ಕಲಬುರಗಿಯ ರೇಲ್ವೆ ಒಡಲಿಗೆ ಭಾರತದ ಅತಿ ವೇಗದ ವಂದೇ ಭಾರತ ರೈಲು ಮಾ. 12 ರ ಮಂಗಳವಾರದಿಂದ ಸೇರ್ಪಡೆಗೊಳ್ಳುತ್ತಿದೆ. ಇದರೊಂದಿಗೆ ಕಲಬುರಗಿ ರೈಲ್ವೆ ಇತಿಹಾಸದಲ್ಲೇ ಹೊಸ ಶಕೆ ಶುರುವಾಗಲಿದೆ.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ
ರೈಲು ಸವಲತ್ತು ಹೊಂದುವಲ್ಲಿ ತುಂಬ ಬಡವಾಗಿದ್ದ ಕಲಬುರಗಿಯ ರೇಲ್ವೆ ಒಡಲಿಗೆ ಭಾರತದ ಅತಿ ವೇಗದ ವಂದೇ ಭಾರತ ರೈಲು ಮಾ. 12 ರ ಮಂಗಳವಾರದಿಂದ ಸೇರ್ಪಡೆಗೊಳ್ಳುತ್ತಿದೆ. ಇದರೊಂದಿಗೆ ಕಲಬುರಗಿ ರೈಲ್ವೆ ಇತಿಹಾಸದಲ್ಲೇ ಹೊಸ ಶಕೆ ಶುರುವಾಗಲಿದೆ.
ಬೆಂಗಳೂರಿಗೆ ಹೋಗುವ ರೈಲು, ಬಸ್ಸುಗಳೆಲ್ಲವೂ ರಶ್, ಹೋಗೋದು ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರ ಚಿಂತೆಗೆ ವಂದೇ ಬಾರತ ರೈಲು ಪರಿಹಾರ ನೀಡಿದೆ. ಟಾಯ್ಲೇಟ್, ಬಾಕತ್ ರೂಂ, ಬೋಗಿಯಲ್ಲಿ ಕಂಡ ಕಂಡಲ್ಲೆಲ್ಲಾ ಮಲಗಿಯ, ಕುಳಿತೋ ಬೆಂಗಳೂರಿಗೆ ಹೋಗುವ ಪರ್ವತ ಪ್ರಯಾಸಕ್ಕೆ ವಂದೇ ಭಾರತ ಕೊನೆ ಹೇಳಲಿದೆ.
ಹೀಗಾಗಿ ಮಾ. 12 ರಿಂದ ವಂದೇ ಭಾರತ ಅತಿ ವೇಗದ ರೈಲು ಕಲ್ಬುರ್ಗಿಯಿಂದ ಸಂಚಾರ ಪ್ರಾರಂಭಿಸುತ್ತಿದ್ದು ಜನ ಇದನ್ನು ಹೃದಯ ತುಂಬಿ ಸ್ವಾಗತಿಸುತಿದ್ದಾರೆ. ಇದೇ ಕಾರಣಕ್ಕೆ ಮಾ. 12 ರ ವಂದೇ ಭಾರತ ಹಸಿರು ನಿಶಾನೆ ಸಮಾರಂಭದಲ್ಲಿ 10 ಸಹಸ್ರ ಜನ ಪಾಲ್ಗೊಳ್ಳುವ ಸಂಭವಗಳಿವೆ.
ಪ್ರಧಾನಿ ಮೋದಿ ಚಾಲನೆ: ಕಲಬುರಗಿ ರೈಲ್ವೆ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ವರೆಗೆ ವಾರದಲ್ಲಿ ಆರು ದಿನ ವಂದೇ ಭಾರತ್ ರೈಲು ಗಾಡಿ ಓಡಾಟ ನಡೆಸಲಿದ್ದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗಿನ 9 ಗಂಟೆಗೆ ಈ ರೈಲಿನ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಿದ್ದಾರೆ.
ಕಲ್ಬುರ್ಗಿಯಿಂದ ಬೆಳಗ್ಗೆ 5 .15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೈಯಪ್ಪನಹಳ್ಳಿ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 2.40 ಕ್ಕೆ ಹೊರಟು ರಾತ್ರಿ 11:30ಕ್ಕೆ ಕಲ್ಬುರ್ಗಿ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ. ಬೆಂಗಳೂರು ಬೈಯಪ್ಪನಹಳ್ಳಿ ಯಿಂದ ಗುರುವಾರ ಹಾಗೂ ಕಲ್ಬುರ್ಗಿಯಿಂದ ಶುಕ್ರವಾರ ವಂದೇ ಭಾರತ್ ರೈಲು ಸಂಚಾರ ಇರುವುದಿಲ್ಲ.
ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ: ಕಲಬುರಗಿಯಿಂದ ಬೆಳಗ್ಗೆ 5 .15ಕ್ಕೆ ಹೊರಟು ವಾಡಿಗೆ 5:40ಕ್ಕೆ ರಾಯಚೂರಿಗೆ 06.53, ಮಂತ್ರಾಲಯಂ ರೋಡ್ 07.08, ಗುಂತಕಲ್ 08.25, ಅನಂತಪುರ 09.28, ಧರ್ಮಾವರಂ 10.50, ಯಲಹಂಕ 12.45, ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ 02.00 ಗಂಟೆಗೆ ತಲುಪಲಿದೆ. ಬೈಯ್ಯಪ್ಪನ ಹಳ್ಳಿಯಿಂದ ಮಧ್ಯಾಹ್ನ 02.40ಕ್ಕೆ ಹೊರಟು ಯಲಹಂಕಕ್ಕೆ 03.08, ಧರ್ಮಾವರಂ ಸಾಯಂಕಾಲ 5:45, ಅನಂತಪುರ 05. 58 , ಗುಂತಕಲ್ 7.00, ಮಂತ್ರಾಲಯಂ ರೋಡ್ ರಾತ್ರಿ 08.15, ರಾಯಚೂರು 8:45 , ವಾಡಿ 11.05 ಮತ್ತು ಕಲ್ಬುರ್ಗಿಗೆ ರಾತ್ರಿ 11:30 ಕ್ಕೆ ತಲುಪಲಿದೆ.
ಕಲ್ಬುರ್ಗಿಯಲ್ಲಿ ಎರಡನೇ ಪಿಟ್ ಲೈನ್ ಪೂರ್ಣಗೊಂಡು ನಿರ್ವಹಣಾ ಸೌಲಭ್ಯ ಪ್ರಾರಂಭವಾದ ಬಳಿಕ ವಂದೇ ಭಾರತ್ ರೈಲು ಕಲಬುರಗಿಯಿಂದ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ವರೆಗೆ ಸಂಚಾರ ನಡೆಸಲಿದೆ ಮತ್ತು 45 ನಿಮಿಷ ಬೇಗ ತಲುಪಲಿದೆ.
ಇನ್ನು ರಾಜಧಾನಿ ಬೆಂಗಳೂರು ಪ್ರವಾಸ ಸುಗಮ: ಮೊದಲು ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಬರಲು ಕನಿಷ್ಠ ಒಂದು ವರೆ ದಿವಸ ಆದರೆ ಒಂದೇ ಭಾರತ್ ಶುರುವಾಗುವದ್ದರಿಂದ 24 ಗಂಟೆಯೊಳಗೆ ನಾವು ಬೆಂಗಳೂರು- ಕಲಬುರಗಿ ಓಡಾಡಬಹುದಾಗಿದೆ.
ಬೆಳಿಗ್ಗೆ ವಂದೇ ಭಾರತ ರೈಲಿಂದ ಬೆಂಗಳೂರಿಗೆ ತಲುಪಿ ಸಾಯಂಕಾಲ ಮತ್ತು ರಾತ್ರಿ ವೇಳೆ ಇರುವ ಕರ್ನಾಟಕ ಎಕ್ಸ್ಪ್ರೆಸ್ ಅಥವಾ ಹಾಸನ್ ಸೋಲಾಪುರ ಎಕ್ಸ್ಪ್ರೆಸ್ ರೈಲಿನಿಂದ ಕಲಬುರಗಿಗೆ ಜನ ಮರುದಿನ ಮರಳಿ ಬರಬಹುದಾಗಿದೆ. ರೈಲ್ವೆ ಬಳಕೆದಾರರು ವಂದೇ ಭಾರತ ರೇಲು ಸಂಚಾರದಿಂದ ಪುಲಕಿತಗೊಂಡಿದ್ದಾರಲ್ಲದೆ ಈ ರೈಲಿನ ಆರಂಭ ಮಾಡಿದ್ದಕ್ಕಾಗಿ ಪ್ರರ್ಧಾನಿ ಮೋದಿ, ಸಂಸದ ಜಾಧವ್ ಅವರಿಗೆ ಅಭಿನಂದಿಸುತ್ತಿದ್ದಾರೆ.
ಕಲಬುರಗಿ ರೇಲ್ವೆ ಡಿವಿಜನ್ಗೆ ಹೆಚ್ಚಿದ ಒತ್ತಡ: ಕಲಬುರಗಿ ಕೇಂದ್ರವಾಗಿರುವಂತೆ 2013ರಲ್ಲೇ ಅಂದಿನ ಯೂಪಿಎ ಸರಕಾರ ರೇಲ್ವೆ ವಿಭಾಗೀಯ ಕಚೇರಿ ಮಂಜೂು ಮಾಡಿದ್ದರೂ ಅದು ಕಳೆದ 11 ವರ್ಷದಿಂದ ನೆನೆಗುದಿಗೆ ಬಿದ್ದಿರೋದು ಜನರ ಬೇಸರಕ್ಕೆ ಕಾರಣವಾಗಿದೆ. ಇದೀಗ ಬಹಳ ದಿನಗಳ ಬೇಡಿಕೆಯಾಗಿದ್ದ ರೈಲು ಸಂಚಾರ ಕಲಬುರಗಿಯಿಂದಲೇ ಶುರುವಾಗಿದೆ. ಈಗ ರೇಲ್ವೆ ಡಿವಿಜನ್ ಬೇಡಿಕೆಗೂ ರೆಕ್ಕೆಪುಕ್ಕ ಬರಲೇಬೇಕು ಎನ್ನುತ್ತಿದ್ದಾರೆ. ಅದಾಗಲೇ ಎಕ್ಸ್, ಸಾಮಾಜಿಕ ಜಾಲ ತಾಣದಲ್ಲಿ ಜನ ವಿಭಾಗೀಯ ಕಚೇರಿ ಮುಂದಿನ ಬೇಡಿಕೆ ಎಂದು ಪೋಸ್ಟ್ ಹಾಕುತ್ತಿದ್ದಾರೆ.ಕಲಬುರಗಿಯಿಂದ ಹೊಸ ರೈಲಿನ ಉಗಮ ಇದು ಐತಿಹಾಸಿಕವಾದ ನಿರ್ಧಾರ, ಇದಕ್ಕಾಗಿ ಪ್ರಧಾನಿ ಮೋದಿಜಿ, ರೇಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ಅಭಿನಂದಿಸುವೆ. ರೇಲ್ವೆ ವಿಭಾಗೀಯ ಕಚೇರಿ ಯೋಜನೆ ಬೇಡಿಕೆ ಜೀವಂತವಾಗಿದೆ. ಬರುವ ದಿನಗಳಲ್ಲಿ ಅದಕ್ಕೂ ಪ್ರಯತ್ನಿಸಿ ಕೈಗೂಡುವಂತೆ ಮಾಡುತ್ತೇವೆ. 2014ರಿಂದ 2018ರ ವರೆಗೂ ಆ ಬಗ್ಗೆ ಚರ್ಚೆ ಆಗಿರಲಿಲ್ಲ. ಇದೀಗ ಕಮೀಟಿ ವರದಿ ನೀಡಿದೆ. ಕಾರ್ಯಸಾಧುವಲ್ಲವೆಂದು ವರದಿ ಇದ್ದರೂ ಕೂಡಾ ಆ ಯೋಜನೆ ಜೀವತವಾಗಿದೆ. ನಾನು ಅದನ್ನು ಬೆನ್ನುಹತ್ತಿ ಮಂಜೂರಿ ಮಾಡಿಸಿಕೊಂಡೇ ಬರುವೆ. ಕಲಬುರಗಿ ಜನರ ಆಶೀರ್ವಾದ ನನಗೆ ಸದಾ ಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.