ಶಿರಸಿ:
ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವ ಪರಿಚಯಿಸುವ ಕದಂಬೋತ್ಸವ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಚಾಲನೆ ನೀಡಿದರು. ಆನಂತರ ಬನವಾಸಿಯ ಕದಂಬ ಲಾಂಛನವನ್ನು ಅನಾವರಣಗೊಳಿಸಿದರು.ಶಾಲಾ ವಿದ್ಯಾರ್ಥಿಗಳಿಂದ ಕುಂಭಮೇಳ ಹಾಗೂ ಪಥ ಸಂಚಲನ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ವಿವಿಧ ಸರ್ಕಾರದ ಇಲಾಖೆಗಳಿಂದ ಸ್ತಬ್ಧ ಚಿತ್ರಗಳು ಅತ್ಯಾಕರ್ಷಕ ವಾದ್ಯ ತಂಡಗಳೊಂದಿಗೆ ಮೆರವಣಿಗೆ ಪ್ರಾರಂಭಿಸಲಾಯಿತು.ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡು ಕದಂಬ ವೃತ್ತದ ಮೂಲಕ ಸಾಗಿ ಕದಂಬೋತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು.ಮೆರವಣಿಗೆಯಲ್ಲಿ ರಾಜ ಮಹಾರಾಜರ ವೇಷಭೂಷಣ, ಜಾನಪದ ಕಲಾ ತಂಡ, ವಾದ್ಯ ತಂಡ, ನಂದಿ ಧ್ವಜ ಕುಣಿತ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಣೆ ನೀಡಿದವು.೪೧ ಕಲಾ ತಂಡ:ಶಿರಸಿ ಶಾಸಕರ ಮಾದರಿ ಹಿ.ಪ್ರಾ. ಶಾಲೆಯ ವಾದ್ಯತಂಡ, ಹರಿಹರದ ನಂದಿ ಧ್ವಜದ ನಂದಿ ಧ್ವಜ ಕುಣಿತ, ನಿಖಿಲ್ ನಾಯಕ ಸಂಗಡಿಗರ ಮರಕಾಲು ಕುಣಿತ, ಅರಣ್ಯ ಇಲಾಖೆಯ ರೂಪಕ, ಚಿಕ್ಕಮಗಳೂರಿನ ಮಂಜುಶ್ರೀ ಕಲಾ ತಂಡದ ವೀರಗಾಸೆ, ಅರುಣ ಮೊಗವಳ್ಳಿ ತಂಡದ ಡೊಳ್ಳು ಕುಣಿತ, ಶಾಂತಾರಾಮ ಶೆಟ್ಟಿ ತಂಡದ ಗೊಂಬೆ ನೃತ್ಯ, ಅಮಿತ್ ಬನವಾಸಿ ತಂಡದ ರಾಮಲಲ್ಲಾ, ಬನವಾಸಿಯ ಫಕೀರಪ್ಪ ಭಜಂತ್ರಿ ತಂಡದ ಪಂಚವಾದ್ಯ, ಬಾದಾಮಿಯ ಬರಮಲಿಂಗೇಶ್ವರ ಮಹಿಳಾ ತಂಡದ ಡೊಳ್ಳು ಕುಣಿತ, ಬಂಟ್ವಾಳದ ಚಿಲಿಪಿಲಿ ಗೊಂಬೆ ತಂಡದ ಗೊಂಬೆ ನೃತ್ಯ, ಬನವಾಸಿಯ ಉರ್ದು ಶಾಲೆಯ ಬನವಾಸಿ ಹಿರಿಮೆ ರೂಪಕ, ಎಸಳೆಯ ಜಗದೀಶ ನಾಯ್ಕ ಎಸಳೆಯ ಶ್ರೀಕೃಷ್ಣ ರೂಪಕ, ಜೈ ಭೀಮಾ ಕಲಾ ತಂಡದ ಜಾಂಜ್ ಸೇರಿದಂತೆ ಮತ್ತಿತರರು ಕಲಾ ತಂಡಗಳು ಭಾಗವಹಿಸಿದ್ದವು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಪಂ ಸಿಇಒ ಈಶ್ವರ ಕಾಂದೂ, ಶಿರಸಿ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ತಹಸೀಲ್ದಾರ್ ಶ್ರೀಧರ ಮುಂದಲನಿ, ತಾಪಂ ಇಒ ಸತೀಶ ಹೆಗಡೆ, ಬನವಾಸಿ ಗ್ರಾಪಂ ಅಧ್ಯಕ್ಷೆ ಬೇಬಿ ಆಯಿಷಾ ಸೇರಿದಂತೆ ಮತ್ತಿತರರು ಇದ್ದರು.