ಕನ್ನಡಪ್ರಭ ವಾರ್ತೆ ಮಳವಳ್ಳಿ
ಭಕ್ತ ಕನಕದಾಸರು ಕೀರ್ತನೆ ಭಕ್ತಿಯ ಮೂಲಕ ಶ್ರೀಕೃಷ್ಣನನ್ನೇ ತನ್ನ ಕಡೆಗೆ ತಿರುಗುವಂತೆ ಮಾಡುವ ಮೂಲಕ ಸರ್ವರೂ ಸಮಾನರು ಎನ್ನುವುದಕ್ಕೆ ಕನಕನ ಕಿಂಡಿಯೇ ಸಾಕ್ಷಿಯಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಕುರುಬರ ಸಂಘದಿಂದ ನಡೆದ ಭಕ್ತ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿ, ಭಗವಂತನಿಗೆ ಭಕ್ತರೆಲ್ಲರು ಸಮಾನರು ಎನ್ನುವುದನ್ನು ಕನಕದಾಸರು ಅಂದಿಯೇ ತೋರಿಸಿಕೊಟ್ಟಿದ್ದು, ಇಂದಿಗೂ ಕನಕನ ಕಿಂಡಿಯನ್ನು ಕಾಣಬಹುದು ಎಂದರು.
ನೆಲ,ಜಲ, ಪ್ರಾಣಿ, ಪಕ್ಷಿ, ಜೀವ, ರಕ್ತಕ್ಕೆ ಇಲ್ಲದ ಜಾತಿ ಮನುಷ್ಯನಿಗೆ ಏಕೆ ಎನ್ನುವ ಸತ್ಯವನ್ನು ಕನಕದಾಸರು ಪ್ರತಿಪಾದಿಸಿದ್ದಾರೆ. 12ನೇ ಶತಮಾನದಲ್ಲಿ ಬಸವ ಸಾಹಿತ್ಯ ಹಾಗೂ ಕನಕದಾಸರ ಕಾಲದಲ್ಲಿ ದಾಸ ಸಾಹಿತ್ಯದ ಮೂಲಕ ಸತ್ಯದ ವಿಚಾರವನ್ನು ಸಮಾಜಕ್ಕೆ ತಿಳಿಸಿಕೊಟ್ಟು ಸಮಾಜದ ಬೆಳಕಾಗಿದ್ದಾರೆಂದು ತಿಳಿಸಿದರು.ಪ್ರಾಂಶುಪಾಲೆ ಅನಿತಾ ಮಾತನಾಡಿ, ಕನಕದಾಸರ ತಂದೆ-ತಾಯಿ ವೈಷ್ಣವ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು. ಅದ್ದರಿಂದಲೇ ತಿಮ್ಮಪ್ಪ ಎಂಬ ನಾಮಂಕಿತವನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ದಂಡನಾಯಕರಾಗಿದ್ದ ತಿಮ್ಮಪ್ಪ ಯುದ್ಧದ ಸಾವು ನೋವುಗಳನ್ನು ಕಂಡು ಮನುಷ್ಯತ್ವ, ದಯೆ, ಕರುಣೆ, ಸಹಕಾರ, ಭ್ರಾತೃತ್ವ ಎಲ್ಲಾವನ್ನು ಕಳೆದುಕೊಳ್ಳುತ್ತೇವೆಂಬ ಸಂದೇಶ ಸಾರುವುದರೊಂದಿಗೆ ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಎಲ್ಲವನ್ನು ತ್ಯಾಗ ಮಾಡಿ ತಮ್ಮ ಕೀರ್ತನೆ ಮೂಲಕ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದರು ಎಂದು ವಿವರಿಸಿದರು.
ಇದಕ್ಕೂ ಮುನ್ನ ಪಟ್ಟಣದ ತಾಲೂಕು ಕಚೇರಿಯಿಂದ ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಪೂರ್ಣಕುಂಭ ದೊಂದಿಗೆ ಜಾನಪದ ಕಲಾ ತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪೂಜಾ ಕುಣಿತ, ಡೊಲ್ಲು ಕುಣಿತ, ಬಂಡೂರು ಕುರಿ ಪ್ರದರ್ಶನ, ಬಸವಪ್ಪನ ಮೆರವಣಿಗೆ ವೀರ ಮಕ್ಕಳ ಕುಣಿತ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಪಿ.ಮಾದೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಮುಖಂಡರಾದ ಕೆ.ಜೆ.ದೇವರಾಜು, ಬಿ.ಪುಟ್ಟಬಸವಯ್ಯ, ನಾಗರಾಜು, ಜಯಣ್ಣ, ಸುಷ್ಮಾ ರಾಜು, ಎಚ್.ನಾಗೇಶ್, ಪುಟ್ಟಸ್ವಾಮಿ, ದಿಲೀಪ್ ಕುಮಾರ್, ಜಗದೀಶ್, ಶಿವಮಾದೇಗೌಡ ಸೇರಿದಂತೆ ಇತರರು ಇದ್ದರು.