ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಮೇ 17 ರಂದು ಲಾಯಿಲ ಗ್ರಾಮದ ಅರಳಿ ಎಂಬಲ್ಲಿರುವ ರೋಟರಿ ಭವನದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ. ಪ್ರಕಾಶ ಪ್ರಭು ತಿಳಿಸಿದ್ದಾರೆ.
ಮೊದಲನೇ ಗೋಷ್ಠಿಯಲ್ಲಿ ಉಜಿರೆ ಶ್ರೀ ಧ.ಮಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಳೆಮನೆ ರಾಜಶೇಖರ್ ಅವರು ಹೊಸ ತಲೆಮಾರು ಮತ್ತು ಓದಿನ ಅಭಿರುಚಿ ಬಗ್ಗೆ, ಪ್ರಾಧ್ಯಾಪಕ ದಿವಾಕರ ಕೊಕ್ಕಡ ಅವರು ಮನುಜ ಮತ ವಿಶ್ವ ಪಥ ಎಂಬ ಕುರಿತು, ಜನಪದ ವಿದ್ವಾಂಸ ರವೀಶ ಪಡುಮಲೆ ಅವರು ತುಳುನಾಡಿನ ದೈವಾರಾಧನೆಯ ಆಗು ಹೋಗುಗಳ ವಿಚಾರವಾಗಿ ಮಾತನಾಡಲಿದ್ದಾರೆ. ಈ ಸಂದರ್ಭ ಡಾ. ಪ್ರಕಾಶ ಪ್ರಭು ಅವರ ಕಥಾ ಸಂಕಲನ ಬಿಡುಗಡೆಗೊಳ್ಳಲಿದೆ ಎಂದರು.ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಅತ್ಯುತ್ತಮ ತಂಡಕ್ಕೆ ನಗದು ಬಹುಮಾನವಿದೆ. ಸ್ಪರ್ಧೆಯು ತಂಡವಾಗಿ ಇರುತ್ತದೆ. ತಂಡದಲ್ಲಿ ಕನಿಷ್ಠ 7 ಮಂದಿ ಇರಬೇಕು. ಸಮವಸ್ತ್ರ ಧರಿಸಿರಬೇಕು. ನಾಡಹಬ್ಬಕ್ಕೆ ಪೂರಕವಾಗಿ ಪ್ರದರ್ಶನ ಇರಬೇಕು. ಬೆಳಿಗ್ಗೆ 9.30 ರಿಂದ ಸಂಜೆ ತನಕ ತಂಡ ಇರಬೇಕು. ಅಪರಾಹ್ನ ಸಮೂಹ ಫೊಟೊ ತೆಗೆದು ಅಥವಾ ರೀಲ್ಸ್ ಮಾಡಿ 9448060206 ಸಂಖ್ಯೆಗೆ ಕಳುಹಿಸಬೇಕು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಡಾ.ಯದುಪತಿ ಗೌಡ, ಸಂಚಾಲಕ ಬಿ. ಸೋಮಶೇಖರ ಶೆಟ್ಟಿ ಇದ್ದರು.