ಕನ್ನಡಪ್ರಭ ವಾರ್ತೆ ನಾಪೋಕ್ಲು
ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ತು ನಾಪೋಕ್ಲು ಹೋಬಳಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನಾಪೋಕ್ಲು ಇವರ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಲ್ಲಿಯ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಶಾಲಾ ಪ್ರಾಂಶುಪಾಲರಾದ ನೀತಾ ಕೆ.ಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯ ಮೂಲಕ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಿರೆನ್ನುವ ಕಿವಿಮಾತನ್ನು ಹೇಳುತ್ತಾ ತಮ್ಮ ಶೈಕ್ಷಣಿಕ ಪ್ರಗತಿಯಲ್ಲಿ ಗುರಿ ತಲುಪಿ ದೇಶ-ವಿದೇಶಗಳಲ್ಲಿ ಹೆಸರುಗಳಿಸಿರೆಂದು ಆಶಿಸಿದರು.
ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಇವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮೊಳಗೆ ಅಡಗಿರುವ ಕಲೆಯನ್ನು ಹೊರತರಲು ಇಂತಹ ಸಂಭ್ರಮಾಚರಣೆಗಳು ಅವಶ್ಯಕ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಬಾಳೆಯಡ ದಿವ್ಯಾ ಮಂದಪ್ಪ ಮಾತನಾಡಿ ವಿದ್ಯಾರ್ಥಿಗಳ ಶಿಸ್ತು ಶಿಕ್ಷಣ ಮತ್ತು ಗುರಿ ಸಾಧನೆಗೆ ದಾರಿಯಾಗುವುದು ಎಂದು ಹೇಳಿದರು.
ಹಾಗೂ ನಾಪೋಕ್ಲು ಹೋಬಳಿಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೆರವಂಡ ಉಮೇಶ್ ಇವರು ರಾಜ್ಯೋತ್ಸವದ ಕುರಿತು ಮಾತನಾಡಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹರಸಿದರು.ಕನ್ನಡ ಶಿಕ್ಷಕಿ ರೂಪ ಮಾತನಾಡಿ ಕನ್ನಡದ ಹೆಸರು ಜಗಕೆ ಸಾರುವಂತೆ ಮಾಡಿದ ಕನ್ನಡದ ಕವಿಪುಂಗವರನ್ನು ನೆನಪಿಸಿಕೊಂಡರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಕವನ ರಚನೆ, ಚಿತ್ರಕಲೆ ಹಾಗೂ ಸಮೂಹ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ದೈಹಿಕ ಶಿಕ್ಷಣ ಶಿಕ್ಷಕಿ ಶ್ಯಾಮಿಲಿ ಇವರು ಬಹುಮಾನ ವಿಜೇತರನ್ನು ತಿಳಿಸಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಲಾಯಿತು.ಹಾಗೆಯೇ ವಿದ್ಯಾರ್ಥಿಗಳಿಂದ ಕರ್ನಾಟಕವನ್ನು ಹೊಗಳಿ ಕೊಂಡಾಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವೃಂದದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ನಿಶಾ ಪ್ರಾರ್ಥಿಸಿದರು, ಕೀರ್ತನ ಸ್ವಾಗತಿಸಿ, ಅಂಜಲಿ ನಿರೂಪಿಸಿ ಪ್ರೀತೇಶ್ ವಂದಿಸಿದರು.