ಕನ್ನಡಪ್ರಭ ವಾರ್ತೆ ಕನಕಪುರ
ನಗರದ ಬೂದಿಕೇರಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಯಲದ ವಾರ್ಡನ್ ಯೋಗೀಶ್ ವೈದ್ಯಕೀಯ ವಿದ್ಯಾರ್ಥಿ ಅಮೋಘ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಅಮೋಘ್ ವಿಜಯಪುರ ಜಿಲ್ಲೆಯವನಾಗಿದ್ದು, ದಯಾನಂದಸಾಗರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಹಾಸ್ಟೆಲ್ ನ ಕಂಪ್ಯೂಟರ್ ರೂಮಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ರಿಲಾಕ್ಸ್ ಆಗಲು ಮೊಬೈಲ್ ನೋಡುವ ವಿಚಾರವಾಗಿ ಯೋಗೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ ಅಮೋಘ್ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.ವಿದ್ಯಾರ್ಥಿಯ ತಾಯಿಯನ್ನು ನಿಂದಿಸಿದ ನಂತರ ಅದನ್ನು ಪ್ರಶ್ನಿಸಿದಾಗ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು, ಅದನ್ನು ತಡೆಯಲು ಮುಂದಾದ ವಿದ್ಯಾರ್ಥಿಯನ್ನು ನಿನ್ನ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಯುವಕ ಹಾಸ್ಟೆಲ್ ತೊರೆದು ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿಗೆ ದೂರು ನೀಡಿದ್ದಾನೆ.