ಕನಕಗಿರಿ: ಕನಕಗಿರಿ ಉತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ. ಉತ್ಸವ ಆಯೋಜಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನವಲಿ ಸಮಾನಾಂತರ ಜಲಾಶಯವನ್ನು ಜಾರಿಗೆ ಮುಂದಾಗಿರುವುದು ಶ್ಲಾಘನೀಯ. ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕಾಗಿದೆ. ಆಲಮಟ್ಟಿ ಜಲಾಶಯದಿಂದ ತುಂಗಭದ್ರಾ ಜಲಾಶಯ ನೀರು ತರುವ ಕೆಲಸ ಆಗಬೇಕು. ಕೊಪ್ಪಳ ಬಳಿ ವಿಮಾನ ನಿಲ್ದಾಣವೂ ಆಗಬೇಕಾಗಿದೆ. ಇದಕ್ಕೆ ಸಿಎಂ ಅವರು ಮನಸ್ಸು ಮಾಡಬೇಕು ಎಂದು ಹೇಳಿದರು.ಸಿಎಂ ಅರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡಿರುವುದು ಸೂಕ್ತವಾಗಿದೆ. ಅರ್ಥಿಕ ವರ್ಷದಲ್ಲಿ ಕಡಿಮೆ ಅವಧಿ ಇದ್ದರೂ ಗ್ಯಾರಂಟಿ ಯೋಜನೆ ಜಾರಿ ಮಾಡಿದರು. ಹಣಕಾಸನ್ನು ಸಿಎಂ ಸಿದ್ದರಾಮಯ್ಯ ಅವರ ಚಾಣಕ್ಷತನದಿಂದ ಹೊಂದಿಸಿ ಅಭಿವೃದ್ಧಿ ಕೆಲಸವನ್ನೂ ಮಾಡಿದರು. ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ. ಸಿದ್ದರಾಮಯ್ಯ ಇನ್ನೂ 10 ವರ್ಷ ಸಿಎಂ ಆಗಿರಬೇಕೆಂಬ ಬಯಕೆ ನನ್ನದು ಎಂದರು. ಮುಖ್ಯಮಂತ್ರಿ ನಿಜವಾದ ಜಾತ್ಯತೀತರು, ಎಲ್ಲರನ್ನೂ, ಅದರಲ್ಲೂ ಬಡವರು, ಶೋಷಿತರನ್ನು ಸಮಾನವಾಗಿ ನೋಡುವ ಹೃದಯವಂತ ಎಂದು ಶ್ಲಾಘಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಶಿವರಾಜ ತಂಗಡಗಿ ಅವರನ್ನು ಗೆಲ್ಲಿಸಿದಾಗಲೆಲ್ಲ ಕನಕಗಿರಿ ಉತ್ಸವ ಮಾಡಿದ್ದಾರೆ. ಈ ಭಾಗ್ಯವನ್ನು ಕಲ್ಪಿಸಿದ್ದಾರೆ. ಸಿಎಂ ಅವರು ಗ್ಯಾರಂಟಿ ಯೋಜನೆ ಮೂಲಕ ಬಡವರ ಬದುಕು ಹಸನುಗೊಳಿಸಿದ್ದಾರೆ ಎಂದು ಕೊಂಡಾಡಿದರು.ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸಿಎಂ ಸಿದ್ದರಾಮಯ್ಯ ಎಲ್ಲ ಕಡೆ ಉತ್ಸವ ಮಾಡುತ್ತಾರೆ. ನಮ್ಮ ತಾಲೂಕಿನ ಪುರ ಉತ್ಸವವನ್ನೂ ನೀವೇ ಮಾಡಬೇಕು ಎಂದು ಮನವಿ ಮಾಡಿದರು.