ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಪ್ರತಿಷ್ಠಿತ ಕಲ್ಪತರು ಸೆಂಟ್ರಲ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ವಜ್ರಮಹೋತ್ಸವ ನೆನಪಿನ ನೂತನ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1962ರಲ್ಲಿ ಸ್ಥಾಪಿತವಾದ ಕಲ್ಪತರು ವಿದ್ಯಾಸಂಸ್ಥೆಯ ಅಡಿಯಲ್ಲಿ ಮಾಂಟೆಸ್ಸರಿ ಶಾಲೆಯಿಂದ ಪ್ರಾರಂಭವಾಗಿ ಇಂಜಿನಿಯರಿಂಗ್ ಪದವಿವರೆಗೂ ಒಂದೇ ಕ್ಯಾಂಪಸ್ನಲ್ಲಿ ಓದಬಹುದಾಗಿದೆ. ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನದ ಎಲ್ಲಾ ವಿಭಾಗಗಳೂ ಲಭ್ಯವಿದ್ದು, ಉನ್ನತ ವ್ಯಾಸಂಗವನ್ನೂ ಇದೇ ಸಂಸ್ಥೆಯಲ್ಲಿ ಮಾಡಬಹುದಾಗಿದೆ. ವಿಶ್ವವಿದ್ಯಾನಿಲಯವಾಗಲು ಎಲ್ಲ ಅರ್ಹತೆಗಳನ್ನೂ ಹೊಂದಿದೆ. ತಮ್ಮ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ನಮ್ಮ ತಾಲೂಕಿನಲ್ಲಿಯೂ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾದಾಗಿನಿಂದಲೂ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದೇನೆ. ಅದರಂತೆ ವಿವಿಧ ಯೋಜನೆಗಳನ್ನು ಕಲ್ಪತರು ನಾಡಿಗೆ ತರುವ ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಸಂಸ್ಥಾಪಕ ಪ್ರಾಚಾರ್ಯ ಜೆ.ಆರ್.ಮಹಾಲಿಂಗಯ್ಯನವರ ಕನಸುಗಳಲ್ಲಿ ಒಂದಾದ ಸುಸಜ್ಜಿತ, ಸುವ್ಯವಸ್ಥಿತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಲ್ಪತರು ನಾಡಿನ ಮಕ್ಕಳಿಗೆ ನೀಡಬೇಕೆಂಬುದನ್ನು ನನಸಾಗಿಸುತ್ತಿರುವ ಸುದಿನ ಇದಾಗಿದೆ. ಈ ಸತ್ಕಾರ್ಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲರಿಗೂ ವಿದ್ಯಾಸಂಸ್ಥೆಯು ಚಿರಋಣಿಯಾಗಿರುತ್ತದೆ ಎಂದು ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ಉಮೇಶ್ ಮಾತನಾಡಿ, 2003ರಲ್ಲಿ 143 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಲ್ಪತರು ಸೆಂಟ್ರಲ್ ಶಾಲೆಯು ಇಂದು 1495 ವಿದ್ಯಾರ್ಥಿಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಶಿಕ್ಷಣದಲ್ಲಿ ಮತ್ತಷ್ಟು ಸುಧಾರಣೆಯನ್ನುಂಟು ಮಾಡಲು ಅತ್ಯಾಧುನಿಕ ವಿನ್ಯಾಸ ಕಟ್ಟಡವನ್ನು ಸುಮಾರು 12 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಸಂಸ್ಥೆಯು ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಿ.ಎಸ್.ಉಮೇಶ್, ಬಾಗೇಪಲ್ಲಿ ನಟರಾಜ್, ಜಿ.ಪಿ.ದೀಪಕ್, ಟಿ.ಎಸ್.ಬಸವರಾಜು, ಕಾರ್ಯದರ್ಶಿಗಳಾದ ಎಂ.ಆರ್.ಸಂಗಮೇಶ್, ಎಚ್.ಜಿ.ಸುಧಾಕರ್, ಜಿ.ಎಸ್.ಉಮಾಶಂಕರ್, ಟಿ.ಯು.ಜಗದೀಶ್ಮೂರ್ತಿ, ಖಜಾಂಚಿಗಳಾದ ಟಿ.ಎಸ್. ಶಿವಪ್ರಸಾದ್, ಶಾಲೆಯ ಪ್ರಾಂಶುಪಾಲರಾದ ದೇವಿಕ.ಬಿ.ಸ್ವಾಮಿ, ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಬೋಧಕೇತರ ವರ್ಗದರವರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಫೋಟೋ 20-ಟಿಪಿಟಿ4ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರಿನ ಕಲ್ಪತರು ಸೆಂಟ್ರಲ್ ಶಾಲೆಯ ವಜ್ರಮಹೋತ್ಸವ ನೆನಪಿನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಕೆ.ಷಡಕ್ಷರಿ, ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.