ರಾಮನಗರ: ನಗರಸಭೆ ವತಿಯಿಂದ ನವೆಂಬರ್ 3ನೇ ವಾರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ರಾಜ್ಯೋತ್ಸವ ವೇದಿಕೆಯಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪರಿಗೆ ಪೌರ ಸನ್ಮಾನ ನೀಡಿ ಗೌರವಿಸುವುದಾಗಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಾಧನೆ ಗೈದವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವದ ವೇಳೆ ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು 30ನೇ ವಾರ್ಡ್ ಸದಸ್ಯೆ ಪಾರ್ವತಮ್ಮ, 6ನೇ ವಾರ್ಡ್ ಸದಸ್ಯ ಸೋಮಶೇಖರ್ (ಮಣಿ), 25ನೇ ವಾರ್ಡ್ ಸದಸ್ಯ ಮುತ್ತುರಾಜ್, 28ನೇ ವಾರ್ಡ್ ಸದಸ್ಯ ಮಂಜುನಾಥ್ ಅವರನ್ನು ಒಳಗೊಂಡಂತೆ ಅಧ್ಯಕ್ಷರ ಒಪ್ಪಿಗೆ ಮೇರೆಗೆ ಇತರ ಮೂವರನ್ನು ಒಳಗೊಂಡ ಸಮತಿ ರಚಿಸಲು ಸಭೆಯಲ್ಲಿ ಒಪ್ಪಿಗೆ ದೊರೆಯಿತು.
ಸಭೆಯಲ್ಲಿ 6ನೇ ವಾರ್ಡಿನ ಸದಸ್ಯ ಸೋಮಶೇಖರ್ (ಮಣಿ) ಮಾತನಾಡಿ, ರಾಮನಗರದ ಮೇಯಿನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಜೆ.ಪಿ.ರಾಜರತ್ನಂ ಅವರನ್ನು ಸ್ಮರಿಸಬೇಕಾಗಿದೆ. ಹೀಗಾಗಿ ರಾಜ್ಯೋತ್ಸವ ಆಚರಣೆಯ ವೇದಿಕೆಗೆ ಜೆ.ಪಿ.ರಾಜರತ್ನಂ ಅವರ ಹೆಸರು ನಾಮಕರಣ ಮಾಡಬೇಕು. ರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದ ಹೆಬ್ಬಾಗಿಲಿಗೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಹೆಸರಿಡುವಂತೆ ಸಲಹೆ ನೀಡಿದರು.ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.
6ಕೆಆರ್ ಎಂಎನ್ 6.ಜೆಪಿಜಿರಾಮನಗರ ನಗರಸಭೆಯ ಪ್ರಶಸ್ತಿ ಭವನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ತುರ್ತು ಸಭೆ ನಡೆಯಿತು.