ಕೈ ಅಭಿಮಾನಿಗಳ ಸಂಭ್ರಮ, ರಾರಾಜಿಸಿದ ಬ್ಯಾನರ್‌, ಫ್ಲೆಕ್ಸ್‌

KannadaprabhaNewsNetwork |  
Published : Jun 04, 2026, 01:45 AM IST
ಅಭಿಮಾನಿಗಳ ಸಂಭ್ರಮ | Kannada Prabha

ಸಾರಾಂಶ

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ ಬುಧವಾರ ರಾಜಧಾನಿ ಬೆಂಗಳೂರು ನಗರದಾದ್ಯಂತ ಶುಭಾಶಯ ಕೋರಿವ ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ಗಳು ರಾರಾಜಿಸಿದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ ಬುಧವಾರ ರಾಜಧಾನಿ ಬೆಂಗಳೂರು ನಗರದಾದ್ಯಂತ ಶುಭಾಶಯ ಕೋರಿವ ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ಗಳು ರಾರಾಜಿಸಿದವು.

ನೂತನ ಮುಖ್ಯಮಂತ್ರಿಗೆ ಶುಭ ಕೋರುವ ಜೊತೆಗೆ, 13 ಸಚಿವರಿಗೂ ಶುಭ ಹಾರೈಸಲು ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಭಾರೀ ಪ್ರಮಾಣದಲ್ಲಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ಗಳನ್ನು ಹಾಕಿದ್ದು, ಎಲ್ಲೆಡೆ ಕಾಂಗ್ರೆಸ್‌ಮಯವಾಗಿತ್ತು. ಡಿ.ಕೆ.ಶಿವಕುಮಾರ್‌ ಅವರ ಸುಮಾರು 100 ಅಡಿಯ ಬೃಹತ್‌ ಕಟೌಟನ್ನೂ ನಿರ್ಮಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಲೋಕಭವನದಲ್ಲಿ ಆಯೋಜಿಸಿದ್ದರಿಂದ ಸೀಮಿತ ಗಣ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಬೇಸರ ಆಗಬಾರದು ಎಂದು ಲೋಕಭವನದ ಸಮೀಪ ಎಲ್‌ಇಡಿ ಅಳವಡಿಸಲಾಗಿತ್ತು. ಪಾದಚಾರಿ ಮಾರ್ಗದಲ್ಲಿ ಆಸನಗಳ ವ್ಯವಸ್ಥೆ ಮಾಡಿದ್ದು ನೇರ ಪ್ರಸಾರವನ್ನು ನೋಡಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಹಲವೆಡೆ ಎಲ್‌ಇಡಿ ಅಳವಡಿಕೆ:

ಲೋಕಭವನದ ಸಮೀಪ ಮಾತ್ರವಲ್ಲದೇ ವಿಧಾನಸೌಧ ಮುಂಭಾಗ, ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿ, ಹಳೆಯ ಕಾಂಗ್ರೆಸ್‌ ಭವನದಲ್ಲೂ ಎಲ್‌ಇಡಿ ವ್ಯವಸ್ಥೆ ಮಾಡಿದ್ದು ಸಾವಿರಾರು ಜನರು ಪ್ರಮಾಣ ವಚನ ಸಮಾರಂಭವನ್ನು ಬೃಹತ್‌ ಪರದೆಯ ಮೇಲೆ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಕಲಾ ತಂಡಗಳ ಮೆರಗು:

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನವೇ ವಿಧಾನಸೌಧದ ಮುಂಭಾಗಕ್ಕೆ ಆಗಮಿಸಿದ್ದ ವಿವಿಧ ಕಲಾ ತಂಡಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. ಚೋಮನ ಕುಣಿತ, ಚಂಡೆ. ಮದ್ದಳೆಯೊಂದಿಗೆ ಡೊಳ್ಳುಕುಣಿತ ಪ್ರದರ್ಶಿಸಿದ ಕಲಾವಿದರು ಗಮನಸೆಳೆದರು.

ಹಬ್ಬದ ವಾತಾವರಣ, ಜಯಘೋಷ:

ಪ್ರಮಾಣ ವಚನ ಸ್ವೀಕರ ಸಮಾರಂಭದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹಬ್ಬದ ವಾತವಾವರಣ ನಿರ್ಮಾಣವಾಗಿತ್ತು. ಪಕ್ಷದ ಬಾವುಟಗಳನ್ನು ಹಿಡಿದು, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಂಪುಟ ಸಹೋದ್ಯೋಗಿಗಳ ಪರವಾಗಿ ಜಯಘೋಷ ಕೂಗಿದರು. ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂತಸ ಹಂಚಿಕೊಂಡರು.

ಡಿಕೆಶಿ ಟ್ಯಾಟ್ಯೂ:

ಕನಕಪುರದ ರವಿ ಎಂಬ ಅಭಿಮಾನಿ ಡಿ.ಕೆ.ಶಿವಕುಮಾರ್‌ ಅವರ ಭಾವಚಿತ್ರದ ಟ್ಯಾಟ್ಯೂ ಅನ್ನು ಎದೆಯ ಮೇಲೆ ಹಾಕಿಸಿಕೊಂಡಿದ್ದು, ಕೈಯಲ್ಲಿ ಶಿವಕುಮಾರ್‌ ಅವರ ಭಾವಚಿತ್ರ ಹಿಡಿದು ವಿಧಾನಸೌಧದ ಮುಂದೆ ಗಮನ ಸೆಳೆದರು. ಕೆಲವು ಅಭಿಮಾನಿಗಳು ಕೆನ್ನೆಯ ಮೇಲೆ ಡಿಕೆಎಸ್‌ ಎಂದು ಬಣ್ಣದಲ್ಲಿ ಬಳಿದುಕೊಂಡು ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವೇತನ ಶ್ರೇಣಿ ಜಾರಿಗೆ ಒತ್ತಾಯಿಸಿ ಮನವಿ
ಜಿಲ್ಲೆಯಲ್ಲಿ ಎಸ್ಐಆರ್‌ ಪ್ರಕ್ರಿಯೆ ಆರಂಭ: ಡಿಸಿ