ನಾಪೋಕ್ಲು: ಕ್ರೀಡೆಗಳು ಕೈಲ್ ಮುಹೂರ್ತ ಹಬ್ಬಕ್ಕಷ್ಟೇ ಸೀಮಿತವಾಗಿರಬಾರದು. ಎಲ್ಲ ಜನಾಂಗದವರು ಒಗ್ಗೂಡಿ ಕ್ರೀಡಾಕೂಟ ಆಚರಿಸುವಂತಾಗಬೇಕು ಎಂದು ಬೆಂಗಳೂರಿನ ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೊಪ್ಪಂಡ ಮಹೇಶ್ ತಿಮ್ಮಯ್ಯ ಹೇಳಿದರು.ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಭಗವತಿ ಯುವಕ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ ಕೈಲ್ ಫೋಳ್ದ್ ಹಬ್ಬದ ಕ್ರೀಡಾಕೂಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬಹು ಜನಾಂಗವನ್ನು ಹೊಂದಿರುವ ಇಲ್ಲಿ ಎಲ್ಲರೂ ಒಟ್ಟು ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತಹವಾಗಲಿ. ಈ ಸಂಘ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದ್ದು ಇನ್ನಷ್ಟು ಉತ್ತಮ ಕಾರ್ಯವನ್ನು ಮಾಡುವಂತಾಗಲಿ ಎಂದ ಅವರು ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೀಯಕಪೂವಂಡ ಸತೀಶ್ ದೇವಯ್ಯ ಹಾಗೂ ಶಿವಚಾಳಿಯಂಡ ಅಂಬಿ ಕಾರಿಯಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಸಭೆಯ ಅಧ್ಯಕ್ಷತೆಯನ್ನು ಭಗವತಿ ಯುವಕ ಸಂಘದ ಅಧ್ಯಕ್ಷ ಬೊಪ್ಪಂಡ ವೀರನ್ ಮುದ್ದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಭಗವತಿ ಯುವಕ ಸಂಘದ ಮಾಜಿ ಅಧ್ಯಕ್ಷ ಕುಲ್ಲೇಟಿರ ದೇವಿ, ನಾಪೋಕ್ಲುವಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಚೋಕಿದ ಪ್ರಭು ಉಪಸ್ಥಿತರಿದ್ದರು.