ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡ ಬರೀ ಭಾಷೆಯಲ್ಲ ಅದೊಂದು ಮಂತ್ರ ಎಂದು ಬಸವಣ್ಣನವರು ಹೇಳಿದ್ದರು. ಈ ಜಗತ್ತಿರುವವರೆಗೂ ಕನ್ನಡ ಶಾಶ್ವತವಾಗಿರುತ್ತದೆ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ, ವಿದ್ವಾಂಸ ಎಂ.ಜಿ. ಸಿದ್ದರಾಮಯ್ಯ ತಿಳಿಸಿದರು.ತುಮಕೂರು ರೈಲು ನಿಲ್ದಾಣದಲ್ಲಿ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಮತ್ತು ರೈಲ್ವೆ ಇಲಾಖೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪಂಪನಿಂದ ಕುವೆಂಪುವರೆಗೆ ಬೆಳೆದು ಬಂದ ನಾಡು ನಮ್ಮ ಕನ್ನಡ ನಾಡು. ಈಗ ಕನ್ನಡ ಹೊರ ರಾಜ್ಯ, ಹೊರ ದೇಶಗಳಲ್ಲೂ ಬೆಳೆಯುತ್ತಿದೆ. ಇಡೀ ಪ್ರಪಂಚದ ಕನ್ನಡಿಗರು ಸಂಘಟಿತರಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕನ್ನಡ ವಿಶ್ವವ್ಯಾಪಿಯಾಗುತ್ತಿದೆ ಎಂದರು.ಕನ್ನಡ ನಾಡಿನ ಶ್ರೇಷ್ಠ ಪರಂಪರೆಯನ್ನು ಉಳಿಸಿ ಬೆಳೆಸಿದ ಮಹನೀಯರನ್ನು ಸ್ಮರಿಸಿದ ಸಿದ್ದರಾಮಯ್ಯನವರು, ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕಿದೆ. ಕನ್ನಡದ ಶ್ರೇಷ್ಟತೆಯನ್ನು ಇಡೀ ವಿಶ್ವಕ್ಕೆ ಸಾರಬೇಕಿದೆ ಎಂದರು.ರಾಜ್ಯೋತ್ಸವದ ಅಂಗವಾಗಿ ರೈಲ್ವೇ ನಿವೃತ್ತ ಉದ್ಯೋಗಿ, ರಂಗ ಕಲಾವಿದ ಹಿರೇಹಳ್ಳಿಯ ಡಿ. ಚಂದ್ರಶೇಖರ್ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೈಲಿನೊಂದಿಗೆ ಸಂಪರ್ಕವಿಟ್ಟುಕೊಂಡ ಕಲಾವಿದರು, ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವ ವೇದಿಕೆಯ ಕಾರ್ಯ ಶ್ಲಾಘನೀಯವಾದುದು. ನನ್ನಂತಹ ಗ್ರಾಮೀಣ ಕಲಾವಿದನನ್ನು ಗುರುತಿಸಿ ಸನ್ಮಾನಿಸಿರುವುದು ನನಗೆ ಪದ್ಮಶ್ರೀ ಪ್ರಶಸ್ತಿ ದೊರಕಿದಷ್ಟೇ ಸಂತೋಷವಾಗಿದೆ ಎಂದರು.ವೇದಿಕೆ ಅಧ್ಯಕ್ಷ ಮತ್ತು ನೈಋತ್ಯ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯ ಕರಣಂ ರಮೇಶ್ ಅಧ್ಯಕ್ಷತೆ ವಹಿಸಿ ವೇದಿಕೆಯ ಉತ್ತಮ ಕಾರ್ಯಗಳಿಗೆ ಪ್ರಯಾಣಿಕರ ಸಲಹೆ ಸಹಕಾರವೇ ಕಾರಣ ಎಂದರು. ವೇದಿಕೆ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಸಂಜನ್ ನಾಗರಾಜ್, ಭಾಗ್ಯಲಕ್ಷ್ಮಿ ನಾಗರಾಜ್, ರೂಪಾ ನಾಗೇಂದ್ರ ಅವರು ಪ್ರಾರ್ಥಿಸಿ, ನಾಡಗೀತೆ, ಕನ್ನಡ ಗೀತೆಗಳನ್ನು ಹಾಡಿದರು. ನಿರ್ದೇಶಕ ಶಿವಕುಮಾರಸ್ವಾಮಿ ಸ್ವಾಗತಿಸಿದರು. ರಘು ರಾಮಚಂದ್ರಯ್ಯ ವಂದಿಸಿದರು. ಜಂಟಿ ಕಾರ್ಯದರ್ಶಿ ರಾಮಾಂಜನೇಯ ಕಾರ್ಯಕ್ರಮ ನಿರೂಪಿಸಿದರು. ಮೋಹನ್ಕುಮಾರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಅರ್ಷದ್ ಸನ್ಮಾನಿತರ ಪರಿಚಯ ಮಾಡಿದರು.ವೇದಿಕೆ ಗೌರವ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಉಪಾಧ್ಯಕ್ಷ ಮಾಧವಮೂರ್ತಿ ಗುಡಿಬಂಡೆ, ಖಜಾಂಚಿ ಆರ್. ಬಾಲಾಜಿ, ತುಮಕೂರು ರೈಲು ನಿಲ್ದಾಣ ವ್ಯವಸ್ಥಾಪಕ ರಮೇಶ್ ಬಾಬು ಮತ್ತು ಸಿಬ್ಬಂದಿ ಇದ್ದರು.