ಕನ್ನಡ ಸಾಹಿತ್ಯ ಪರಿಷತ್‌ನಿಂದ ಕೃಷಿ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Jun 1, 2025 11:51 PM
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ರೈತಸಂಘ, ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೃಷಿ ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ವಿಚಾರ ಸಂಕಿರಣವನ್ನು ನಗರದ ಕಲ್ಪತರು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜೂ.೭ ಮತ್ತು ೮ರಂದು ಬೆ.೧೦ರಿಂದ ಸಂಜೆ ೫ ರವರೆಗೆ ನಡೆಯಲಿದೆ ಎಂದು ಕಸಾಪ ತಾ. ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ರೈತಸಂಘ, ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೃಷಿ ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ವಿಚಾರ ಸಂಕಿರಣವನ್ನು ನಗರದ ಕಲ್ಪತರು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜೂ.೭ ಮತ್ತು ೮ರಂದು ಬೆ.೧೦ರಿಂದ ಸಂಜೆ ೫ ರವರೆಗೆ ನಡೆಯಲಿದೆ ಎಂದು ಕಸಾಪ ತಾ. ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಸಾಪದಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಮಕ್ಕಳ ಮತ್ತು ಮಹಿಳಾ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿತ್ತು. ಆದರೆ ಈಗ ವಿನೂತನವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿ, ಉಳಿವಿಗಾಗಿ ಹಾಗೂ ಕೃಷಿಯಿಂದ ವಿಮುಖರಾಗುತ್ತಿರುವ ಯುವಕರನ್ನು ಕೃಷಿ ಕ್ಷೇತ್ರದತ್ತ ಮುಖ ಮಾಡುವಂತೆ ಮಾಡಲು ಒಂದು ಪ್ರಯತ್ನವಾಗಿ ವಿಚಾರ ಸಂಕೀರಣದ ಸ್ವರೂಪದಲ್ಲಿ ಕೃಷಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕೃಷಿ ಕಷ್ಟದ ಕೆಲಸ ಎಂದು ಯುವಕರು ನಗರಪ್ರದೇಶಗಳತ್ತ ಹೋಗುತ್ತಿರುವ ಕಾರಣ ಹಳ್ಳಿಗಳು ವೃದ್ಧರ ಆಶ್ರಮಗಳಾಗುತ್ತಿವೆ. ಈ ಎಲ್ಲಾ ಕೃಷಿ ಸಮಸ್ಯೆಗಳನ್ನು ಆಲಿಸಿ ನಮ್ಮ ಕಸಾಪದಿಂದ ಮೊದಲ ಬಾರಿಗೆ ಕೃಷಿ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಹಳ್ಳಿಗಳ ಕೃಷಿ ಸಮಸ್ಯೆ ಬಗ್ಗೆ ಚರ್ಚಿಸಲು ಐದು ಗೋಷ್ಠಿಗಳನ್ನು ಏರ್ಪಡಿಸಿದ್ದು ವಿವಿಧ ವಿಷಯಗಳ ಬಗ್ಗೆ ತಜ್ಞರು, ವಿಜ್ಞಾನಿಗಳು ಹಾಗೂ ಅನುಭವಿ ರೈತರುಗಳಿಗೆ ಯುವಕರಿಗೆ ಮಾಹಿತಿ ನೀಡಲಾಗುವುದು. ಯುವ ರೈತರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿರುವ ಕಾರಣ ಉತ್ತಮ ಕೃಷಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಮ್ಮೇಳನದ ಉದ್ಘಾಟನೆಯನ್ನು ಶಾಸಕ ಕೆ. ಷಡಕ್ಷರಿ ನೆರವೇರಿಸಲಿದ್ದು ಕೇಂದ್ರ ಸಾಹಿತ್ಯ ಅಕಾಡಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನಕ್ಕೆ ಯುವ ರೈತರು ಹೆಚ್ಚು ಭಾಗವಹಿಸಲೆಂಬ ಕಾರಣಕ್ಕೆ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿಯೂ ಕರಪತ್ರಗಳನ್ನು ವಿತರಿಸಲಾಗಿದೆ. ಎರಡು ದಿನಗಳು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿಯುವ ಯುವಕರು, ರೈತರು ಭಾಗವಹಿಸುವ ಮೂಲಕ ಇಲ್ಲಿನ ಮಂಡನೆಯಾಗುವ ವಿಷಯಗಳನ್ನು ಆಧರಿಸಿ ಕೃಷಿ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಕಸಾಪ ಕಾರ್ಯದರ್ಶಿ ಶಂಕರಪ್ಪ, ಹೋಬಳಿ ಘಟಕದ ಅಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ, ರೈತ ಸಂಘದ ತಾ. ಅಧ್ಯಕ್ಷ ಜಯಾನಂದಯ್ಯ, ಕದಳಿ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ, ಮಂಜಪ್ಪ, ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ಮತ್ತಿತರಿದ್ದರು. ಕೋಟ್‌...

ಇಂದಿನ ದಿನಗಳಲ್ಲಿ ಕೃಷಿಯಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವು ಪ್ರದೇಶದಲ್ಲಿ ಆಧುನಿಕ ಕೃಷಿ ಜೊತೆಗೆ ಹೊಸ ಹೊಸ ಪ್ರಯೋಗದ ಮೂಲಕ ಯುವಕರು ಸಹ ಯಶಸ್ಸು ಸಾಧಿಸಿದ್ದಾರೆ. ಆದರೆ ಬಹುತೇಕ ಕೃಷಿ ಪ್ರದೇಶಗಳು ಇನ್ನೂ ಹಾಗೆ ಇವೆ. ಇವೆಲ್ಲವನ್ನೂ ಎಲ್ಲರಿಗೂ ತಿಳಿಸುವ ಹಾಗೂ ಅಲ್ಲಿ ಹೊಸ ರೂಪದಲ್ಲಿ ಕೃಷಿಯನ್ನು ಹಾಗೂ ಸಾಹಿತ್ಯವನ್ನು ನೋಡುವ ಸಣ್ಣ ಪ್ರಯತ್ನವೇ ಈ ಕೃಷಿ ಸಾಹಿತ್ಯ ಸಮ್ಮೇಳನ.

- ಬಸವರಾಜಪ್ಪ , ಅಧ್ಯಕ್ಷರು ತಾಲೂಕು ಕಸಾಪ ತಿಪಟೂರು.