ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ನಟಿ ರಚಿತಾ ರಾಮ್ ಹೇಳಿದರು.
ಹುಬ್ಬಳ್ಳಿ: ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ನಟಿ ರಚಿತಾ ರಾಮ್ ಹೇಳಿದರು.
ಭಾನುವಾರ ನಗರದ ಕೊಪ್ಪಿಕರ ರಸ್ತೆಯಲ್ಲಿನ ಚಿನ್ನಾಭರಣ ಶೋ ರೂಂ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಚಿತ್ರರಂಗದಲ್ಲಿ ಹಲವಾರು ಅಭಿಮಾನಿ ಬಳಗವನ್ನು ಹೊಂದಿರುವ ಕಮಲ್ ಹಾಸನ್ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ಈ ರೀತಿ ಕನ್ನಡದ ಬಗ್ಗೆ ಮಾತನಾಡಿರುವುದು ಸಮಂಜಸವಲ್ಲ. ಈ ಬಗ್ಗೆ ಅವರು ಕ್ಷಮೆಯಾಚಿಸಬೇಕು ಎಂದು ನಾನು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದೇನೆ. ಇಂದು ಕೂಡಾ ಆಗ್ರಹಿಸುತ್ತೇನೆ. ನನ್ನ ಪ್ರೀತಿ ನನ್ನ ಭಾಷೆ, ಬೇರೆ ಭಾಷೆ ಬಗ್ಗೆ ನಾನು ಕಮೆಂಟ್ ಮಾಡಲ್ಲ. ನನ್ನ ಮೊದಲ ಗೌರವ ಕನ್ನಡ ಭಾಷೆಗೆ. ಇಲ್ಲಿ ಯಾರಿಂದ ಯಾರೂ ಬಂದಿಲ್ಲ. ದೇವರಿಗೆ ಗೊತ್ತು ಯಾರಿಂದ ಯಾರು ಅಂತ. ಇಂದು ಇತಿಹಾಸದಿಂದ ಏನು ಪ್ರೂವ್ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಎಲ್ಲರೂ ತಮ್ಮ ಮಾತೃಭಾಷೆಯನ್ನು ಮರೆಯಬಾರದು. ಹಾಗೆಯೇ ನಮ್ಮ ಭಾಷೆ ಅವರಿಗೆ ಹೇಳಿಕೊಡೋಣ, ಅವರ ಭಾಷೆ ಕಲಿಯೋಣ ಎಂದರು.
ಕಪ್ ನಮ್ಮದೆ: ಇದೇ ವೇಳೆ ಐಪಿಎಲ್ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಐಪಿಎಲ್ ಕಪ್ ನಮ್ಮದೆ. ಸದ್ಯ ಐಪಿಎಲ್ 18ನೇ ಆವೃತ್ತಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ ಕೂಡಾ 18. ಹೀಗಾಗಿ, ಹದಿನೆಂಟರ ಜೊತೆ ನಮಗೆಲ್ಲ ವಿಶೇಷ ನಂಟಿದೆ. ಹೀಗಾಗಿ ಈ ಬಾರಿ ಕಪ್ ನಮ್ದೇ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.