ಹುಬ್ಬಳ್ಳಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 195ನೇ ಹುತಾತ್ಮ ದಿನಾಚರಣೆ ಅಂಗವಾಗಿ ಜ.26 ರಂದು ಸಂಜೆ 6ಕ್ಕೆ ಚೆನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಹೇಳಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಮಾರಂಭದಲ್ಲಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದ ಕನ್ನಡಪ್ರಭ ಪತ್ರಿಕೆಯ ಮುಖ್ಯ ಉಪಸಂಪಾದಕ ಮಹೇಶ ಅರಳಿ ಸೇರಿದಂತೆ 11 ಪತ್ರಕರ್ತರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.ಉಳಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಗಲಕೋಟೆ ಜಿಲ್ಲೆಯ ಪ್ರಕಾಶ ಮುಧೋಳ, ರಾಯಪ್ಪ ಅಬ್ಬಣ್ಣವರ, ಕುಂದಗೋಳ ತಾಲೂಕಿನ ನಾಲ್ವರಿಗೆ, ನವಲಗುಂದ ತಾಲೂಕಿನ ಎಂಟು ಸಾಧಕರಿಗೆ, ಅಣ್ಣಿಗೇರಿ ತಾಲೂಕಿನ ಇಬ್ಬರಿಗೆ, ಧಾರವಾಡ ತಾಲೂಕಿನ ನಾಲ್ವರಿಗೆ, ಹುಬ್ಬಳ್ಳಿ ತಾಲೂಕಿನ ನಾಲ್ವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ತಾರಾದೇವಿ ವಾಲಿ, ಸಾರಿಕಾ ರಜಪೂತ, ತಸ್ಲಿಮಾಬಾನು ಗುಡಿಹಾಳ, ವೀಣಾ ಹಿರೇಮಠ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ತಾಲೂರ, ವಿಜಯಕುಮಾರ ಅಪ್ಪಾಜಿ, ಗುರು ಚಲವಾದಿ, ಜಗದೀಶ ರಿತ್ತಿ ಇದ್ದರು.