ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ಮೈಲ್ ಟ್ರೈನ್ನ ಹಿರಿಯ ಉಪಾಧ್ಯಕ್ಷೆ ಮತ್ತು ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಮಮತಾ ಕ್ಯಾರೊಲ್ ಅವರು, ಸೀಳು ತುಟಿ ಸಮಸ್ಯೆಯೊಂದಿಗೆ ಜನಿಸಿದ ಮಕ್ಕಳಿಗೆ ನೆರವು ಒದಗಿಸುವ ಸಲುವಾಗಿ ಬೆಳಗಿದ ಬೆಳಗಾವಿಯ ಈ ಐತಿಹಾಸಿಕ ಪಾರಂಪರಿಕ ತಾಣ ನೋಡುವುದು ನಿಜಕ್ಕೂ ಆನಂದದಾಯಕವಾಗಿದೆ. ಬೆಳಕಿನ ಪ್ರತಿಯೊಂದು ಕಿರಣವು ಭರವಸೆ ಹೊಮ್ಮಿಸುವಂತಿದೆ. ಸೀಳು ತುಟಿ ಶಸ್ತ್ರಚಿಕಿತ್ಸೆಯ ಅಪಾರ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಸ್ಮೈಲ್ ಟ್ರೈನ್ ಯೋಜನಾ ನಿರ್ದೇಶಕ ಡಾ.ರಾಜೇಶ ಪೊವಾರ್ ಮಾತನಾಡಿ, ತಿನ್ನುವ, ಉಸಿರಾಡುವ ಮತ್ತು ಮಾತನಾಡುವ ಸಮಸ್ಯೆ ಎದುರಿಸುವ ಅವರಲ್ಲಿ ಬಹುತೇಕರು ಆ ಸಮಸ್ಯೆ ಕುರಿತ ಅರಿವಿನ ಕೊರತೆಯಿಂದ ಸಂಕಷ್ಟ ಪಡುತ್ತಾರೆ. ಸ್ಮೈಲ್ ಟ್ರೈನ್ ಸಂಸ್ಥೆಯು ಕರ್ನಾಟಕದಲ್ಲಿರುವ ತನ್ನ ಏಳು ಚಿಕಿತ್ಸಾ ಪಾಲುದಾರ ಆಸ್ಪತ್ರೆಗಳ ಸಹಯೋಗದಿಂದ ಕಳೆದ ಎರಡು ದಶಕಗಳಲ್ಲಿ 45,000ಕ್ಕೂ ಹೆಚ್ಚು ಸೀಳು ತುಟಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಸೀಳು ತುಟಿ ಸಮಸ್ಯೆ ಹೊಂದಿರುವ ಪ್ರತೀ ಮಗುವಿಗೂ ಸೂಕ್ತ ಆರೈಕೆ ಮತ್ತು ಚಿಕಿತ್ಸೆ ದೊರಕಿಸುವವರೆಗೆ ಕೆಲಸ ಮಾಡುವುದಾಗಿ ತಿಳಿಸಿದೆ ಎಂದರು.