ಮಲಯಾಳಂ ಭಾಷೆ ಕಡ್ಡಾಯ ಮಸೂದೆ ವಿರುದ್ಧ ಕನ್ನಡಿಗರ ಧನಸಂಗ್ರಹ ಅಭಿಯಾನ

KannadaprabhaNewsNetwork |  
Published : Mar 30, 2026, 02:15 AM IST
ಫೋಟೋ: ೨೯ಪಿಟಿಆರ್-ಪಾನೀಯ ೧,ಫೋಟೋ: ೨೯ಪಿಟಿಆರ್-ಪಾನೀಯ ೨,ಫೋಟೋ: ೨೯ಪಿಟಿಆರ್-ಪಾನೀಯ ೩,ಫೋಟೋ: ೨೯ಪಿಟಿಆರ್-ಪಾನೀಯ ೪, | Kannada Prabha

ಸಾರಾಂಶ

ಕೇರಳ ಸರ್ಕಾರ ಜಾರಿಗೊಳಿಸಿದ ಕಡ್ಡಾಯ ಕಲಿಕೆಯ ಮಲಯಾಳಂ ಭಾಷಾ ಮಸೂದೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಲು ಗಡಿನಾಡು ಕಾಸರಗೋಡಿನ ಕನ್ನಡಿಗರು ನಿರ್ಧರಿಸಿದ್ದಾರೆ. ಇದಕ್ಕೆ ಕೋರ್ಟ್‌ ಹೋರಾಟಕ್ಕೆ ತಗಲುವ ವೆಚ್ಚ ಭರಿಸಲು ಧನಸಹಾಯ ಸಂಗ್ರಹದ ಮೊರೆ ಹೋಗಿದ್ದು, ಧನಸಂಗ್ರಹ ಅಭಿಯಾನ ಕೈಗೆತ್ತಿಕೊಂಡಿದ್ದಾರೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಕೇರಳ ಸರ್ಕಾರ ಜಾರಿಗೊಳಿಸಿದ ಕಡ್ಡಾಯ ಕಲಿಕೆಯ ಮಲಯಾಳಂ ಭಾಷಾ ಮಸೂದೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಲು ಗಡಿನಾಡು ಕಾಸರಗೋಡಿನ ಕನ್ನಡಿಗರು ನಿರ್ಧರಿಸಿದ್ದಾರೆ. ಇದಕ್ಕೆ ಕೋರ್ಟ್‌ ಹೋರಾಟಕ್ಕೆ ತಗಲುವ ವೆಚ್ಚ ಭರಿಸಲು ಧನಸಹಾಯ ಸಂಗ್ರಹದ ಮೊರೆ ಹೋಗಿದ್ದು, ಧನಸಂಗ್ರಹ ಅಭಿಯಾನ ಕೈಗೆತ್ತಿಕೊಂಡಿದ್ದಾರೆ.

ಈ ಹಿಂದೆ ಗಡಿನಾಡು ಅಡೂರಿನ ಅಂಗನವಾಡಿಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವೇಳೆಯೂ ಹೋರಾಟಕ್ಕೆ ಕನ್ನಡಿಗರು ಭಿಕ್ಷೆ ಎತ್ತಿದ್ದರು. ಮಾತ್ರವಲ್ಲ ಹೈಕೋರ್ಟ್‌ನಲ್ಲಿ ಕನ್ನಡ ಭಾಷಾ ಶಿಕ್ಷಕರ ನೇಮಕ ಆದೇಶ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅದೇ ಮಾದರಿಯಲ್ಲಿ ಗಡಿನಾಡಿನ ಎಲ್ಲ ಕನ್ನಡಿಗರು ಕನ್ನಡ ಉಳಿವಿಗಾಗಿ ಹೋರಾಟದ ಭಿಕ್ಷಾಟನೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಕೇರಳ ಪ್ರಾಂತ್ಯ ಕನ್ನಡ ಭಾಷಾ ಸಂರಕ್ಷಣಾ ಸಮಿತಿ ಹುಟ್ಟುಹಾಕಿದ್ದಾರೆ. ಏನಿದು ಮಸೂದೆ ತಂದ ಸಂಕಷ್ಟ?: ಕೇರಳಂ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಮಲಯಾಳಂ ಭಾಷೆ ಕಡ್ಡಾಯ ಮಸೂದೆಗೆ ಅಲ್ಲಿನ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದಾಗಿ ಮಸೂದೆ ಗಜೆಟ್‌ನಲ್ಲಿ ಪ್ರಕಟವಾಗಿ ಜಾರಿಗೊಳ್ಳಲು ಸನ್ನದ್ಧವಾಗಿದೆ. ಈ ಮಸೂದೆ ಜಾರಿಯಾದರೆ ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಶೈಕ್ಷಣಿಕವಾಗಿ ಭಾರಿ ತೊಂದರೆಯಾಗಲಿದೆ ಎನ್ನುವುದು ಕನ್ನಡಿಗರ ಆತಂಕ.

ಮಲಯಾಳಂ ಭಾಷಾ ಮಸೂದೆಯ ಸೆಕ್ಷನ್‌ 6 ರಲ್ಲಿ 1ರಿಂದ 10ನೇ ತರಗತಿ ವರೆಗೆ ಒಂದನೇ ಭಾಷೆಯಾಗಿ ಮಲಯಾಳಂನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳಲಾಗಿದೆ. ಸೆಕ್ಷನ್‌ 7 ‘ಬಿ’ ಪ್ರಕಾರ ಸೆಕ್ಷನ್‌ 6ರಲ್ಲಿ ಏನು ಹೇಳಿದ್ದಾರೋ ಅದನ್ನು ಮುಂದುವರಿಸಬೇಕು. ಅಲ್ಲದೆ ಮಲಯಾಳಂ ಭಾಷೆ ಅಲ್ಲದವರಿಗೆ ಅವರ ಮಾತೃ ಭಾಷೆಯನ್ನು ಕಲಿಯಲು ಅವಕಾಶ ಇದೆ ಎಂದು ನಮೂದಿಸಲಾಗಿದೆ. ಅಂದರೆ ಮಲಯಾಳಂ ಭಾಷೆ ಕಡ್ಡಾಯ ಮಾಡಿದರೂ ಕನ್ನಡ ಕಲಿಕೆಗೆ ತೊಡಕು ಇಲ್ಲ ಎಂದು ಸರ್ಕಾರವೇ ಸಮಜಾಯಿಷಿ ನೀಡಿದೆ. ಆದರೆ ಇದನ್ನು ಗಡಿನಾಡ ಕನ್ನಡಿಗರು, ಸಂಘಟನೆಗಳು, ಹೋರಾಟಗಾರರು ನಿರಾಕರಿಸುತ್ತಾರೆ.

ಕನ್ನಡಕ್ಕೆ ಪ್ರಾಧಾನ್ಯತೆ ಇಲ್ಲ?: ಸೆಕ್ಷನ್‌ 6ರ ಪ್ರಕಾರ ಮಲಯಾಳಂ ಭಾಷೆ ಕಡ್ಡಾಯ, ಆದರೆ ಸೆಕ್ಷನ್‌ 7 ಬಿ ಪ್ರಕಾರ ಕನ್ನಡವನ್ನೂ ಕಲಿಯಲು ಅವಕಾಶ ಇದೆ ಎಂದು ಹೇಳಲಾಗಿದೆ. ಅಂದರೆ ಈವರೆಗೆ ಇರುವಂತೆ ಗಡಿನಾಡ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷಾ ಕಲಿಕೆಗೆ ಅವಕಾಶ ಇತ್ತು. ಈಗ ಭಾಷಾ ಮಸೂದೆ ಜಾರಿ ಬಳಿಕ ಕನ್ನಡ ಬದಲು ಮಲಯಾಳಂ ಕಲಿಕೆ ಕಡ್ಡಾಯ, ಬಳಿಕ ಕನ್ನಡವನ್ನು ಐಚ್ಛಿಕ ವಿಷಯವಾಗಿ ಕಲಿಯಬೇಕಷ್ಟೆ ಇಲ್ಲವೇ ಮಲಯಾಳಂ, ಇಂಗ್ಲಿಷ್‌, ಹಿಂದಿ ಬಳಿಕ ಹೆಚ್ಚುವರಿಯಾಗಿ ಕನ್ನಡ ಭಾಷೆಯನ್ನು ಸೇರಿಸಲಾಗುತ್ತದೆಯೇ? ಅಥವಾ ಹಿಂದಿಯನ್ನು ಕೈಬಿಟ್ಟು ಅಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಸೇರ್ಪಡೆಗೊಳಿಸುದೇ ಎಂಬುದು ಸ್ಪಷ್ಟವಾಗಿಲ್ಲ. ಇದು ಕನ್ನಡಿಗರ ಗೊಂದಲಕ್ಕೆ ಕಾರಣವಾಗಿದೆ.

ಚುನಾವಣೆ ಬಳಿಕ ಹೋರಾಟ ಕಿಚ್ಚು?: ಪ್ರಸಕ್ತ ಕೇರಳಂನಲ್ಲಿ ಅಸೆಂಬ್ಲಿ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ಇವೆ. ಹಾಗಾಗಿ ಕನ್ನಡಪರ ಸಂಘಟನೆಗಳ ಹೋರಾಟ ಸದ್ಯದ ಮಟ್ಟಿಗೆ ಹಿಂದೆ ಸರಿದಿದೆ. ಏನಿದ್ದರೂ ಚುನಾವಣೆ ಮುಕ್ತಾಯಗೊಂಡ ಬಳಿಕ ಇದರ ಹೋರಾಟ ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಯುಡಿಎಫ್‌, ಎಲ್‌ಡಿಎಫ್‌ ಅಭ್ಯರ್ಥಿಗಳು ವೈಯಕ್ತಿಕವಾಗಿ ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂಬ ಮಾತನ್ನು ಆಡುತ್ತಿದ್ದಾರೆ. ಬಿಜೆಪಿ ಈಗಾಗಲೇ ಪ್ರತಿಭಟನೆ ನಡೆಸಿದೆ. ಈಗ ಚುನಾವಣೆಯಾದ್ದರಿಂದ ಧರಣಿ, ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗದು. ಹಾಗಾಗಿ ನ್ಯಾಯಯುತವಾಗಿಯೇ ಕೋರ್ಟ್‌ ಬಾಗಿಲು ತಟ್ಟುುವ ನಿರ್ಧಾರಕ್ಕೆ ಕನ್ನಡಿಗರು ಬಂದಿದ್ದಾರೆ.

ದಾವೆಯ ಪ್ರಕ್ರಿಯೆ ಸಿಂಗಲ್ ಬೆಂಚ್ ಅಥವಾ ಡಿವಿಜನ್ ಬೆಂಚ್ ಮುಂದೆ ನಡೆಯಬಹುದಾದ್ದರಿಂದ, ವಕೀಲರ ಶುಲ್ಕ, ದಾಖಲೆ ಸಿದ್ಧತೆ , ನ್ಯಾಯಾಲಯದ ವೆಚ್ಚಗಳು ಹಾಗೂ ಸಂಚಾರ ಖರ್ಚು ಸೇರಿದಂತೆ ವಿವಿಧ ರೀತಿಯ ವೆಚ್ಚಗಳು ಉಂಟಾಗಲಿವೆ. ಪ್ರಸ್ತುತ ಅಂದಾಜಿನ ಪ್ರಕಾರ ಕನಿಷ್ಠ 2 ಲಕ್ಷ ರು. ವರೆಗೆ ವೆಚ್ಚ ಬೇಕಾಗಬಹುದು ಎಂದು ಕನ್ನಡಿಗರು ನಿರ್ಧರಿಸಿ ಧನ ಸಂಗ್ರಹ ಅಭಿಯಾನಕ್ಕೆ ಇಳಿದಿದ್ದಾರೆ.

ನಮ್ಮ ಭಾಷೆ, ನಮ್ಮ ಹಕ್ಕು, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟದ ಒಂದು ಮಹತ್ವದ ಹಂತಕ್ಕೆ ನಾವು ಬಂದಿದ್ದೇವೆ. ಈ ಸದುದ್ದೇಶಕ್ಕಾಗಿ ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ನಾವು ಸಿದ್ಧರಾಗಿದ್ದೇವೆ. ಇದು ಕೇವಲ ಒಂದು ದಾವೆ ಅಲ್ಲ, ಇದು ನಮ್ಮ ಅಸ್ತಿತ್ವದ ಪ್ರಶ್ನೆ, ನಮ್ಮ ಭವಿಷ್ಯದ ಹೋರಾಟ. ಏ.10 ರೊಳಗೆ ಹೈಕೋರ್ಟ್‌ಗೆ ರಿಟ್‌ ದಾಖಲಿಸುತ್ತೇವೆ.

-ಮುರಳೀಧರ ಬಳ್ಳಕುರಾಯ, ಅಧ್ಯಕ್ಷರು, ಕಾಸರಗೋಡು ಕರ್ನಾಟಕ ಸಮಿತಿ

--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶನಿವಾರಸಂತೆ ಶ್ರದ್ಧಾಭಕ್ತಿಯ ಶ್ರೀರಾಮನವಮಿ
ಕುಂಜಿಬೆಟ್ಟು ರುಕ್ಮಿಣಿ ಸತ್ಯಭಾಮಾ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ