ಕಲುಬರ್ಗಿಯವರ ಜ್ಞಾನದ ಕಾಯಕ ಮುಂದಿನ ಪೀಳಿಗೆಗೆ ದಾರಿದೀಪ: ಪ್ರೊ. ಅಶೋಕ ಆಲೂರ

KannadaprabhaNewsNetwork |  
Published : Aug 31, 2026, 02:15 AM IST
ಡಾ. ಎಂ.ಎಂ. ಕಲಬುರ್ಗಿ ಅವರ 11ನೇ ಹುತಾತ್ಮ ದಿನದಲ್ಲಿ ಅವರ ಭಾವಚಿತ್ರಕ್ಕೆ ಉಮಾದೇವಿ ಕಲಬುರ್ಗಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. | Kannada Prabha

ಸಾರಾಂಶ

ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ವಿಶಿಷ್ಟ ಮಾರ್ಗದರ್ಶನ ನೀಡಿದ ಡಾ. ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ದೃಷ್ಟಿ, ಕನ್ನಡಪರ ಚಿಂತನೆ ಹಾಗೂ ಜ್ಞಾನದ ಕಾಯಕ ಮುಂದಿನ ಪೀಳಿಗೆಗೆ ಸದಾ ದಾರಿದೀಪ ಎಂದು ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಆಲೂರ ಹೇಳಿದರು.

ಧಾರವಾಡ: ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ವಿಶಿಷ್ಟ ಮಾರ್ಗದರ್ಶನ ನೀಡಿದ ಡಾ. ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ದೃಷ್ಟಿ, ಕನ್ನಡಪರ ಚಿಂತನೆ ಹಾಗೂ ಜ್ಞಾನದ ಕಾಯಕ ಮುಂದಿನ ಪೀಳಿಗೆಗೆ ಸದಾ ದಾರಿದೀಪ ಎಂದು ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಆಲೂರ ಹೇಳಿದರು.

ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ 11ನೇ ಹುತಾತ್ಮ ದಿನಾಚರಣೆ ವಿಶೇಷ ಉಪನ್ಯಾಸ, ಗ್ರಂಥ ಬಿಡುಗಡೆ ಹಾಗೂ ಆನ್‌ಲೈನ್ ಸರಣಿ ಉಪನ್ಯಾಸದಲ್ಲಿ ಅವರು ಮಾತನಾಡಿ, ವಚನ ಸಾಹಿತ್ಯ, ಶಾಸನಗಳು, ಹಸ್ತಪ್ರತಿಗಳು ಹಾಗೂ ಕನ್ನಡದ ವಿವಿಧ ಪರಂಪರೆಗಳ ಕುರಿತು ಆಳವಾದ ಸಂಶೋಧನೆ ನಡೆಸಿ ಮಹತ್ವದ ಕೊಡುಗೆ ನೀಡಿದ್ದಾರೆ. ಸಂಶೋಧನೆಯಲ್ಲಿ ಆಕರಗಳ ಪ್ರಾಮಾಣಿಕತೆಗೆ ಕಲಬುರ್ಗಿ ಆದ್ಯತೆ ನೀಡುತ್ತಿದ್ದರು. ಯಾವುದೇ ವಿಚಾರ ಹೇಳುವ ಮೊದಲು ಅದರ ಆಧಾರವೇನು ಎಂಬುದನ್ನು ಪರಿಶೀಲಿಸಬೇಕು ಎಂಬುದು ಅವರ ನಿಲುವಾಗಿತ್ತು. ವಚನದ ಮೂಲ, ಶಾಸನದ ಕಾಲ, ಸಾಹಿತ್ಯದ ಹಿನ್ನೆಲೆ ಹಾಗೂ ನಂತರದ ಸೇರ್ಪಡೆಗಳ ಸಾಧ್ಯತೆ ಸೇರಿದಂತೆ ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು ಎಂದು ಹೇಳಿದರು.

ಹಸ್ತಪ್ರತಿಗಳು, ಶಾಸನಗಳು ಹಾಗೂ ಕನ್ನಡದ ಜೀವಂತ ಪರಂಪರೆಗಳನ್ನು ಜನರಿಗೆ ಪರಿಚಯಿಸುವ ಮೂಲಕ ಜ್ಞಾನ ಪ್ರಸಾರದ ಕಾರ್ಯಕ್ಕೆ ಅವರು ಮಹತ್ವ ನೀಡಿದರು. ಕಲಬುರ್ಗಿ ಅವರು ಬಸವಣ್ಣ ಮತ್ತು ಕನ್ನಡವನ್ನು ತಮ್ಮ ಬದುಕಿನ ಪ್ರಮುಖ ಆಶಯಗಳನ್ನಾಗಿ ಮಾಡಿಕೊಂಡಿದ್ದರು. ಕನ್ನಡದ ಸಂಶೋಧನೆ ಮತ್ತು ವಚನ ಸಾಹಿತ್ಯದ ಅಧ್ಯಯನಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಕೃತಿಗಳು ಹಾಗೂ ಸಂಶೋಧನಾ ಚಿಂತನೆಗಳು ಇಂದಿಗೂ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದರು.

ಹಿರಿಯ ವಿದ್ವಾಂಸ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಪಂಪ ಭಾರತದ ಸಾಂಸ್ಕೃತಿಕ ಅಧ್ಯಯನ ವಿಷಯವನ್ನು ಪಿಎಚ್‌ಡಿ ಸಂಶೋಧನೆಗೆ ನೀಡಿದವರು ಕಲಬುರ್ಗಿಯವರೇ ಆಗಿದ್ದು, ಒಂದು ನಿರ್ದಿಷ್ಟ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಆಳವಾಗಿ ಅಧ್ಯಯನ ಮಾಡಬೇಕು ಎಂಬ ಅವರ ಬೋಧನೆ ನನ್ನನ್ನು ಹಳಗನ್ನಡ ಅಧ್ಯಯನಕ್ಕೆ ಕೊಂಡೊಯ್ಯಿತು ಎಂದರು.

ಸಂಶೋಧನೆಯಲ್ಲಿ ದೊರೆಯುವ ಸತ್ಯ ಶಾಶ್ವತವಾಗಿರುವುದಿಲ್ಲ; ಹೊಸ ಆಧಾರಗಳು ದೊರೆತಂತೆ ಸಂಶೋಧನಾ ಸತ್ಯಗಳು ಬದಲಾಗಬಹುದು. ಕವಿರಾಜಮಾರ್ಗದ ಕರ್ತೃ, ಕನ್ನಡ ಭಾಷೆಯ ಮೂಲ ಹಾಗೂ ವಡ್ಡಾರಾಧನೆಯಂತಹ ಹಲವು ವಿಚಾರಗಳ ಕುರಿತು ಹೊಸ ಆಧಾರಗಳ ಆಧಾರದ ಮೇಲೆ ಬಂದ ಅಭಿಪ್ರಾಯಗಳನ್ನು ಸ್ವೀಕರಿಸುವ ಮನೋಭಾವ ಸಂಶೋಧಕರಲ್ಲಿ ಇರಬೇಕು ಎಂದರು.

ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ, ತಮ್ಮ ವೈಚಾರಿಕ ಚಿಂತನೆ ಹಾಗೂ ಸಂಶೋಧನಾ ದೃಷ್ಟಿಕೋನದ ಮೂಲಕ ಕನ್ನಡ ನಾಡಿನ ಜ್ಞಾನ ಪರಂಪರೆಗೆ ಮಹತ್ವದ ಕೊಡುಗೆ ನೀಡಿದವರು ಅವರು. ಅವರ ಚಿಂತನೆಗಳು ಹಾಗೂ ಸಂಶೋಧನಾ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.

ಪ್ರತಿಷ್ಠಾನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಸದಸ್ಯರಾದ ಹನುಮಾಕ್ಷಿ ಗೋಗಿ ಮಾತನಾಡಿದರು. ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನ ಸದಸ್ಯ ಪ್ರೊ. ಚಂದ್ರಶೇಖರ ವಸ್ತ್ರದ ವಂದಿಸಿದರು. ಉಮಾದೇವಿ ಎಂ. ಕಲಬುರ್ಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಬಿಲ್ ಬಿಡುಗಡೆಗಾಗಿ ಮುಂದುವರಿದ ಗುತ್ತಿಗೆದಾರರ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ ಮಲಗುಂಡಿ ಸ್ವಚ್ಛತೆ