ಕನ್ನಡವೆಂದರೆ ಬರೀ ಭಾಷೆಯಲ್ಲ, ಅದು ಬದುಕಿನ ಕ್ರಮ: ಶಿಕ್ಷಣ ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Apr 07, 2026, 01:45 AM IST
ಫೋಟೊ:೦೬ಕೆಪಿಸೊರಬ-೦೧ : ಸೊರಬ ಪಟ್ಟಣದ ಕನ್ನಡ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ಮಧು ಬಂಗಾರಪ್ಪ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಎನ್ನುವುದು ಬರಿಯ ಭಾಷೆಯಲ್ಲ. ಅದೊಂದು ಸಂಸ್ಕೃತಿ ಹಾಗೂ ಬದುಕಿನ ಕ್ರಮ, ವಿಶಾಲ ಜಗತ್ತು. ಕನ್ನಡ ಭಾಷೆಯ ಎದುರು ಅನ್ಯರು ಬಿರುಗಾಳಿಯಂತೆ ಎದುರು ಬಂದರೂ ಬೆಚ್ಚಿ ಬೆದರದೇ ಹಚ್ಚಹಸಿರಾಗಿ ಉಳಿದಿರುವುದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವೇ ಸಾಕ್ಷಿ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಕನ್ನಡ ಎನ್ನುವುದು ಬರಿಯ ಭಾಷೆಯಲ್ಲ. ಅದೊಂದು ಸಂಸ್ಕೃತಿ ಹಾಗೂ ಬದುಕಿನ ಕ್ರಮ, ವಿಶಾಲ ಜಗತ್ತು. ಕನ್ನಡ ಭಾಷೆಯ ಎದುರು ಅನ್ಯರು ಬಿರುಗಾಳಿಯಂತೆ ಎದುರು ಬಂದರೂ ಬೆಚ್ಚಿ ಬೆದರದೇ ಹಚ್ಚಹಸಿರಾಗಿ ಉಳಿದಿರುವುದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವೇ ಸಾಕ್ಷಿ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಕನ್ನಡ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸದುದ್ದಕ್ಕೂ ಕನ್ನಡ ಕಾಲದಿಂದ ಕಾಲಕ್ಕೆ ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಅಂದು ಸಂಸ್ಕೃತ ಭಾಷೆಯ ಕಾಲಕ್ಕೂ ಬೆದರದ ಕನ್ನಡ ಸಂಸ್ಕೃತದ ಪದಗಳನ್ನೇ ತನ್ನಲ್ಲಿ ಜೀರ್ಣಿಸಿಕೊಂಡು ಉಳಿದು ಬೆಳೆದಿದೆ. ಪ್ರಸ್ತುತ ದಿನಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಂತಹ ಬಲಿಷ್ಟ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುತ್ತಿವೆ. ಆದರೆ ನಾವು ಬುದ್ದಿವಂತರಾದರೆ ಯಾವ ಭಾಷೆಗಳನ್ನೂ ವಿರೋಧಿಸದೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ದಿಟ್ಟ ಗುಣ ಬೆಳೆಸಿಕೊಳ್ಳಬೇಕು ಎಂದ ಅವರು, ಕನ್ನಡ ಭಾಷೆ, ನೆಲ, ಜಲದ ಪ್ರಶ್ನೆ ಎದುರಾದಾಗ ಎಲ್ಲರೂ ಪ್ರತಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮ್ಮೇಳನಾಧ್ಯಕ್ಷ ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ತಮ್ಮ ಸರ್ವಾಧ್ಯಕ್ಷೀಯ ಭಾಷಣದಲ್ಲಿ, ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿದ್ದು, ಅವುಗಳ ಸಂವರ್ಧನೆ ಮಾಡುವ ಜೊತೆಗೆ ಸಚಿವ ಸಂಪುಟದಲ್ಲಿ ಸೊರಬವನ್ನು ಕೆರೆಗಳ ನಾಡು ಎಂದು ಘೋಷಿಸಲು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿಗಳನ್ನಾಡಿ, ಸುರಭಿಪುರ ಹೆಸರಿನೊಂದಿಗೆ ಮಿಳಿತಗೊಂಡಿರುವ ಸೊರಬ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಚಳವಳಿದಾರರಿಗೆ ಆಶ್ರಯ ನೀಡಿದ ತಾಣವಾಗಿದೆ. ಸರ್ವೋದಯ ಚಳವಳಿಯ ಪ್ರಭಾವದಿಂದಾಗಿ ಭೂಮಿ ವಿತರಿಸಿದ ಇತಿಹಾಸ ಸೊರಬಕ್ಕಿದೆ ಎಂದರು.

ಇದಕ್ಕೂ ಮೊದಲು ನಾಡು ನುಡಿ ಸಂಸ್ಕೃತಿಯ ಹಿರಿಮೆ ಸಾರುವ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪುಷ್ಪಾಲಂಕಾರದಿಂದ ಕಂಗೊಳಿಸುವ ರಥದಲ್ಲಿ ಸಮ್ಮೇಳನಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಅವರನ್ನು ಕೂರಿಸಿ ಆರಾಧ್ಯ ದೈವ ಶ್ರೀರಂಗನಾಥ ದೇವಸ್ಥಾನದಿಂದ ಸಾಹಿತ್ಯ ಸಮ್ಮೇಳನದ ವೇದಿಕೆವರೆಗೆ ಕರೆತರಲಾಯಿತು. ಸುತ್ತ ನೆರೆದಿದ್ದ ಕನ್ನಡಾಭಿಮಾನಿಗಳಲ್ಲಿ ನಾಡು ನುಡಿಯ ಝೇಂಕಾರ ಮೊಳಗಿತು. ಈ ವೇಳೆ ಸಮ್ಮೇಳನಾಧ್ಯಕ್ಷರ ರಥದ ಮುಂದೆ ನೂರಾರು ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು.

ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಎಚ್. ಗಣಪತಿ ಸಮ್ಮೇಳನ ಉದ್ಘಾಟಿಸಿದರು. ಸಾಹಿತಿ ರೇವಣಪ್ಪ ಬಿದರಗೇರೆಯವರ ಬಿಟ್ಟೇನೆಂದರೆ ಬಿಡದೀ ಮಾಯೆ ಹಾಗೂ ಸಾಹಿತಿ ಡಾ. ಉಮೇಶ್ ಭದ್ರಾಪುರ ಅವರ ಜ್ಯೋತಿಬಾಪುಲೆ ಸಾವಿತ್ರಿ ಬಾಪುಲೆ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ತಾಲೂಕು ಕಸಾಪ ಮಾಜಿ ಅಧ್ಯಕ್ಷರುಗಳಾದ ಮಧುರಾಯ್ ಜಿ. ಶೇಟ್, ಶಿವಾನಂದ ಪಾಣಿ, ಎಸ್. ಕೃಷ್ಣಾನಂದ, ಹಾಲೇಶ ನವುಲೆ, ಕುಮಾರಸ್ವಾಮಿ, ಸಾಹಿತ್ಯ ಪರಿಷತ್ತಿನ ಬಸವನಗೌಡ ಮಲ್ಲಾಪುರ, ಮೋಹನ್ ಸುರಭಿ, ಎನ್. ಗಣಪತಿ, ಭಾರ್ಗವ್ ನಾಡಿಗ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ, ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಡಾ.ಎಂ.ಕೆ.ಭಟ್, ಗುರುಮೂರ್ತಿ, ಸಾಹಿತಿ ಉಮೇಶ್ ಭದ್ರಾಪುರ, ಮಹೇಶ್ ಖಾರ್ವಿ ಇನ್ನಿತರರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಸ್ವಾಗತಿಸಿ, ಪ್ರಜ್ವಲ್ ಚಂದ್ರಗುತ್ತಿ ವಂದಿಸಿ, ಪ್ರಧಾನ ಕಾರ್ಯದರ್ಶಿ ರೇವಣಪ್ಪ ಬಿದರಗೇರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಶಾಸಕ ಸುರೇಶ್‌ಗೌಡರಿಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ
ಬೊಮ್ಮೇನಹಳ್ಳಿ ಸುತ್ತಮುತ್ತ ಬೀಡುಬಿಟ್ಟ ಕಾಡಾನೆ ಹಿಂಡು