜ್ ಹಾಗೂ ನಿವೇದಿತಾ ಹೊಸ ಜೀವನಕ್ಕೆ ಅಣಿಯಾದ ಸಂದರ್ಭ.