ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಒಳಮೀಸಲಾತಿ ಅನುಷ್ಠಾನದಲ್ಲಿ ಪರಿಶಿಷ್ಟ ಬಲಗೈ ಸಮುದಾಯದ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಈ ವರದಿಯನ್ನು ಅನುಷ್ಠಾನಗೊಳಿಸಿ ಒಳಮಿಸಲಾತಿ ಜಾರಿಗೊಳಿಸಬಾರದು ಎಂದು ದಲಿತ ಮುಖಂಡ ಕೆ.ಕಬ್ಬಾಳಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಒಳ ಮೀಸಲಾತಿ ಅನುಷ್ಠಾನ ವರದಿ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ ಅವರು, ವರದಿಯಲ್ಲಿ ಪರಿಶಿಷ್ಟ ಬಲಗೈ ಸಮುದಾಯದ ಜಾತಿಗಳಿಗೆ ಅನ್ಯಾಯವಾಗುತ್ತದೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಯಾವುದೇ ಕಾರಣಕ್ಕೂ ಒಳಮಿಸಲಾತಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಸಮರ್ಪಕ ವರದಿ ನೀಡಿದ್ದಾರೆ, ಅಲ್ಲದೆ ಜನಸಂಖ್ಯಾ ಅನುಗುಣವಾಗಿ ಬಲಗೈ ಸಮುದಾಯವನ್ನು ಕಡಿಮೆಯಾಗಿ ವರದಿಯಲ್ಲಿ ತೋರಿಸಿದ್ದು, ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿಯನ್ನು ನಿಗದಿ ಮಾಡಬೇಕು. ಆದರೆ, ನಮ್ಮ ಬಲಗೈ ಸಮುದಾಯದ ಜನಸಂಖ್ಯೆಯೂ ಹೆಚ್ಚಿದ್ದು ವರದಿಯಲ್ಲಿ ಕಡಿಮೆ ತೋರಿಸಲಾಗಿದೆ. ಇದರಿಂದ ಬಲಗೈ ಸಮುದಾಯದ ಜಾತಿಗಳಿಗೆ ತೀರ ಅನ್ಯಾಯವಾಗುತ್ತಿದೆ ಆರೋಪಿಸಿದರು.ಬಲಗೈ ಸಮುದಾಯದ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಒಳ ಮೀಸಲಾತಿ ಸಮೀಕ್ಷೆಗೆ ಒಳಪಡಿಸಲಾಗಿಲ್ಲ. ಸರಿಯಾದ ದತ್ತಾಂಶವನ್ನು ಪಡೆಯುವಲ್ಲಿ ಒಳ ಮಿಸಲಾತಿ ಆಯೋಗ ವಿಫಲವಾಗಿದೆ. ಈ ನಿಟ್ಟಿನಲ್ಲಿ ಈ ವರದಿಯು ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಿ ಕರ್ನಾಟಕ, ಆದಿ ಆಂಧ್ರ, ಅಡಿ ದ್ರಾವಿಡ ಜಾತಿಗಳನ್ನು ಪ್ರತ್ಯೇಕವಾಗಿ ವರ್ಗೀಕರಣಗೊಳಿಸಲಾಗಿದೆ. ಶೇಕಡಾ 1ರಷ್ಟು ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಕಳೆದ ಸದಾಶಿವ ಆಯೋಗದ ವರದಿಯನ್ನು ಆಧರಿಸಿ ಮೀಸಲಾತಿ ನಿಗದಿ ಮಾಡಲಾಗಿದೆ ಎಂದು ದೂರಿದರು.ಬಲಗೈ ಸಮುದಾಯದ ಹೊಲಯ ಛಲವಾದಿ, ಅದಿ ಕರ್ನಾಟಕ ಸಮುದಾಯಗಳ ಹಕ್ಕನ್ನು ಕಸಿಯಲು ಈ ವರದಿಯೂ ಮುಂದಾಗಿದೆ. ನಮ್ಮ ಸಮುದಾಯದ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಈ ವರದಿ ಅನುಷ್ಠಾನಗೊಳಿಸಲು ಬಿಡಬಾರದೆಂದು ಒತ್ತಾಯಿಸಿದರು.
ಈ ವೇಳೆ ದಲಿತ ಮುಖಂಡರಾದ ಕಾಡುಕೊತ್ತನಹಳ್ಳಿ ಮರಿಸ್ವಾಮಿ, ಕರಡಕೆರೆ ಯೋಗೇಶ್, ಹೊನ್ನಲಗೆರೆ ಶಿವಣ್ಣ, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..