ಶ್ರೀ ಭಾಗ್ಯವಂತಿ ದೇವಿ ಪ್ರಧಾನ ವೇದಿಕೆ
ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು ಪ್ರಮುಖ ಭಾಷೆ. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಐತಿಹ್ಯವಿದ್ದು, ಇದಕ್ಕೆ ಪುರಾವೆಗಳು ಸಾಕಷ್ಟಿವೆ ಎಂದು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಚನ್ನವೀರ ಶಾಸ್ತ್ರೀ ಹಿರೇಮಠ ಹೇಳಿದರು.
ತಾಲೂಕಿನ ಹೊಸ ವಿಭೂತಿಹಳ್ಳಿ ಗ್ರಾಮದಲ್ಲಿ ನಡೆದ ಆಲಮೇಲ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. 7ನೇ ಶತಮಾನದಲ್ಲಿ ಕನ್ನಡ ಭಾಷಾ ಸಾಹಿತ್ಯ ಸಿಂಹಾಸನ ಏರಿದ್ದು ಇಲ್ಲಿ ಸ್ಪಷ್ಟವಾಗುತ್ತದೆ. ಬರೀ ಮಾತುಗಳ ಭಾಷೆಯಾಗಿದ್ದ ಕನ್ನಡವೂ ಮುಂದೆ ಸಾಹಿತ್ಯ ಸಾಮ್ರಾಜ್ಯದಲ್ಲಿ ಶ್ರೀಮಂತ ಭಾಷೆಯಾಗಿ ಇಂದು ಬೆಳಗುತ್ತಿದೆ. ಆಲಮೇಲ ಪಟ್ಟಣವು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿರುವುದರಿಂದ ಇಲ್ಲಿ ತಾಲೂಕು ಆಡಳಿತ ಕಚೇರಿಗಳ ಕಟ್ಟಡವಾಗಬೇಕಾಗಿದೆ. ಆಡಳಿತ ಕೇಂದ್ರಿಕರಣವಾಗಬೇಕು. ಆಲಮೇಲ ಪಟ್ಟಣ ಸೇರಿ ದೇವಣಗಾಂವ, ಕಡಣಿ, ಕೋರಳ್ಳಿ, ಬಳಗಾನೂರ, ದೇವರನಾವದಗಿ, ಕುಮಸಗಿ, ಮದರಿ ಗ್ರಾಮಗಳು ದೊಡ್ಡಾಟಕ್ಕೆ ಪ್ರಸಿದ್ಧಿ ಪಡೆದಿದೆ ಎಂದು ಅಭಿಪ್ರಾಯಪಟ್ಟರು.ಆಲಮೇಲ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಾಹಿತ್ಯಿಕ ಹಾಗೂ ದತ್ತಿನಿಧಿ ಕಾರ್ಯಕ್ರಮಗಳನ್ನು ನಡೆಸಿದ್ದು, ಸದ್ಯ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಜೊತೆಗೆ ನಲವತ್ತು ಲಕ್ಷ ವೆಚ್ಚದಲ್ಲಿ ಪರಿಷತ್ತಿನ ಕಟ್ಟಡದ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಪೂರ್ಣಗೊಂಡು ಸಾಹಿತ್ಯಾಸಕ್ತರ ಸೇವೆಗೆ ಅಣಿಯಾಗಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ರಮೇಶ ಭಂಟನೂರ ಸರ್ವರನ್ನು ಸ್ವಾಗತಿಸಿದರು. ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ , ಆಲಮೇಲದ ಆರ್.ಎಂ.ಎಸ್.ಎ ಶಾಲೆಯ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ಅನ್ವಿತಾ ಹೊಸಮನಿ ಭರತನಾಟ್ಯ ಪ್ರದರ್ಶಿಸಿದರು.
ಶ್ರೀಶೈಲ ಮಠಪತಿ ಹಾಗೂ ಗಂಗಾಧರ ಪತ್ತಾರ ನಿರೂಪಿಸಿದರು, ಎಂ. ಎಸ್.ಚೌಧರಿ ನಿರ್ವಹಿಸಿದರು.-------------
ಕೋಟ್ 01ಆಲಮೇಲ ಭಾಗವು ದೊಡ್ಡಾಟಕ್ಕೆ ಹೆಸರುವಾಸಿಯಾಗಿದೆ. ಕರಾವಳಿ ಭಾಗದ ಕಂಬಳದಂತೆ, ಜಲ್ಲಿಕಟ್ಟು ಮತ್ತು ಯಕ್ಷಗಾನದಂತೆ ಇಲ್ಲಿ ದೊಡ್ಡಾಟ ಮತ್ತು ಗೀ ಗೀ ಪದದ ಉತ್ಸವ ನಡೆಯುವ ಹಾಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ನಾವು ಭೀಮಾ ತೀರದ ಸಾಧಕರು ಎಂದು ಎದೆತಟ್ಟಿ ಹೇಳುವ ಹಾಗೆ ಆಗಬೇಕು.
- ಚನ್ನವೀರ ಶಾಸ್ತ್ರಿ ಹೀರೆಮಠ, ಸಮ್ಮೇಳನಾಧ್ಯಕ್ಷ