ಹಿರಿಯೂರು: ವಿಶ್ವದ ವಿವಿಧ ಭಾಷೆಗಳಲ್ಲಿ ಸುಂದರ ಸುಲಲಿತ ಹಾಗೂ ದೇಶ, ಭಾಷೆ, ಧರ್ಮ, ಜಾತಿ ಮೀರಿ ಮನಸ್ಸುಗಳನ್ನ ಬೆಸೆಯುವ ಭಾಷೆ ಕನ್ನಡವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಜಾನಪದ ತಜ್ಞ ಡಾ.ಸಿ.ಶಿವಲಿಂಗಪ್ಪ ಅಭಿಪ್ರಾಯಪಟ್ಟರು.
ಕನ್ನಡ ನಾಡು ನುಡಿ ನೆಲ, ಜಲ, ಸಂಪತ್ತು ರಕ್ಷಣೆಗೆ ವಿಶ್ವದ ಎಲ್ಲ ಕನ್ನಡಿಗರು ಹೋರಾಟ ಮಾಡಬೇಕಿದೆ. ಕನ್ನಡದ ಅಸ್ಮಿತೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿ ಬೂಕರ್ ಪ್ರಶಸ್ತಿ ತಂದ ಬಾನು ಮುಸ್ತಾಕ್ ಅವರನ್ನು ನಾವೆಲ್ಲಾ ನೆನೆಯಬೇಕಿದೆ ಎಂದರು.
ಎನ್ಎಸ್ಎಸ್ ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ಜನಸಾಮಾನ್ಯರ ಭಾಷೆಯಾಗಿದೆ. ಕರ್ನಾಟಕ ಸರ್ಕಾರ 1969ರಲ್ಲಿ ಆಡಳಿತ ಭಾಷೆಯನ್ನಾಗಿ ಘೋಷಣೆ ಮಾಡಿದ್ದು, ಕನ್ನಡ ಭಾಷಾ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಕನ್ನಡಪರ ಸಂಘಟನೆಗಳನ್ನು ಸ್ಥಾಪಿಸಿದೆ ಎಂದರು.ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಮಾತನಾಡಿ, ಕನ್ನಡ ಮಾಧ್ಯಮ ಓದಿದ ಮಕ್ಕಳಿಗೆ ಉದ್ಯೋಗ ನೀಡಬೇಕು. ಕನ್ನಡ ನಾಡಿನಲ್ಲಿ ವಿವಿಧ ಭಾಷೆ, ವಿವಿಧ ಧರ್ಮ, ವಿವಿಧ ಬುಡಕಟ್ಟಿನ ಜನರಿದ್ದರೂ ಸೌಹಾರ್ದತೆ, ಸಹಬಾಳ್ವೆ ಸಮಗ್ರತೆ ಹಾಗೂ ಐಕ್ಯತೆಗೆ ಹೆಸರಾಗಿದೆ ಎಂದರು.
ಇದೇ ವೇಳೆ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಟಿ.ಪರಮೇಶ್ವರಪ್ಪ, ತಾಲೂಕು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವಿ.ಸಿದ್ದಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಬಿ.ಲಿಂಗಪ್ಪ, ಹಿರಿಯ ರಂಗಭೂಮಿ ಕಲಾವಿದ ಬ್ಯಾಡರಹಳ್ಳಿ ಪಿ.ತಿಮ್ಮಯ್ಯ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಸಿದ್ದಗಂಗಮ್ಮ, ಡಿ.ಪ್ರಹ್ಲಾದ್, ಸರಸ್ವತಿ, ಆಶಾ ಮಾರುತೇಶ್ ಕೂನಿಕೆರೆ ಅವರನ್ನು ಸನ್ಮಾನಿಸಿಸಲಾಯಿತು.